ಕಾಸರಗೋಡು: ಪ್ರೊಬೇಷನ್ ಅಧಿಕಾರಿ ಶ್ರೇಣಿ ಎರಡು ಹುದ್ದೆಗೆ ಲೋಕಸೇವಾ ಆಯೋಗ ನಡೆಸುತ್ತಿರುವ ಪರೀಕ್ಷೆಗೆ ಜಿಲ್ಲೆಯ ಪರೀಕ್ಷಾರ್ಥಿಗಳಿಗೆ ತ್ರಿಶೂರು, ಪಾಲಕ್ಕಾಡ್ ಗಳಲ್ಲಿ ಪರೀಕ್ಷೇ ಕೇಂದ್ರ ನಿಗದಿ ಪಡಿಸಿರುವ ವಿಚಾರದಲ್ಲಿ ರಾಜ್ಯ ಮಾನವಹಕ್ಕು ಆಯೋಗ ಸ್ಪಷ್ಟೀಕರಣ ಬಯಸಿದೆ.
ಜಿಲ್ಲೆಯಲ್ಲಿ ಯಾ ಸಮೀಪದ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ನಿಗದಿ ಪಡಿಸುವುದು ಬಿಟ್ಟು , ಬಹಳ ದೂರದಲ್ಲಿ ಕೇಂದ್ರ ಒದಗಿಸಿರುವುದು ಉದ್ಯೋಗಾರ್ಥಿಗಳ ಸಂಕಷ್ಟಕ್ಕೆ ಕಾರಣವಾಗಿದೆ ಎಂಬ ದೂರಿನ ಹಿನ್ನೆಯಲ್ಲಿ ಮಾನವಹಕ್ಕು ಆಯೋಗ ಸದಸ್ಯ ಕೆ.ಮೋಹನಕುಮಾರ್ ಪಿ.ಎಸ್.ಸಿ.ಕಾರ್ಯದರ್ಶಿ ಅವರಲ್ಲಿ ಈ ಸಂಬಂಧ ಸ್ಪಷ್ಟೀಕರಣ ಆಗ್ರಹಿಸಿದ್ದಾರೆ.
ಕಾಸರಗೋಡು ಸರಕಾರಿ ಅತಿಥಿಗೃಹದಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ಕೆ.ಮೋಹನ್ ಕುಮಾರ್ ಈ ವಿಚಾರ ಪ್ರಕಟಿಸಿದರು.
ಈ ರೀತಿ ಪರೀಕ್ಷಾ ಕೇಂದ್ರಗಳನ್ನು ದೂರದೂರುಗಳಲ್ಲಿ ನಿಗದಿ ಪಡಿಸಲಾಗುತ್ತಿರುವ ಪರಿಣಾಮ ಜಿಲ್ಲೆಯಿಂದ ಸರಕಾರಿ ಪರೀಕ್ಷೆಗಳಿಗೆ ಹಾಜರಾಗುವವರ ಸಂಖ್ಯೆ ಗಣನನೀಯವಾಗಿ ಕಡಿಮೆಯಾಗುತ್ತಿದೆ. ಇದು ಉದ್ಯೋಗಾರ್ಥಿಗಳ ಉತ್ಸಾಹ ಕಡಿಮೆಗೊಳಿಸಿದಂತಾಗುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಡ್ಸ್ ಶಾಲೆಯಲ್ಲಿ ಕಲಿಯುತ್ತಿರುವ ವಿಶೇಷಚೇತನ ಪುತ್ರ ಪಂಚಾಯತ್ ಮಂಜೂರು ಮಾಡಿರುವ ಬಸ್ ಮನೆ ವರೆಗೆ ಆಗಮಿಸದೇ ಇರುವ ಪರಿಣಾಮ ಶಾಲೆಗೆ ತೆರಳದಂಥಾ ದುಸ್ಥಿತಿ ನಿರ್ಮಾಣವಾಗಿದೆ ಎಂದು ತಾಯಿಯೊಬ್ಬರು ದೂರು ಸಿದ್ದು, ಈ ಸಂಬಂಧ ವರದಿ ಸಲ್ಲಿಸುವಂತೆ ಆಯೋಗವು ಜಿಲ್ಲಾಧಿಕಾರಿ ಮತ್ತು ಗ್ರಾಮಪಂಚಾಯತ್ ಗೆ ಆದೇಶ ನೀಡಿದ್ದಾರೆ.
ಪುಲ್ಲೂರು-ಪೆರಿಯ ಗ್ರಾಮಪಂಚಾಯತ್ ಮಂಜುರು ಮಾಡಿರುವ ಬಸ್ ಮಹಾಲಕ್ಷ್ಮಿ ಪುರಕ್ಕೆ ಸೂಕ್ತ ಹಾದಿಯಿದ್ದೂ. ಅಲ್ಲಿ ವರೆಗೆ ಬರೆದೇ, ಎರಡು ಕಿಮೀ ದೂರದ ಚಟ್ಟಂಚಾಲ್ ವರೆಗೆ ಮಾತ್ರ ಬಂದು ತೆರಳುವುದು ಸಮಸ್ಯೆಯಾಗಿದೆ. ಜೊತೆಗೆ ಆರ್ಥಿಕವಾಗಿ ಬಡವಳಾದ ತಾವು ಆಟೋ ಸಹಿತ ವಾಹನದಲ್ಲಿ ಪ್ರತಿದಿನ ಚಟ್ಟಂಚಾಲ್ ವರೆಗೆ ತೆರಳುವುದು ಕಷ್ಟಸಾಧ್ಯ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಘಟನೆ ಕಲಿಕೆಯಲ್ಲಿ ಆಸಕ್ತಿಹೊಂದಿರುವ ಪುತ್ರನಿಗೆ ಮಾನಸಿಕ ತೊಳಲಾಟಕ್ಕೆ ಕಾರಣವಾಗಿದೆ ಎಂದು ದೂರುದಾತೆ ತಿಳಿಸಿದ್ದಾರೆ.
ಅಹವಾಲು ಸ್ವೀಕಾರ ಸಭೆಯಲ್ಲಿ ಒಟ್ಟು 39 ದೂರುಗಳ ಪರಿಶೀಲನೆ ನಡೆಸಲಾಗಿದ್ದು, 11 ಅಹವಾಲುಗಳಿಗೆ ತೀರ್ಪು ನೀಡಲಾಗಿದೆ. ಮುಂದಿನ ಸಭೆ ಆ.8ರಂದು ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.


