ಲೋಕಸಭಾ ಚುನಾವಣೆ-ಕಾಸರಗೋಡಿನ ಜನತೆಯ ಹಾರೈಕೆ
0
ಮಾರ್ಚ್ 12, 2019
ಜನಮನ:
ಬದಿಯಡ್ಕ: ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲೊಂದಾಗಿರುವ ಭಾರತದಲ್ಲಿ ಎಪ್ರಿಲ್ ಮೇ ತಿಂಗಳುಗಳಲ್ಲಿ ಉತ್ಸವ ಕಾಲ. ಲೋಕಸಭಾ ಚುನಾವಣೆ2019 ವೇಳಾಪಟ್ಟಿ ಈಗಾಗಲೇ ಘೋಷಣೆಯಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಆಯಾಯ ಕ್ಷೇತ್ರದ ಜನರನ್ನು ಪ್ರತಿನಿಧಿಸುವ , ಜನರ ಆಶೋತ್ತರಗಳಿಗೆ ಸ್ಪಂದಿಸುವ ಪ್ರತಿನಿಧಿಗಳು ಆಯ್ಕೆಯಾದಾಗ ಮಾತ್ರ ಪ್ರಜಾಪ್ರಭುತ್ವದ ಯಶನ್ನಿನ ಮೊದಲ ಮೆಟ್ಟಿಲಾಗುತ್ತದೆ. ಆಯ್ಕೆಗೊಂಡ ಪ್ರತಿನಿಧಿಗಳು ಕ್ಷೇತ್ರದ ಜನರ ಜೀವನದ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಶ್ರಮಿಸಬೇಕು, ಜನರ ಭಾಷೆ, ಸಂಸ್ಕøತಿಗಳಿಗೆ ಧಕ್ಕೆಯಾಗುವ ವಿಚಾರಗಳು ಬಂದಾಗ ಅದರ ವಿರುದ್ಧ ನಿಂತು ಜನರಿಗೆ ರಕ್ಷಣೆ ನೀಡಬೇಕು. ಹಾಗಾದಾಗ ಮಾತ್ರವೇ ಭಾರತದ ವೈವಿಧ್ಯತೆಯಲ್ಲಿ ಏಕತೆ ಉಳಿಯಲು ಸಾಧ್ಯವಾಗುತ್ತದೆ.
ಕಾಸರಗೋಡು ಕೇರಳದಲ್ಲಿ ಕನ್ನಡ ಭಾಷಾ ಅಲ್ಪಸಂಖ್ಯಾಕ ಪ್ರದೇಶವೆಂದು ಘೋಷಿಸಲ್ಪಟ್ಟು ಸಂವಿಧಾನಬದ್ಧ ರಕ್ಷಣೆಗೆ ಅರ್ಹತೆ ಪಡೆದಿರುವ ಪ್ರದೇಶ. ಕಾಸರಗೋಡಿನಲ್ಲಿ ಕನ್ನಡಿಗರೇ ಬಹುಸಂಖ್ಯಾತರಾಗಿದ್ದೂ ಕನ್ನಡಿಗರನ್ನು ರಾಜಕೀಯ ಪಕ್ಷಗಳು ಕಡೆಗಣಿಸುತ್ತಿವೆಯೋ ಅನಿಸುತ್ತಿದೆ. ಅಥವಾ ವಿವಿಧ ಪಕ್ಷಗಳಲ್ಲಿ ಹಂಚಿದಂತಿರುವ ಕಾರ್ಯಕರ್ತರಾಗಿ ದುಡಿಯುತ್ತಿರುವ ಕನ್ನಡಿಗರು ತಮ್ಮ ಪಕ್ಷದಲ್ಲಿ ಪ್ರಭಾವಶಾಲಿಗಳಾಗಿಲ್ಲವೇ ಎಂಬ ಅನುಮಾನ ಕಾಡುತ್ತಿದೆ. ಏಕೆಂದರೆ ಪ್ರಮುಖ ಪಕ್ಷಗಳಿಂದ ಕಾಸರಗೋಡು ಕ್ಷೇತ್ರಗಳಲ್ಲಿ ಕನ್ನಡಿಗ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವಂತೆ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ? ಗೆಲ್ಲುವ ಎಲ್ಲಾ ಸಾಧ್ಯತೆಗಳಿರುವ ಕನ್ನಡಿಗ ನೇತಾರರು ಎಲ್ಲ ಪಕ್ಷಗಳಲ್ಲೂ ಮೇಲ್ನೋಟಕ್ಕೇ ಕಾಣಿಸಿಕೊಳ್ಳುತ್ತಾರೆ. ಆದರೂ ತೆಂಕಣದಿಂದ ಆಮದು ಅಭ್ಯರ್ಥಿಗಳೇ ಕಣಕ್ಕಿಳಿಯುತ್ತಿರುವುದು ಸ್ಥಳೀಯ ತುಳು-ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವಲ್ಲವೇ? ಸ್ಥಳೀಯ ತುಳು/ಕನ್ನಡಿಗ ಅಭ್ಯರ್ಥಿಗಳೇ ಆಯ್ಕೆಯಾಗಿ ಬಂದಾಗ ಮಾತ್ರ ಇಲ್ಲಿನ ಜನರಿಗೆ ಆಗುತ್ತಿರುವ ಭಾಷಾ ತೊಂದರೆಗಳು, ಅಭಿವೃದ್ಧಿ ಕಾರ್ಯಗಳಿಗೆ ಎದುರಾಗುವ ತೊಡಕುಗಳನ್ನು ನಿವಾರಿಸಲು, ಎಲ್ಲಾ ಸಮಸ್ಯೆಗಳನ್ನೂ ತಿಳಿದು ಪರಿಹರಿಸಲು ಹಾಗೂ ಕ್ಷೇತ್ರದ ಅವಶ್ಯಕತೆಗಳನ್ನು ಸುಲಭದಲ್ಲಿ ಅರಿತು ಪೂರೈಸಲು ಸಾಧ್ಯ. ಹಾಗಾಗಿ ಎಲ್ಲಾ ರಾಜಕೀಯ ಪಕ್ಷಗಳೂ, ಪಕ್ಷಗಳ ಕಾರ್ಯಕರ್ತರೂ, ಕಾಸರಗೋಡು ಕ್ಷೇತ್ರದ ಜನರೂ ಈ ನಿಟ್ಟಿನಲ್ಲಿ ಯೋಚಿಸಿ, ಸ್ಥಳೀಯ ಕನ್ನಡ(ತುಳು) ಅಭ್ಯರ್ಥಿಗಳೇ ಆಯ್ಕೆಯಾಗುವಂತೆ ಮಾಡಬೇಕು.
-ಕಾಸರಗೋಡಿನ ಮತದಾರರು

