ಶಾರದಾ ಚಿಟ್ ಫಂಡ್ ಹಗರಣ: ಸಿಬಿಐ ವರದಿಯಲ್ಲಿ ಗಂಭೀರ ಅಂಶಗಳು ಬಹಿರಂಗ-ಸುಪ್ರೀಂ ಕೋರ್ಟ್
0
ಮಾರ್ಚ್ 26, 2019
ನವದೆಹಲಿ: ಶಾರದಾ ಚಿಟ್ ಫಂಡ್ ಹಗರಣದ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿರುವ ವರದಿಯಲ್ಲಿ ಗಂಭೀರ ಅಂಶಗಳು ಬಹಿರಂಗವಾಗಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಿಬಿಐ ತನಿಖೆಯ ಸ್ಥಿತಿಗತಿ ವರದಿಯಲ್ಲಿ, ತಾನು ಇತ್ತೀಚೆಗಷ್ಟೇ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರ ವಿಚಾರಣೆ ನಡೆಸಿದ್ದರ ವಿವರಣೆಯನ್ನು ನೀಡಿತ್ತು.
ಸ್ಥಿತಿಗತಿ ವರದಿ ನೋಡಿರುವ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ, ಅತ್ಯಂತ ಗಂಭೀರ ಅಂಶಗಳು ಬಹಿರಂಗಗೊಂಡರೆ ತಾನು ಕಣ್ಣುಮುಚ್ಚಿ ಕುಳಿತುಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲದೇ ಈ ಹಿಂದೆ ಹಗರಣದ ತನಿಖೆಯ ಹೊಣೆ ಹೊತ್ತಿದ್ದ ಎಸ್ ಐ ಟಿ ಮುಖ್ಯಸ್ಥರಾಗಿದ್ದ ರಾಜೀವ್ ಕುಮಾರ್ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಕ್ಕೆ ನಿರ್ದೇಶನ ಕೋರಿ 10 ದಿನಗಳ ಒಳಗಾಗಿ ಮನವಿ ಸಲ್ಲಿಸಲು ಸೂಚನೆ ನೀಡಿದೆ. ಅರ್ಜಿ ಸಲ್ಲಿಸಿದ 7 ದಿನಗಳ ಒಳಗಾಗಿ ರಾಜೀವ್ ಕುಮಾರ್ ಅದಕ್ಕೆ ಪ್ರತಿಕ್ರಿಯೆ ನೀಡಬಹುದಾಗಿದೆ.
ಹಗರಣದ ತನಿಖೆಗೆ ಸಂಬಂಧಿಸಿದಂತೆ ಮುಚ್ಚಿದ ಲಕೋಟೆಯಲ್ಲಿ ಸಿಬಿಐ ವರದಿ ನೀಡಿರುವುದರಿಂದ ಮತ್ತೊಂದು ಪಕ್ಷದವರ ವಾದ ಆಲಿಸದೇ ಈ ತಕ್ಷಣವೇ ಯಾವುದೇ ಆದೇಶ ಹೊರಡಿಸುವುದಕ್ಕೆ ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

