ಬದಿಯಡ್ಕ: ಸಕಾರಾತ್ಮ ಕ್ರಿಯೆಗಳಿಂದ ಮಾನವ ಜೀವನ ಸುಖಮಯವಾಗಿ ಸಾಗುತ್ತದೆ. ನುಡಿ-ನಡೆ, ವೃತ್ತಿ-ಪ್ರವೃತ್ತಿಗಳಲ್ಲಿ ಧನಾತ್ಮಕ ಚಿಂತನೆಗಳೊಂದಿಗೆ ಸಮಾಜಮುಖಿಯಾಗಿ ವ್ಯವಹರಿಸಿದಾಗ ಬದುಕಿನ ಸಾರ್ಥಕತೆಯ ಸಾಫಲ್ಯ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕಲಾಸೇವೆಯು ಎಲ್ಲಾ ವಿಧಗಳಲ್ಲೂ ಮನೋತೃಪ್ತಿಗೆ ಕಾರಣವಾಗಿ ನೆಮ್ಮದಿ ಒದಗಿಸುತ್ತದೆ ಎಂದು ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಅವರು ತಿಳಿಸಿದರು.
ಕೊಲ್ಲಂಗಾನ ಶ್ರೀನಿಲಯ ಶ್ರೀದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ನಡೆದ ನವರಾತ್ರಿ ಉತ್ಸವದ ಅಂಗವಾಗಿ ಸ್ಥಳೀಯ ಶ್ರೀಸುಬ್ರಹ್ಮಣ್ಯ ಯಕ್ಷಗಾನ ಕಲಾಸಂಘ ಆಯೋಜಿಸಿದ್ದ ಯಕ್ಷ ದಶ ವೈಭವದ ಮಂಗಳವಾರ ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣಗೈದು ಅವರು ಮಾತನಾಡಿದರು.
ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನ ಇಂದು ಜಗದಗಲ ಖ್ಯಾತಿ ಪಡೆದಿರುವುದರ ಹಿಂದೆ ತಲತಲಾಂತರಗಳ ಪರಂಪರೆಗಳ ಅಪರಿಮಿತ ಸೇವೆಯ ಕೊಡುಗೆಗಳು ಎಂದಿಗೂ ಅಚ್ಚಳಿಯದ್ದು. ಕಲಾವಿದರ ಪ್ರಬುದ್ದತೆ, ಸಂಘಟಕರ ಚಾಕಚಕ್ಯತೆಯಿಂದ ಯಕ್ಷಗಾನದಂತಹ ಕಲೆಗಳು ಯಶಸ್ಸಿನಿಂದ ಮುನ್ನಡೆಯುತ್ತದೆ. ಆದರೆ ಇಂದಿನ ಬದಲಾದ ಕಾಲಮಾನದಲ್ಲಿ ಇವುಗಳು ಸವಾಲಾಗುತ್ತಿದೆ. ಆದರೆ ಶ್ರೀಕ್ಷೇತ್ರ ಕೊಲ್ಲಂಗಾನದ ವಿಶಿಷ್ಟ ಕಲಾಪ್ರೇಮ, ಸೇವಾ ಮನೋಭಾವ ಉತ್ತಮ ಕಲಾವಿದರ ತಂಡದೊಂದಿಗೆ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದು ಅವರು ತಿಳಿಸಿದರು. ಸನಾತನ ಧರ್ಮ, ಭಾರತೀಯತೆಯ ಸಮೃದ್ದತೆಯನ್ನು ಕಾಪಿಡುವಲ್ಲಿ ಹಬ್ಬ-ಆಚರಣೆಗಳನ್ನು ಮೂಲ ಪರಿಕಲ್ಪನೆಗೆ ಧಕ್ಕೆಯಾಗದಂತೆ ಮುನ್ನಡೆಸುವಲ್ಲಿ ಸಮಸ್ತ ಹಿಂದೂ ಸಮಾಜ ಒಗ್ಗಟ್ಟಾಗಿ ಕೈಜೋಡಿಸಬೇಕು ಎಂದು ಅವರು ಕರೆನೀಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದು, ಆಶೀರ್ವಚನಗೈದ ಶ್ರೀಕ್ಷೇತ್ರ ಕೊಲ್ಲಂಗಾನದ ತಂತ್ರಿವರ್ಯ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಅವರು, ಹಿರಿಯರ ಪರಂಪರೆಯಲ್ಲಿ ಸಾಗುವ ಮೂಲಕ ಸಂಸ್ಕøತಿಯನ್ನು ಉಳಿಸುವ ಹೊಣೆಯನ್ನು ನಿಭಾಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಕರ್ತವ್ಯವಾಗಿದೆ. ತಾಂತ್ರಿಕ ವಿಧ್ಯೆಯ ಜೊತೆಗೆ ಕಲಾ ಪ್ರೇಮವನ್ನು ಮೈಗೂಡಿಸುವಲ್ಲಿ ತಂತ್ರವಿದ್ಯಾ ತಿಲಕ ಅನಂತಪದ್ಮನಾಭ ತಂತ್ರಿಗಳು ನಿರ್ದೇಶಿಸಿರುವ ಹಾದಿಯಲ್ಲಿ ಸಾಗುವ ಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಗಜ್ಜನನಿ ಶ್ರೀದೇವಿಯ ಆರಾಧನೆ ಸಕಲ ದುರಿತಗಳನ್ನು ನಿವಾರಿಸಿ, ಸರ್ವರಿಗೂ ನೆಮ್ಮದಿಯನ್ನು ನೀಡುವ ಮೂಲಕ ಜನರ ಕಷ್ಟಕೋಟಲೆಗಳಿಗೆ ತಡೆನೀಡಬಲ್ಲ ಮಾತೃ ಹೃದಯಿಯಾಗಿ ಮುನ್ನಡೆಸುತ್ತಾಳೆ ಎಮದ ಅವರು ಯುವ ಸಮುದಾಯ ಭಕ್ತಿ, ನಂಬಿಕೆಗಳಲ್ಲಿ ಶ್ರದ್ದೆ ಇರುವವರಾಗಿ ಸತ್ಪಥದ ಬದುಕಿಗೆ ಹಾತೊರೆಯಬೇಕು ಎಂದು ತಿಳಿಸಿದರು.
ಈ ಸಂದರ್ಭ ಹಿರಿಯ ಅಶಕ್ತ ಧಾರ್ಮಿಕ ಕರ್ಮಿ, ಪತ್ರಕರ್ತ ಭಾಸ್ಕರ ಕಲ್ಲಕಟ್ಟ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಳಿಯಾರು ಶ್ರೀಕ್ಷೇತ್ರದ ಪ್ರಬಂಧಕ ಸೀತಾರಾಮ ಬಳ್ಳುಳ್ಳಾಯ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾ.ಪಂ. ಮಾಜೀ ಸದಸ್ಯ ಮಂಜುನಾಥ ಡಿ.ಮಾನ್ಯ, ಧಾರ್ಮಿಕ, ಸಾಮಾಜಿಕ ಮುಖಂಡ ವೇಣುಗೋಪಾಲ ತತ್ವಮಸಿ ಬೋವಿಕ್ಕಾನ, ಸುಬ್ರಹ್ಮಣ್ಯ ಯಕ್ಷಗಾನ ಕಲಾಸಂಘದ ಗೌರವಾಧ್ಯಕ್ಷ ಕುಮಾರಸ್ವಾಮಿ ಭಟ್ ಪಟ್ಟಾಜೆ, ಪತ್ರಕರ್ತ ಅಖಿಲೇಶ್ ನಗುಮುಗಂ ಉಪಸ್ಥಿತರಿದ್ದು ಮಾತನಾಡಿದರು. ಶರಣ್ಯ, ಮನೋಮಯಿ ಹಾಗೂ ಮನಸ್ವಿನಿ ಪ್ರಾರ್ಥನೆ ಹಾಡಿದರು. ಅನಂತ ಪ್ರಜ್ವಲ್ ಉಪಾಧ್ಯಾಯ ಸ್ವಾಗತಿಸಿ,ರವಿಶಂಕರ ಶೆಟ್ಟಿ ಕೊಲ್ಲಂಗಾನ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶರನ್ನವರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಭಾ ಕಾರ್ಯಕ್ರಮದ ಮೊದಲು ವಿಶೇಷ ರಂಗಪೂಜೆ ನೆರವೇರಿತು. ಬಳಿಕ ನೀರ್ಚಾಲಿನ ವಿಘ್ನೇಶ್ವರ ಯಕ್ಷಗಾನ ಕಲಾಸಂಘದವರಿಂದ ಚಕ್ರೇಶ್ವರ ಪರೀಕ್ಷಿತ ಯಕ್ಷಗಾನ ಪ್ರದರ್ಶನ ನಡೆಯಿತು.



