ಅಡೂರು ವಿದ್ಯಾಬಾರತಿ ವಿದ್ಯಾಲಯದಲ್ಲಿ ಸಹವಾಸ ಶಿಬಿರ-ಶಿಬಿರಗಳಿಂದ ಹೊಸ ವಿಚಾರಗಳ ಪರಿಚಯ - ವಿರಾಜ್ ಅಡೂರು
0
ಮಾರ್ಚ್ 26, 2019
ಮುಳ್ಳೇರಿಯ : ಶಾಲೆಗಳಲ್ಲಿ ನಡೆಯುವ ಸಹವಾಸ ಶಿಬಿರಗಳಿಂದ ಮಕ್ಕಳಿಗೆ ಅನೇಕ ಉತ್ತಮ ವಿಚಾರಗಳ ಪರಿಚಯವಾಗುತ್ತದೆ. ಕೂಡುಕುಟುಂಬದಂತೆ ನಡೆಯುವ ಈ ಶಿಬಿರಗಳಿಂದ ಮಕ್ಕಳಲ್ಲಿ ದೃಢಚಿತ್ತದ ಶಕ್ತಿ ಹಾಗೂ ಯಾವುದೇ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿಕೊಳ್ಳುವ ಮಾನಸಿಕ ಬಲ ಸಿದ್ಧಿಸುತ್ತದೆ ಎಂದು ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ಹೇಳಿದರು.
ಅವರು ಮಂಗಳವಾರ ಅಡೂರಿನ ವಿದ್ಯಾಭಾರತಿ ವಿದ್ಯಾಲಯದಲ್ಲಿ ಆರಂಭವಾದ 3 ದಿನಗಳ ಸಹವಾಸ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಬಾಲ್ಯದ ಜೀವನವೇ ಕಲಿಕೆಯ ರಹದಾರಿಯ ಮಾರ್ಗವಾಗಿದೆ. ಈ ವಯಸ್ಸಿನಲ್ಲಿ ಸಾಧ್ಯವಾದಷ್ಟು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಅರಗಿಸಿಕೊಳ್ಳಬೇಕು. ಅವುಗಳನ್ನು ಕರಗತ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ಯಾವುದೇ ಕಲೆಯನ್ನು ಕರಗತ ಮಾಡಿಕೊಳ್ಳಲು ಸತತ ಶ್ರಮ ಹಾಗೂ ಆಸಕ್ತಿ ಮುಖ್ಯ. ಇದಕ್ಕೆ ಶಾಲೆಗಳಲ್ಲಿ ನಡೆಯುವ ಸಹವಾಸ ಶಿಬಿರಗಳು ಪೂರಕ ವಾತಾವರಣವನ್ನು ಸೃಷ್ಟಿಸುತ್ತವೆ ಎಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಿದ್ಯಾಭಾರತೀ ವಿದ್ಯಾಲಯ ಸಮಿತಿ ಅಧ್ಯಕ್ಷೆ ಪ್ರೇಮಾ ಎಂ ಭಾರಿತ್ತಾಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾಭಾರತಿ ವಿದ್ಯಾಲಯದ ಉಪಾಧ್ಯಕ್ಷ ವೆಂಕಟ್ರಾಜ್, ಶಿಕ್ಷಕಿಯರಾದ ಸುಶ್ಮಿತಾ, ಮಿನಿ, ಸ್ಮಿತಾ, ಭಾರತಿ, ರಾಜಶ್ರೀ, ಇಂದಿರಾ, ಚೈತ್ರಾ, ಹಿರಿಯ ವಿದ್ಯಾರ್ಥಿನಿಯರಾದ ಅಭಿರಕ್ಷಾ, ಚೈತ್ರಾ, ಶಿಬಿರದ ಸಂಯೋಜಕಿ, ಶಿಕ್ಷಕಿ ಶಾರದಾ ಭಟ್ ಬೈತನಡ್ಕ ಉಪಸ್ಥಿತರಿದ್ದರು. ಶಿಕ್ಷಕಿ ಪ್ರೇಮಾವತಿ ಸ್ವಾಗತಿಸಿ, ಶಿಕ್ಷಕಿ ಸ್ವಾತಿ ವಂದಿಸಿದರು. ಬಾಲಸುಬ್ರಹ್ಮಣ್ಯ ಭಟ್ ಬೈತನಡ್ಕ ಕಾರ್ಯಕ್ರಮ ನಿರೂಪಿಸಿದರು.
ಸಹವಾಸ ಶಿಬಿರದಲ್ಲಿ ವ್ಯಂಗ್ಯಚಿತ್ರ ರಚನೆಯ ಬಗ್ಗೆ ವಿರಾಜ್ ಅಡೂರು, ಚಿತ್ರಕಲೆಯ ಬಗ್ಗೆ ಅನಿತಾ ಮುಳ್ಳೇರಿಯ, ನೃತ್ಯ ಭಜನೆಯ ಕುರಿತು ಪ್ರತೀಕ್ ಹಾಗೂ ರಘು, ಗೀತಗಾಯನದ ಕುರಿತು ಶಾರದಾ ಭಟ್ ಬೈತನಡ್ಕ, ಅಭಿರಕ್ಷಾ, ಚೈತ್ರಾ ತಂಬಿನಡ್ಕ, ಮಕ್ಕಳಿಗಾಗಿ ನಡೆದ ಬೌದ್ಧಿಕ ಆಟೋಟಗಳು ನೇತೃತ್ವವನ್ನು ರಮೇಶ್ ಗೋರಿಗದ್ದೆ ನಡೆಸಿದರು. ಬುಧವಾರದ ಶಿಬಿರದಲ್ಲಿ ಚುಟುಕು ರಚನೆಯ ಬಗ್ಗೆ ವಿರಾಜ್ ಅಡೂರು, ಅಭಿನಯ ಸಹಿತ ಪುರಾಣ ಕಥೆಗಳ ಕುರಿತು ಲಕ್ಷ್ಮಣ ಪೊನಾರಂ ತರಬೇತಿ ನೀಡಲಿದ್ದಾರೆ. ಮಾ.28ರಂದು ಅಪರಾಹ್ನ 2ರಿಂದ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ.

