ಬದಿಯಡ್ಕ: ಇನ್ನು ಮುಂದೆ ಒಂದೇ ಒಂದು ಹನಿ ಮಳೆನೀರು ಪೋಲಾಗಬಾರದು ಎಂಬ ನಿಟ್ಟಿನಲ್ಲಿ ಮುಳಿಯಾರು ಗ್ರಾಮಪಂಚಾಯತ್ ನಡೆಸುತ್ತಿರವ ಚಟುವಟಿಕೆಗಳು ಜನಮನ್ನಣೆಗೆ ಪಾತ್ರವಾಗುತ್ತಿವೆ.
ಈ ನಿಟ್ಟಿನಲ್ಲಿ ಪಂಚಾಯತ್ ಮಟ್ಟದಲ್ಲಿ ಮಳೆನೀರು ಸಂಗ್ರಹ ಉದ್ದೇಶದಿಂದ 400ಕ್ಕೂ ಅಧಿಕ ಇಂಗುಗುಂಡಿಗಳನ್ನು ಸಿದ್ಧಪಡಿಸಲಾಗಿದೆ. ಉಳಿದಂತೆ 500 ಇಂಗುಗುಂಡಿಗಳ ನಿರ್ಮಾಣ ಕಾಮಗಾರಿ ಈ ತಿಂಗಳಕೊನೆಯಲ್ಲಿ ಪೂರ್ಣಗೊಳ್ಳಲಿದೆ ಎಂದು ಪಂಚಾಯತ್ ಪದಾಧಿಕಾರಿಗಳು ತಿಳಿಸಿರುವರು.
ಹರಿದು ಹೋಗುವ ಮಳೆ ನೀರನ್ನು ಇಂಗುಗುಂಡಿಗಳ ಮೂಲಕ ಭೂಮಿಯಡಿ ಇಳಿಯುವಂತೆ ಮಾಡಿ ಭೂಗರ್ಭ ಜಲ ಮಟ್ಟವನ್ನು ಹೆಚ್ಚಿಸುವುದು ಇಲ್ಲಿನ ಉದ್ದೇಶ. ಇದು ಕಡು ಬೇಸಗೆಯಲ್ಲೂ ಕೆರೆಗಳಲ್ಲಿ, ಬಾವಿಗಳಲ್ಲಿ ನೀರು ಬತ್ತಿಹೋಗದಂತೆ ಒಂದು ಹಂತದ ವರೆಗೆ ತಡೆಯಲೂ ಸಹಕಾರಿಯಾಗಿದೆ.
ಪ್ರತಿವರ್ಷವೂ ಮುಳಿಯಾರು ಗ್ರಾಮಪಂಚಾಯತ್ ನಲ್ಲಿ ಮಳೆನೀರ ಇಂಗುಗುಂಡಿಗಳನಿರ್ಮಾಣ ಪ್ರಕ್ರಿಯೆ ನಡೆಯುತ್ತದೆ. ಮಳೆಗಾಲಕ್ಕೆ ಮುನ್ನ(ಮಾರ್ಚ್ ತಿಂಗಳ ಕೊನೆಯಲ್ಲಿ) ಪಂಚಾಯತ್ ಅಧ್ಯಕ್ಷರ ಮತ್ತು ಕಾರ್ಯದರ್ಶಿಯ ನೇತೃತ್ವದಲ್ಲಿ ವಾರ್ಡ್ ಮಟ್ಟದಲ್ಲಿ ಮಳೆನೀರು ಸಂಗ್ರಹ, ಇಂಗುಗುಂಡಿಗಳ ನಿರ್ಮಾಣ ಇತ್ಯಾದಿ ಕುರಿತು ಜನಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ನೌಕರಿಖಾತರಿ ಯೋಜನೆಯ ಅಂಗವಾಗಿ ಮಳೆನೀರು ಇಂಗುಗುಂಡಿಗಳ ನಿರ್ಮಾಣ ನಡೆಯುತ್ತಿದೆ.
ಕಳೆದ ಆರ್ಥಿಕ ವರ್ಷ 850 ಮಳೆನೀರು ಇಂಗುಗುಂಡಿಗಳನಿರ್ಮಾಣ ಇಲ್ಲಿ ನಡೆಸಲಾಗಿತ್ತು. ಸಣ್ಣ ಪ್ರಮಾಣದ ಇಳಿಜಾರು ಪ್ರದೇಶದಲ್ಲಿ ಈ ಗುಂಡಿಗಳ ನಿರ್ಮಾಣ ನಡೆಸಲಾಗುತ್ತದೆ. ಭರದಲ್ಲಿ ಹರಿದುಹೋಗುವ ಮಳೆನೀರನ್ನು ತಡೆದು ಭೂಮಿಯಡಿ ತಲಪಿಸುವಲ್ಲಿ ಇದು ಸಹಕಾರಿಯಾಗಿದೆ. ಒಂದೂವರೆ ಮೀಟರ್ ಉದ್ದ, ಒಂದುಮೀಟರ್ ಅಗಲದ ಗಣನೆಯಲ್ಲಿ ಗುಂಡಿ ತೋಡಲಾಗುತ್ತದೆ. ಬಿರುಸಿನ ಮಳೆಯಲ್ಲೂ ಮಣ್ಣು ಕುಸಿದುಹೋಗದಂತೆ ಇವುಗಳ ನಿರ್ಮಾಣ ನಡೆಯುತ್ತದೆ. ಮುಂದಿನ ದಿನಗಳಲ್ಲಿ ಜಲಸಂರಕ್ಷಣೆಯ ಅತ್ಯಂತ ಪೂರಕ ವಿಧಾನ ಈ ಮಳೆನೀರು ಗುಂಡಿಗಳೇ ಆಗಿವೆ ಎಂಬ ನಿರೀಕ್ಷೆಯೊಂದಿಗೆ ಇವುಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಪಂಚಾಯತ್ ಪದಾಧಿಕಾರಿಗಳು ತಿಳಿಸುತ್ತಾರೆ.


