ಬದಿಯಡ್ಕ: ಆರೋಗ್ಯವಂತ ಮಕ್ಕಳು ಮತ್ತು ವಿದ್ಯಾಸಂಪನ್ನರಾದ ಜನರು ಆ ಊರಿನ ಸಂಪತ್ತು, ಯಾಂತ್ರಿಕವಾದ ಬದುಕಿಗೆ ಹೆಚ್ಚಿನ ಒಲವನ್ನು ನೀಡುತ್ತಿರುವ ನಾವು ನಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿರುವುದರಿಂದ ಅಜ್ಞಾತವಾದ ರೋಗಗಳು ನಮ್ಮನ್ನು ಮುತ್ತಿಕೊಳ್ಳುವ ಕಾಲವಿದಾಗಿದೆ. ಜನರ ಆರೋಗ್ಯ ಸಮಸ್ಯೆಗೆ ಪರಿಹಾರವಾಗಿ ಪ್ರಾಥಮಿಕ ಆರೋಗ್ಯಕೇಂದ್ರವಿದ್ದರೆ, ಇತರ ಸಮಸ್ಯೆಗಳಿಗೆ ಉತ್ತರವಾಗಿ ಜನಸೇವೆಗೆ ಸುಸಜ್ಜಿತವಾದ ಗ್ರಾಮಪಂಚಾಯಿತಿ ಕಚೇರಿಯ ಇದೆ ಎಂದು ಕಾಸರಗೋಡು ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಹೇಳಿದರು.
ಅವರು ಸೋಮವಾರ ಕುಂಬ್ಡಾಜೆ ಗ್ರಾಮಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ದೀಪಜ್ವಲನೆಗೈದು ಮಾತನಾಡಿದರು.
ಎಂಡೋಸಲ್ಫಾನ್ ಸಂತ್ರಸ್ತರನ್ನು ಒಳಗೊಂಡ ಕುಂಬ್ಡಾಜೆ ವ್ಯಾಪ್ತಿಯಲ್ಲಿ ಆರೋಗ್ಯಕೇಂದ್ರ ಚುರುಕುನಿಂದ ಕಾರ್ಯಾಚರಿಸಬೇಕಾಗಿದೆ. ಕೇವಲ ಕಟ್ಟಡವಿದ್ದರೆ ಸಾಲದು ಸರಕಾರದಿಂದ ಲಭಿಸುವ ಎಲ್ಲಾ ಸವಲತ್ತುಗಳನ್ನು ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳು, ನೌಕರರು ಸೇವಾಮನೋಭಾವದಿಂದ ಕೆಲಸವನ್ನು ನಿರ್ವಹಿಸಿದರೆ ಮಾತ್ರ ಈ ವ್ಯವಸ್ಥೆಗಳು ಸಾರ್ಥಕತೆಯನ್ನು ಪಡೆಯುತ್ತದೆ. ಲೋಕಸಭೆಯಲ್ಲಿ ಚೊಚ್ಚಲ ಭಾಷಣದಲ್ಲಿ ಎಂಡೋಸಂತ್ರಸ್ತರಿಗೆ ಇತರರಂತೆ ಜೀವಿಸಲು ಅನುಕೂಲವಾಗುವಂತಹ ಎಲ್ಲ ನೆರವನ್ನು ನೀಡಬೇಕು ಎಂಬ ಕೇಳಿಕೆಯನ್ನು ಇರಿಸಿದ್ದೇನೆ. ಅದಕ್ಕಾಗಿ ಕೇಂದ್ರ ಮಂತ್ರಿಗಳಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಮೊದಲಾದವರಲ್ಲಿ ವಿಷಯವನ್ನು ವೈಯಕ್ತಿಕವಾಗಿ ತಿಳಿಯಪಡಿಸಿದ್ದು, ಮಾನವೀಯ ನೆಲೆಯಲ್ಲಿ ಅನುಕೂಲತೆಗಳನ್ನು ನೀಡಬೇಕು ಎಂದು ತಿಳಿಸಲಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರು ಜನತೆಗಾಗಿ ಜೀವಿಸಿದರೆ ಮಾತ್ರ ತಮ್ಮ ಕುರ್ಚಿ ಶಾಶ್ವತವಾಗಲಿದೆ ಎಂಬುದನ್ನು ಮನಗಾಣಬೇಕು. ಸುಸಜ್ಜಿತ ಕಟ್ಟಡದ ಮೂಲಕ ಮೌಲ್ಯಯುತವಾದ ಸೇವೆ ಕುಂಬ್ಡಾಜೆಯ ಜನತೆಗೆ ಲಭಿಸಲಿ ಎಂದು ಅವರು ಆಶಿಸಿದರು.
ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಭಾರತದ ಆತ್ಮವಿರುವುದು ಗ್ರಾಮೀಣ ಪ್ರದೇಶದ ಜನರಲ್ಲಿ. ಗ್ರಾಮಪ್ರದೇಶಗಳ ಅಭಿವೃದ್ಧಿಯಾದರೆ ಮಾತ್ರ ದೇಶ ಸುಭಿಕ್ಷವಾಗಬಹುದು. ಇಲ್ಲಿನ ಜನರ ಸಮಸ್ಯೆಗೆ ಪರಿಹಾರವನ್ನು ಕಾಣುವ ನಿಟ್ಟಿನಲ್ಲಿ ಉದ್ಘಾಟನೆಗೊಂಡ ಕಟ್ಟಡಗಳು ಜನರಿಗೆ ಉತ್ತಮ ಸೇವೆಯನ್ನು ನೀಡಲಿ ಎಂದರು.
ಮುಖ್ಯ ಅತಿಥಿಯಾಗಿ ಕಾಸರಗೋಡು ಜಿಲ್ಲಾಪಂಚಾಯಿತಿ ಅಧ್ಯಕ್ಷ ಎ.ಜಿ.ಸಿ. ಬಶೀರ್ ಮಾತನಾಡಿ ಗ್ರಾಮಪ್ರದೇಶದ ಜನರು ತಮ್ಮ ಗ್ರಾಮಸಭೆಗಳಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ಊರಿನ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಮೂಲಕ ಪರಿಹರಿಸುವಲ್ಲಿ ಮನಗಾಣಬೇಕು. ಹಾಗಾದಲ್ಲಿ ಮಾತ್ರ ಊರು ಅಭಿವೃದ್ಧಿಯತ್ತ ಸಾಗುವುದು ಎಂದರು.
ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಓಮನ ರಾಮಚಂದ್ರನ್ ಎಲ್ಲರ ಒಗ್ಗಟ್ಟಿನ ಪರಿಶ್ರಮದ ಫಲವಾಗಿ ಸುಸಜ್ಜಿತ ಕಟ್ಟಡವು ಜನಸೇವೆಗಾಗಿ ನೂತನ ಕಟ್ಟಡದಲ್ಲಿ ಆರಂಭವಾಗಿದ್ದು ಇದರ ಸದುಪಯೋಗವಾಗಲಿ ಎಂದರು.
ಕುಂಬ್ಡಾಜೆ ಗ್ರಾ.ಪಂ. ಸ್ಥಾಯಿಸಮಿತಿ ಅಧ್ಯಕ್ಷರುಗಳಾದ ಮಿಸ್ರಿಯಾಬಿ ಎಂ., ನ್ಯಾಯವಾದಿ. ಮುಹಮ್ಮದ್ ಖಾಸಿಂ, ಯಶೋಧ, ಬ್ಲೋಕ್ ಪಂ.ಸದಸ್ಯ ಸುಂದರ ಎಂ., ಗ್ರಾ.ಪಂ.ಸದಸ್ಯರುಗಳಾದ ಎಲಿಜಬೆತ್ ಕ್ರಾಸ್ತಾ, ಎಸ್.ಮುಹಮ್ಮದ್ ಕುಂಞÂ, ಶೈಲಜ ಎಂ.ಭಟ್, ಬಿ.ಟಿ.ಅಬ್ದುಲ್ಲ ಕುಂಞÂ, ರವೀಂದ್ರ ರೈ ಗೋಸಾಡ, ನಳಿನಿ ಕೆ., ಶಾಂತ ಎಸ್. ಭಟ್ ಗುಲಗುಂಜಿ, ಶಶಿಧರ ಟಿ., ವಿವಿಧ ಇಲಾಖೆಯ ಅಧಿಕಾರಿಗಳಾದ ಅರುಣ್ ಟಿ., ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಡಾ. ಸಯ್ಯಿದ್ ಹಮೀದ್ ಶುಹೈಬ್, ವಿವಿಧ ಪಕ್ಷಗಳ ಪ್ರತಿನಿಧಿಗಳಾದ ಎಂ. ಅಬೂಬಕ್ಕರ್, ಕೇಶವ ಮಣಿಯಾಣಿ, ರಾಜೇಶ್ ಶೆಟ್ಟಿ, ನಾರಾಯಣನ್ ನಂಬ್ಯಾರ್, ಪಿ.ಎನ್.ಆರ್. ಅಮ್ಮಣ್ಣಾಯ, ಕೆ.ಟಿ.ಚಾಕೋ, ಸಿಡಿಎಸ್ ಅಧ್ಯಕ್ಷೆ ಮೀನಾಕ್ಷಿ, ವ್ಯಾಪಾರಿ ನೇತಾರ ಶ್ರೀಧರ ಪದ್ಮಾರ್ ಸಮಾರಂಭದಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು. ಕುಂಬ್ಡಾಜೆ ಗ್ರಾ.ಪಂ.ಅಧ್ಯಕ್ಷೆ ಫಾತಿಮತ್ ಝಹರ ಸ್ವಾಗತಿಸಿ, ಕಾರ್ಯದರ್ಶಿ ಅಚ್ಚುತ ಮಣಿಯಾಣಿ ಕೆ. ವಂದಿಸಿದರು. ವಿದ್ಯಾನ್ ಯೋಗೀಶ್ ಶರ್ಮ ಬಳ್ಳಪದವು ಸುಶ್ರಾವ್ಯವಾಗಿ ಪ್ರಾರ್ಥನಾ ಶ್ಲೋಕವನ್ನು ಪ್ರಸ್ತುತಪಡಿಸಿದರು. ಗ್ರಾ.ಪಂ.ಉಪಾಧ್ಯಕ್ಷ ಆನಂದ ಕೆ.ಮವ್ವಾರು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು.
ಗ್ರಾಮಪಂಚಾಯಿತಿಯ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರವನ್ನು ನೀಡಿದ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಮಾರ್ಪನಡ್ಕ ಘಟಕದ ವತಿಯಿಂದ ಸಭಾಕಾರ್ಯಕ್ರಮದ ನಂತರ ಆಗಮಿಸಿದ ಸಾರ್ವಜನಿಕರಿಗೆ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಭೋಜನ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಗಣ್ಯರು ಹಾಗೂ ಊರವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.


