ಬದಿಯಡ್ಕ: ಕರಿಂಬಿಲದ ಗುಡ್ಡ ಕುಸಿತಗೊಂಡು ಅಂತಾರಾಜ್ಯ ರಸ್ತೆಯಲ್ಲಿ ವಾಹನ ಸಂಚಾರವಿಲ್ಲದೇ ನಾಲ್ಕು ದಿನವಾದರೂ ಸುಗಮ ವಾಹನ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರವು ಸಂಪೂರ್ಣ ವಿಫಲವಾಗಿದ್ದು, ಇದಕ್ಕಾಗಿ ಪ್ರಯತ್ನಿಸಬೇಕಾದ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಮುರಿದುಬಿದ್ದ ಮರದ ಅಡಿಯಲ್ಲಿ ಅವಿತುಕೊಂಡಿದ್ದಾರೆ. ಕಾಸರಗೋಡಿಗೇ ಹೊರೆಯಾದ ಶಾಸಕರು ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲವೆನ್ನುವುದು ಇಲ್ಲಿ ಮತ್ತೊಮ್ಮೆ ಸ್ಪಷ್ಟವಾಗಿದೆ ಎಂದು ಜಿಲ್ಲಾಪಂಚಾಯಿತಿ ಸದಸ್ಯ, ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಆಕ್ರೋಶವ್ಯಕ್ತಪಡಿಸಿದರು.
ಬಿಜೆಪಿ ಕಾಸರಗೋಡು ಮಂಡಲದ ನೇತೃತ್ವದಲ್ಲಿ ಚೆರ್ಕಳ ಕಲ್ಲಡ್ಕ ರಸ್ತೆಗೆ ಕರಿಂಬಿಲದಲ್ಲಿ ಉಂಟಾಗಿರುವ ತಡೆಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಬದಿಯಡ್ಕ ಪೇಟೆಯಲ್ಲಿ ಶನಿವಾರ ಬೆಳಿಗ್ಗೆ ನಡೆದ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ಹೋರಾಟಗಳ ಫಲವಾಗಿ ಚೆರ್ಕಳ ಕಲ್ಲಡ್ಕ ರಸ್ತೆಯ ದುರಸ್ತಿ ಕಾರ್ಯ ಆರಂಭವಾಗಿದ್ದರೂ, ರಸ್ತೆ ಅಗಲಗೊಳಿಸುವ ಸಂದರ್ಭದಲ್ಲಿ ಅಭಿಯಂತರುಗಳು ತಮ್ಮ ಕರ್ತವ್ಯವನ್ನು ಮರೆತ ಫಲವನ್ನು ನಾವು ಇಂದು ಎದುರಿಸುತ್ತಿದ್ದೇವೆ. ಅನೇಕ ಮಂದಿ ವಿದ್ಯಾರ್ಥಿಗಳು, ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ತೆರಳುವ ರೋಗಿಗಳು ಇಂದು ರಸ್ತೆ ತಡೆಯಿಂದಾಗಿ ಪರದಾಡುವಂತಾಗಿದೆ. ಜನರು ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸುತ್ತಿದ್ದರೂ ಕಾಸರಗೋಡಿನ ಶಾಸಕರು ಮಾತ್ರ ಇನ್ನೂ ನಿದ್ದೆಯಿಂದ ಎಚ್ಚೆತ್ತುಕೊಂಡಿಲ್ಲ. ಇಂತಹ ಶಾಸಕರು ನಮಗೇ ಬೇಕೇ ಎಂದು ಅವರ ಸ್ವಪಕ್ಷೀಯರೇ ಹೇಳುವಂತಾಗಿದೆ ಎಂದು ಅವರು ಟೀಕಿಸಿದರು.
ಬಿಜೆಪಿ ಬದಿಯಡ್ಕ ಪಂಚಾಯತಿ ಸಮಿತಿ ಅಧ್ಯಕ್ಷ ಕರಿಂಬಿಲ ವಿಶ್ವನಾಥ ಪ್ರಭು ಪ್ರತಿಭಟನೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಎಂ.ಸುಧಾಮ ಗೋಸಾಡ ಮಾತನಾಡಿ, ಕಾಸರಗೋಡಿನ ಶಾಸಕರು ಕನ್ನಡ ಪ್ರದೇಶವನ್ನು ನಿರಂತರವಾಗಿ ಅವಗಣಿಸುತ್ತಿದ್ದಾರೆ. ಈ ಹಿಂದೆ ಪಿಲಾಂಕಟ್ಟೆ ಅಗಲ್ಪಾಡಿ ರಸ್ತೆಗೆ ಶಾಸಕರು ನಿಧಿ ನೀಡಲು ಹಿಂಜರಿದಾಗ ಸ್ಥಳೀಯರು ಕ್ರಿಯಾ ಸಮಿತಿ ರಚಿಸಿ ನ್ಯಾಯಾಲಯದ ಮೂಲಕ ಪ್ರತ್ಯೇಕ ನಿಧಿಯನ್ನು ಪಡೆದು ರಸ್ತೆ ನಿರ್ಮಿಸಿದ್ದರು. ಬದಿಯಡ್ಕ ಏತಡ್ಕ ಕಿನ್ನಿಂಗಾರು ರಸ್ತೆ ದುರಸ್ತಿಗೆ ಹಲವು ಹೋರಾಟಗಳು ನಡೆದರೂ ದುರಸ್ತಿ ಮಾತ್ರ ನಡೆಯಲಿಲ್ಲ. ಚೆರ್ಕಳ ಅಡ್ಕಸ್ಥಳ ರಸ್ತೆಯ ಸ್ಥಿತಿಯೂ ಇದೇ ರೀತಿಯಾಗಿದೆ. ಇದು ಶಾಸಕರು ತೋರುತ್ತಿರುವ ಮಲತಾಯಿ ಧೋರಣೆಯೆಂದು ಅವರು ಕಟುವಾಗಿ ಟೀಕಿಸಿದರು. ಬದಿಯಡ್ಕಕ್ಕೆ ಮಂಜೂರಾದ ತಾಲೂಕು ಆಸ್ಪತ್ರೆಯನ್ನು ಎಡರಂಗ ಸರಕಾರವು ಬೇಡಡ್ಕಕ್ಕೆ ಕೊಂಡೊಯ್ದಾಗಲೂ ಈ ಶಾಸಕರು ಮೌನಮುರಿಯಲಿಲ್ಲ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸತ್ಯಶಂಕರ ಭಟ್ ಹಿಳ್ಳೆಮನೆ, ಯುವಮೋರ್ಚಾ ಕಾಸರಗೋಡು ಮಂಡಲ ಅಧ್ಯಕ್ಷ ಹರೀಶ್ ಗೋಸಾಡ, ಬಿಜೆಪಿ ಕಾಸರಗೋಡು ಮಂಡಲ ಪ್ರ.ಕಾರ್ಯದರ್ಶಿ ಹರೀಶ್ ನಾರಂಪಾಡಿ, ಯುವಮೋರ್ಚಾ ಜಿಲ್ಲಾ ಪ್ರ.ಕಾರ್ಯದರ್ಶಿ ಸುಮಿತ್ ರಾಜ್ ಪೆರ್ಲ ಶುಭಾಶಂಸನೆಗೈದರು. ಬಿಜೆಪಿ ನೇತಾರ ಬಾಲಕೃಷ್ಣ ಶೆಟ್ಟಿ ಕಡಾರು ಸ್ವಾಗತಿಸಿ, ಅವಿನಾಶ್ ರೈ ವಂದಿಸಿದರು.