ಕಾಸರಗೋಡು: ಆರೋಗ್ಯ ಸಂಸ್ಕೃತಿ ಮತ್ತು ಆಯುರ್ವೇದ ಚಿಕಿತ್ಸೆ ಬಗ್ಗೆ ಬಾಹ್ಯ ಜಗತ್ತಿನೊಂದಿಗೆ ಸಂವಾದ ನಡೆಸಲು ಸಹಕಾರಿಯಾಗುವ ರೀತಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಆಯುರ್ವೇದ ರಾಯಭಾರಿಗಳ ಯಾತ್ರೆ ಅಕ್ಟೋಬರ್ 25ರಿಂದ ಕೇರಳದಲ್ಲಿ ಜರುಗಲಿದೆ.
ಶೌರ್ಯ ಹಾಗೂ ಪರಂಪರೆಯ ಸಂಕೇತವೆನಿಸಿರುವ ಬೇಕಲಕೋಟೆಯಿಂದ ಆರಂಭಗೊಳ್ಳುವ ಯಾತ್ರೆ ರಾಜ್ಯದ ನೈಸರ್ಗಿಕ ಸಂಪತ್ತಿನ ನಾಡು ಕೋವಳಂನಲ್ಲಿ ಸಮಾರೋಪಗೊಳ್ಳಲಿದೆ. ಜರ್ಮನಿ, ಇಟೆಲಿ, ಚೀನಾ, ರಷ್ಯಾ, ಯೂಕ್ರೇನ್, ಲೆಬೆನಾನ್, ಸೌದಿ ಅರೇಬಿಯಾ, ಡೆನ್ಮಾರ್ಕ್, ಪೋಲೆಂಡ್, ಸ್ಪೇನ್, ಇಸ್ರೇಲ್, ಯು.ಎ.ಇ., ತಾಯ್ ಲ್ಯಾಂಡ್, ಸೌತ್ ಕೊರಿಯಾ, ಮಲೇಷ್ಯಾ ಸಹಿತ ಸುಮಾರು 30 ದೇಶಗಳ 45 ಟೂರ್ ಆಪರೇಷನ್ ಕಂಪನಿಗಳ ಪ್ರತಿನಿಧಿಗಳು ರಾಜ್ಯವನ್ನು ಸಂದರ್ಶಿಸಲಿದ್ದಾರೆ.
ಕೇಂದ್ರ-ರಾಜ್ಯ ಪ್ರವಾಸೋದ್ಯಮ ಇಲಾಖೆಗಳ ಸಹಕಾರದೊಂದಿಗೆ ರಾಜ್ಯ ಮಟ್ಟದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತದೆ. ಕೇರಳದ ವಿವಿಧ ಆಯುರ್ವೇದ ಸಂಸ್ಥೆಗಳ ಸಂಘನೆಯಾಗಿರುವ ಆಯುರ್ವೇದ ಪ್ರಮೋಷನ್ ಸೊಸೈಟಿ(ಎ.ಪಿ.ಎಸ್.) ನೇತೃತ್ವ ವಹಿಸಿ ಕಾರ್ಯಕ್ರಮನಡೆಸುತ್ತಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿರುವ ಬೇಕಲ ರೆಸಾರ್ಟ್ ಡೆವೆಲಪ್ ಮೆಂಟ್ ಕಾರ್ಪೋರೇಷನ್(ಬಿ.ಆರ್.ಡಿ.ಸಿ.)ನೇತೃತ್ವದಲ್ಲಿ ಉತ್ತರ ಮಲಬಾರ್ ಪ್ರದೇಶಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಮುಖ್ಯವಾಗಿ ಕೇರಳದ ಆಯುರ್ವೇದವನ್ನು ವಿಶ್ವಕ್ಕೆ ಪರಿಚಯಿಸುವುದರ ಜತೆಗೆ ಆಯುರ್ವೇದದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕೋಯಿಕೋಡ್,ಕೋಟಕ್ಕಲ್, ಚೆರುತುರ್ತಿ, ಎರ್ನಾಕುಲಂ, ಕುಮರಕಂ, ಕೊಲ್ಲಂ, ತಿರುವನಂತಪುರಂ, ಕೋವಳಂ ಕೇಂದ್ರಗಳನ್ನು ಈ ಟೂರ್ ತಂಡ ಸಂದರ್ಶಿಸಲಿದೆ. 12 ದಿವಸಗಳ ಕಾಲ ಈ ತಂಡ ಕೇರಳದಲ್ಲಿ ಠಿಕಾಣಿ ಹೂಡಿ ಆಯುರ್ವೇದ ಪ್ರವಾಸೋದ್ಯಮದ ಸಾಧ್ಯತೆಗಳ ಕುರಿತು ಅವಲೋಕನ ನಡೆಸಲಿದೆ.
24ರಂದು ಕೇರಳಕ್ಕೆ:
ಈ ಯಾತ್ರೆಯಲ್ಲಿ ಭಾಗವಹಿಸಲಿರುವ ವಿದೇಶಿ ಟೂರ್ ಆಪರೇಟರ್ ಗಳು ಅಕ್ಟೋಬರ್ 24ರಂದು ಕಣ್ಣೂರು ವಿಮಾನನಿಲ್ದಾಣದಲ್ಲಿ ಬಂದಿಳಿಯಲಿದ್ದು, ಇವರನ್ನು ಕೇರಳೀಯ ಶೈಲಿಯಲ್ಲಿ ಸ್ವಾಗತಿಸುವ ನಿಟ್ಟಿನಲ್ಲಿವಿಶೇಷ ಸಿದ್ಧತೆ ನಡೆಸಲಾಗುತ್ತಿದೆ. ಉತ್ತರ ಮಲಬಾರ್ ಪ್ರದೇಶದಲ್ಲಿ ಬಿ.ಆರ್.ಡಿ.ಸಿ. ಸಿದ್ಧಪಡಿಸಿ ಜಾರಿಗೊಳಿಸಿರುವ 'ಸ್ಮೈಲ್ ಯೋಜನೆ' ವ್ಯಾಪ್ತಿಯ ಕಟ್ಟಡಗಳಲ್ಲಿ ಅತಿಥಿಗಳಿಗೆ ವಸತಿ ಸೌಲಭ್ಯ ಒದಗಿಸಲಾಗುವುದು. ಅ.25ರಂದು ಮಧ್ಯಾಹ್ನ 2 ಗಂಟೆಗೆ ಬೇಕಲದ ಲಲಿತ್ ರೆಸಾರ್ಟ್ ನಲ್ಲಿ ಬಿಸಿನೆಸ್ ಮೀಟ್ ನಡೆಯಲಿದೆ. ಇಲ್ಲಿ ನೋಂದಣಿ ನಡೆಸಿದ ಸ್ಥಳೀಯ ಪ್ರವಾಸೋದ್ಯಮ ಸಂಸ್ಥೆಗಳಿಗೆ ಮತ್ತು ಟೂರ್ ಆಪರೇಟರ್ಗಳಿಗೆ ಪರಸ್ಪರ ವ್ಯವಹಾರ ಮಾತುಕತೆ ನಡೆಸುವ ನಿಟ್ಟಿನಲ್ಲಿ ಮತ್ತು ಒಕ್ಕೂಟ ರಚಿಸುವ ಉದ್ದೇಶದಿಂದ ಈ ಅವಕಾಶ ಒದಗಿಸಲಾಗಿದೆ. ಸಂಜೆ ಈ ತಂಡ ಬೇಕಲ ಬೀಚ್ಗೆ ಭೇಟಿ ನೀಡಲಿದೆ. ನಂತರ ಬಿ.ಆರ್.ಡಿ.ಸಿ. ಮತ್ತು ಲಲಿತ ಕಲಾ ಅಕಾಡೆಮಿ ಜಂಟಿಯಾಗಿ ಜಾರಿಗೊಳಿಸುವ ಮಲಬಾರ್ ಆರ್ಟೂರ್ ವೀಕ್ಷಿಸಿ,ಗೋಡೆಚಿತ್ರ ಕಲಾವಿದರೊಂದಿಗೆ ಸಂವಾದ ನಡೆಸಲಿದೆ. ಸಂಜೆ 6.3ಕ್ಕೆ ಬೇಕಲ ತಾಜ್ ಹೋಟೆಲ್ನಲ್ಲಿ ಈ ಯಾತ್ರೆ ಯ ಉದ್ಘಾಟನೆ ನಡೆಯಲಿದೆ. ಯಾತ್ರೆಯ ಅಂಗವಾಗಿ ವಲಿಯ ಪರಂಬ ಹಿನ್ನೀರು, ಕುದುರುಕಾಡು, ಮಾಡಾಯಿಪಾರೆ, ಮುಳಪ್ಪಿಲಂಗಾಡ್ ಡ್ರೈವ್ ಇನ್ ಬೀಚ್, ಸರ್ಗಾಲಯ ಕಲಾಗ್ರಾಮ ಸಹಿತ ಉತ್ತರ ಮಲಬಾರ್ ಪ್ರದೇಶಗಳ ಪ್ರವಾಸಿ ತಾಣಗಳನ್ನು ಸಂದರ್ಶಿಸಲಿದೆ. 16ರಂದು ಮಧ್ಯಾಹ್ನ ರಾಜ್ಯದ ಇತರ ಕಡೆಗೆ ತಂಡತೆರಳಲಿದೆ.
ಅಭಿಮತ:
ರಾಜ್ಯದ ವೈಶಿಷ್ಟ್ಯಗಳಲ್ಲಿ ಒಂದಾಗಿರುವ ಆರೋಗ್ಯ ಸಂಸ್ಕೃತಿ ಮತ್ತು ಆಯುರ್ವೇದ ಚಿಕಿತ್ಸೆ ಬಗ್ಗೆ ಬಾಹ್ಯ ಜಗತ್ತಿನೊಂದಿಗೆ ಸಂವಾದ ನಡೆಸಲು ಯಾತ್ರೆ ಸಹಕಾರಿಯಾಗಲಿದೆ. ಯಾತ್ರೆÀ ಅಂತಾರಾಷ್ಟ್ರೀಯ ಮಟ್ಟದ ಆಯುರ್ವೇದ ಅಂಬಾಸಿಡರ್ಗಳ ಸಮ್ಮಿಲನಕ್ಕೆ ವೇದಿಕೆಯಾಗಲಿದೆ. ಜತೆಗೆ ಆಯುರ್ವೇದ ಪ್ರವಾಸೋದ್ಯಮದ ಸಾಧ್ಯತೆಗಳ ಕುರಿತು ಮಹತ್ವದ ಚರ್ಚೆಗೂ ಕಾರಣವಾಗಲಿದೆ.
-ಟಿ.ಕೆ.ಮನ್ಸೂರ್, ಆಡಳಿತನಿರ್ದೇಶಕ
ಬೇಕಲ್ ರೆಸಾರ್ಟ್ ಡೆವೆಲಪ್ಮೆಂಟ್ ಕಾರ್ಪೋರೇಶನ್(ಬಿ.ಆರ್.ಡಿ.ಸಿ)

