ಪೆರ್ಲ:ಆಧುನಿಕತೆ ಬೆಳೆದಂತೆ ಪ್ರಕೃತಿಯ ಮೇಲೆ ಮನುಷ್ಯನ ಸವಾರಿ ಹೆಚ್ಚುತ್ತಿವೆ.ನೆಲ, ಜಲ, ಗಾಳಿಯಂತಹ ಬೆಲೆಬಾಳುವ ಸಂಪತ್ತನ್ನು ಪ್ರಕೃತಿ ಮಾತೆ ಏನೇನೂ ಪ್ರತಿಫಲಾಪೇಕ್ಷೆಯಿಲ್ಲದೇ ನಮಗೆ ನೀಡುತ್ತಿದೆ. ಅವಿವೇಕಿಗಳಾದ ನಾವು ಮಾತ್ರ ನಮ್ಮ ಇರುವಿಕೆಗೆ ಮೂಲಾಧಾರವಾದ ಅರಣ್ಯ ಸಂಪತ್ತನ್ನು ನಾಶಪಡಿಸುತ್ತಿದ್ದೇವೆ ಎಂದು ಎಣ್ಮಕಜೆ ಪಂಚಾಯಿತಿ ಪೆರ್ಲ ಕೃಷಿಭವನ ಅಧಿಕಾರಿ ವಿನೀತ್ ವಿ.ವರ್ಮ ವಿಷಾದ ವ್ಯಕ್ತಪಡಿಸಿದರು.
'ನೀರ ನೆಮ್ಮದಿಯತ್ತ ಪಡ್ರೆ' ಜಲಕಾರ್ಯಕರ್ತರ ನೇತೃತ್ವದಲ್ಲಿ ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಶಾಲೆಯಲ್ಲಿ ನಡೆದ ಮಳೆ ನೀರು ಇಂಗಿಸುವ ಚಟುವಟಿಕೆಗಳ ಕುರಿತು ಮಾಹಿತಿ ನೀಡಿ ಮಾತನಾಡಿದರು.
ಪ್ರಕೃತಿ ಸಮತೋಲನಕ್ಕೆ ಸಸ್ಯ ಸಂಪತ್ತು ಮಹತ್ವಪೂರ್ಣ ಅಂಶವಾಗಿದೆ.ನೆಲ, ಜಲ, ಗಾಳಿ ಇಂತಿಷ್ಟೇ ಪ್ರಮಾಣದಲ್ಲಿ ಇರಬೇಕುಂಬುದು ಪ್ರಕೃತಿ ನಿಯಮ.ಆದರೆ ಮಾನವನ ಆಕ್ರಮಣದಿಂದ ಪ್ರಕೃತಿ ಸಮತೋಲನ ಕಳೆದು ಕೊಳ್ಳುತ್ತಿದೆ.ಅನಾಹುತಗಳು, ಬರಗಾಲ ನೀರಿನ ಕ್ಷಾಮ ಸಂಭವಿಸುತ್ತಿವೆ.ಪ್ರಾಕೃತಿಕ ಸಂಪನ್ಮೂಲಗಳನ್ನು ಪಡೆಯುವಲ್ಲಿ ವಿಫಲರಾಗುತ್ತಿರುವ ನಾವಿಂದು ಆಸ್ಪತ್ರೆಗಳಲ್ಲಿ ಕೃತಕ ಆಮ್ಲಜನಕ ಪಡೆಯುವಂತಾಗಿದೆ. ಹಿಂದೆ ಕೊಳವೆ ಬಾವಿಗಳು ಮಿತವಾಗಿತ್ತು. ಬಾವಿಯಿಂದ ಕೊಡಪಾನಗಳಲ್ಲಿ ನೀರು ಸೇದಲಾಗುತ್ತಿತ್ತು. ಆದರೆ ಇಂದು ಎಲ್ಲೆಂದರಲ್ಲಿ ಕೊಳವೆ ಬಾವಿ ಕೊರೆಯಲಾಗುತ್ತಿದೆ.ಹೆಚ್ಚು ಸಾಮಥ್ರ್ಯದ ಮೋಟಾರ್ ಉಪಯೋಗಿಸಿ ಹೇರಳ ಪ್ರಮಾಣದಲ್ಲಿ ನೀರು ಎಳೆಯುವುದಲ್ಲದೆ ಅಗತ್ಯವನ್ನೂ ಮೀರಿ ನೀರು ಪೋಲು ಮಾಡುತ್ತಿದ್ದೇವೆ.ಕಾಸರಗೋಡು ಜಿಲ್ಲೆಯಲ್ಲಿ ಶೇ.37ರಷ್ಟು ಅಂತರ್ಜಲ ಮಟ್ಟ ಕುಸಿದಿದೆ.ಕಾಸರಗೋಡು, ಪಾಲಕ್ಕಾಡ್ ಜಿಲ್ಲೆಗಳು ಬರ ಪೀಡಿತ ಪ್ರದೇಶವಾಗಿ ಮಾರ್ಪಡುತ್ತಿದೆ. ಕೇವಲ ಒಂದು ಬಕೆಟ್ ನೀರಲ್ಲಿ ಕಾರು ತೊಳೆಯಬಹುದಾಗಿದ್ದರೂ ಅದೆಷ್ಟೋ ಪ್ರಮಾಣದ ನೀರನ್ನು ನಾವು ಪೋಲು ಮಾಡುತ್ತಿದ್ದೇವೆ. ನಳ್ಳಿಯೊಂದರಲ್ಲಿ ಒಂದು ಹನಿ ನೀರು ಬಿದ್ದು ಪೋಲಾದರೆ ದಿನದಲ್ಲಿ 20 ಲೀ.ನೀರು ಪೋಲಾದಂತೆ.ಮಕ್ಕಳಿಗೆ ಚಿಕ್ಕಂದಿನಲ್ಲೇ ಜಲ ಜಾಗೃತಿ ಮೂಡಿಸಿ ನೀರಿನ ಪೋಲು ತಡೆಯಬೇಕು.ಸರಳ ವಿಧಾನಗಳ ಮೂಲಕ ನಮ್ಮ ನಮ್ಮ ಹಿತ್ತಿಲಲ್ಲಿ ನೀರನ್ನು ಇಂಗಿಸಿ ಆ ಮೂಲಕ ಭೂಮಿಯ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಕಾಳಜಿ ವಹಿಸಬೇಕು ಎಂದರು.
ಅಂತರಾಷ್ಟ್ರೀಯ ಜಲತಜ್ಞ ಶ್ರೀಪಡ್ರೆ, ಸ್ವರ್ಗ ಶಾಲಾ ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಬಿ.ಉಪಸ್ಥಿತರಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಕೆ.ವೈ.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ವಂದಿಸಿದರು.