ಕಾಸರಗೋಡು: ಬಿರುಸಿನ ಗಾಳಿಮಳೆಯಿಂದ ಕಂಗೆಟ್ಟ ಸಂತ್ರಸ್ತರ ಪುನರ್ವಸತಿಗೆ ಕೈಜೋಡಿಸುವ ಮೂಲಕ 77ರ ಹರೆಯದ ಮರಿಯುಮ್ಮ ಮಾನವೀಯ ಸ್ಪಂದನದೊಂದಿಗೆ ಅರ್ಥಪೂರ್ಣವಾಗಿ ಬಕ್ರೀದ್ ಹಬ್ಬ ಆಚರಿಸಿಕೊಂಡಿದ್ದಾರೆ.
ಇತರರ ಸಂಕಷ್ಟದಿಂದ ನೊಂದು ಸಹಾಯ ಹಸ್ತ ಚಾಚುವುದಕ್ಕೆ ಆರ್ಥಿಕವಾಗಿ ಶ್ರೀಮಂತರೇ ಆಗಬೇಕಿಲ್ಲ. ಹೃದಯ ಶ್ರೀಮಂತಿಕೆ ಇದ್ದರೆ ಸಾಕು ಎಂಬುದನ್ನು ಇವರು ಕೃತಿಯಿಂದ ತೋರಿದ್ದಾರೆ. ಹಬ್ಬಕ್ಕಾಗಿ ಕಷ್ಟಪಟ್ಟು ಸಂಗ್ರಹಿಸಿದ್ದ, ಹಬ್ಬದ ಕೊಡುಗೆಯಾಗಿ ಲಭಿಸಿದ್ದ ಸಾಮಾಗ್ರಿಗಳನ್ನೆಲ್ಲ ಸಂತ್ರಸ್ತರಿಗೆ ಹಸ್ತಾಂತರಿಸುವ ಮೂಲಕ ಮರಿಯುಮ್ಮ ವಿಭಿನ್ನರಾಗಿ ಕಾಣುತ್ತಾರೆ.
ಪ್ರಾಕೃತಿಕ ದುರಂತಕ್ಕೆ ನೋಡುನೋಡುತ್ತಿದ್ದಂತೆಯೇ ತುತ್ತಾಗಿ ಎಲ್ಲವನ್ನೂ ಕಳೆದುಕೊಂಡ ಜನರಿಗೆಕೈಲಾದ ಸಹಾಯ ಮಾಡುವ ಮೂಲಕ ಆರ್ಥಿಕವಾಗಿ ಅಷ್ಟೇನೂ ಸಂಪನ್ನರಲ್ಲದೇ ಇದ್ದರೂ, ಮಾನವೀಯ ಮೌಲ್ಯಗಳ ಮೂಲಕ ಮರಿಯುಮ್ಮ ಮಾದರಿಯಾಗಿದ್ದಾರೆ.
ಹಬ್ಬದ ಅಂಗವಾಗಿ ಪಡನ್ನಕ್ಕಾಡ್ ಕೃಷಿ ಕಾಲೇಜಿನ ಕಲೆಕ್ಷನ್ ಸೆಂಟರ್ ಗೆ ಆಗಮಿಸಿ ಸಂತ್ರಸ್ತರಿಗೆ ಬಟ್ಟೆ, ಇನ್ನಿತರ ಅನಿವಾರ್ಯ ಸಾಮಾಗ್ರಿಗಳನ್ನು ಹಂಚಿ ಹಬ್ಬವನ್ನು ಕೊಂಡಾಡಿದರು. 20 ಕಿಲೋ ಅಕ್ಕಿ, ಅರ್ಧ ಲೀಟರ್ ತೆಂಗಿನೆಣ್ಣೆ, ಚಹಾ ಪುಡಿ, ಬಟ್ಟೆಬರೆ ಇತ್ಯಾದಿಗಳನ್ನು ಅವರು ಹಸ್ತಾಂತರಿಸಿದರು.
ಪುತ್ರ ಅಮೀರ್ ಅವರೊಂದಿಗೆ ತ್ರಿಕರಿಪುರದ ಹರಿಜನ ಕಾಲನಿಯಲ್ಲಿ 4 ಸೆಂಟ್ಸ್ ಜಾಗದಲ್ಲಿರುವಪುಟ್ಟ ಮನೆಯಲ್ಲಿ ಮರಿಯುಮ್ಮ ವಾಸವಾಗಿದ್ದಾರೆ. ಪತಿ ಅಬ್ದುಲ್ಖಾದರ್ ಅವರು ನಿಧನಹೊಂದಿ 50 ವರ್ಷಗಳೇ ಕಳೆದಿವೆ. 6 ಮಕ್ಕಳನ್ನು ಹಡೆದಿದ್ದ ಮರಿಯುಮ್ಮ ಅವರಿಗೆ ಈಗ ಮೂವರು ಮಾತ್ರ ಜೀವಂತವಾಗಿದ್ದಾರೆ. ಒಬ್ಬ ಪುತ್ರಿ ವಿವಾಹಿತರಾಗಿ ಪತಿಯ ಮನೆಯಲ್ಲಿದ್ದಾರೆ. ಹೃದ್ರೋಗಿಯಾದ ಪುತ್ರನ ಜತೆ ಮರಿಯುಮ್ಮ ಬದುಕುತ್ತಿದ್ದಾರೆ. ಕಡಲೆ ಮಾರಾಟಗಾರರಾಗಿದ್ದ ಪುತ್ರನಿಗೆ ಈಗ ರೋಗದ ಹಿನ್ನೆಲಯಿಂದ ಕೆಲಸಕ್ಕೆ ತೆರಳಲಾಗುತ್ತಿಲ್ಲ. ಸ್ಥಳೀಯ ಕೆಲವು ಸಂಘಟನೆಗಳು-ಸಾರ್ವಜನಿಕರು ನೀಡುವ ಸಹಾಯವೊಂದೇ ಬದುಕಿಗೆ ಆಸರೆಯಾಗಿದೆ.
ಈ ಸಲದ ಬಿರುಸಿನಮಳೆ,ಅದರಿಂದ ತಲೆದೋರಿದ ನೆರೆಹಾವಳಿಗಳು ಮರಿಯುಮ್ಮ ಅವರನ್ನು ತುಂಬಾ ಕಾಡಿತ್ತು. ಬದುಕಿನಲ್ಲಿ ನಿರಂತರ ಬವಣೆ ಕಂಡ ಹಿರಿಯಜೀವಕ್ಕೆ ಇತರರ ಸಂಕಷ್ಟ ಬಲುಬೇಗ ಅರ್ಥವಾಗಿತ್ತು. ಈ ಕಾರಣದಿಂದ ಹಬ್ಬಕ್ಕಾಗಿ ಪಡೆದಿದ್ದ ಹೊಸ ಸಾಮಾಗ್ರಿಗಳನ್ನೆಲ್ಲ ಸಂತ್ರಸ್ತರಿಗೆ ದಾನ ಮಾಡುವ ಮೂಲಕ ಮನೋನೆಮ್ಮದಿ ಪಡೆದಿದ್ದಾರೆ. ತಮಗೆ ಬೇಕಾದುದನ್ನು ದೇವರೇ ನೀಡುವನು ಎಂಬ ವಿಶ್ವಾಸ ಅವರದು. ಇತತರಿಗೆ ಸಹಾಯ ಮಾಡುವ ಮನಸ್ಸನ್ನು ಮನುಷ್ಯ ಬೆಳೆಸಿಕೊಳ್ಳಬೇಕು ಎಂಬುದು ಮರಿಯುಮ್ಮ ಸಮಾಜಕ್ಕೆ ನೀಡುವ ಸಂದೇಶ.


