ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನ, ಸಮಾಜ ವಿಜ್ಞಾನ, ಗಣಿತ, ಐಟಿ ಹಾಗು ವೃತ್ತಿ ಪರಿಚಯ ವಿಷಯಗಳನ್ನೊಳಗೊಂಡ ವಿಜ್ಞಾನ ಮೇಳ ಕಾರ್ಯಕ್ರಮವು ಅ.15 ಮತ್ತು 16 ರಂದು ಕೊಡ್ಲಮೊಗರಿನ ವಾಣಿವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ.
ಮಂಜೇಶ್ವರ ಉಪಜಿಲ್ಲಾ ಮಟ್ಟದ ಹಿರಿಯ, ಕಿರಿಯ ಪ್ರಾಥಮಿಕ, ಹೈಸ್ಕೂಲ್ ಹಾಗು ಹೈಯರ್ ಸೆಕೆಂಡರಿಯ ಸುಮಾರು 90 ಶಾಲೆಗಳ 2500 ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.
ಶಾಲೆಯ ರಕ್ಷಕ ಶಿಕ್ಷಕ ಸಂಘ, ಹಳೆ ವಿದ್ಯಾರ್ಥಿಗಳ ಸಂಘ, ಊರಿನ ಗಣ್ಯರ ಹಾಗು ವಿದ್ಯಾಭಿಮಾನಿಗಳನ್ನೊಳಗೊಂಡ ಸಂಘಟನಾ ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ. ವಿವಿಧ ಕಾರ್ಯಗಳ ಸಂಬಂಧಿಸಿ ಕಾರ್ಯಕ್ರಮ, ಆಹಾರ, ಆರ್ಥಿಕ, ವಸತಿ, ಬೆಳಕು, ಟ್ರೋಫಿ ಇತ್ಯಾದಿ ಉಪ ಸಮಿತಿಗಳನ್ನು ರಚಿಸಲಾಗಿದೆ.
ಇಂದು ಬೆಳಿಗ್ಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಶಂಕರ ಮೋಹನ ಪೂಂಜಾ ಧ್ವಜಾರೋಹಣ ನೆರವೇರಿಸುವರು. ಕಾಸರಗೋಡು ಜಿಲ್ಲಾ ವಿದ್ಯಾಭ್ಯಾಸ ಉಪ ನಿರ್ದೇಶಕರಾದ ಪುಷ್ಪಾ ಕೆ.ವಿ. ಉದ್ಘಾಟಿಸುವರು. ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜಮಾಲುದ್ದೀನ್ ವಹಿಸುವರು. ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕ ದಾನಪ್ಪ ಬಲುರಾಗಿ ಹಾಗು ಕೇರಳ ಕೃಷಿ ವಿಶ್ವವಿದ್ಯಾಲಯ ವರ್ಕಾಡಿ ಇದರ ಮುಖ್ಯಸ್ಥ ಡಾ.ಶಶಿಕಾಂತ್ ಕಾರ್ಯಕ್ರಮದಲ್ಲಿ ಅತಿಥಿಗಳಾಗಿರುತ್ತಾರೆ.
ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಅಬ್ದುಲ್ ಲತೀಫ್, ದೈಗೋಳಿ ಸಾಯಿ ಪ್ರತಿಷ್ಠಾನದ ಟ್ರಸ್ಟಿ ಡಾ.ಉದಯ ಕುಮಾರ್, ಕಲ್ಲೂರ್ ಎಜುಕೇಶನ್ ಟ್ರಸ್ಟ್ ಇದರ ಮುಖ್ಯಸ್ಥ ಇಬ್ರಾಹಿಂ ಹಾಜಿ ಕಲ್ಲೂರ್, ಮಾತೃಸಂಘದ ಅಧ್ಯಕ್ಷೆ ಅವ್ವಮ್ಮ, ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್, ಉಪ ಜಿಲ್ಲಾ ವಿದ್ಯಾಧಿಕಾರಿ ದಿನೇಶ್ ಕೆ, ಶಾಲಾ ಸಂಚಾಲಕ ಶಂಕರ ಮೋಹನ ಪೂಂಜಾ, ಹೈಯರ್ ಸೆಕೆಂಡರಿ ಪ್ರಾಂಶುಪಾಲ ಚಂದ್ರ ಕುಮಾರ್, ಮುಖ್ಯೋಪಾಧ್ಯಾಯಿನಿ ಭಾರತಿ ಮೊದಲಾದವರು ಉಪಸ್ಥಿತರಿರುವರು.
ಅ.16 ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಸರ್ವ ಶಿಕ್ಷಣ ಅಭಿಯಾನ್ ಇದರ ಯೋಜನಾಧಿಕಾರಿ ಡಾ.ಎಂ.ಗಂಗಾಧರನ್ ಉದ್ಘಾಟನೆಯನ್ನು ನೆರವೇರಿಸುವರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಹಮೀದ್ ಕಣಿಯೂರ್ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಡಯಟ್ ಉಪನ್ಯಾಸಕ ಶಶಿಧರನ್, ಕುನ್ನಿಲ್ ಶಾಲೆಯ ನಿರ್ದೇಶಕ ವಿಕ್ರಂದತ್ತ, ವಾಣಿವಿಜಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕಿ ಅನಸೂಯದೇವಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚಂದ್ರಶೇಖರ ರೈ, ಮಂಜೇಶ್ವರ ಬಿ.ಆರ್.ಸಿ. ಯೋಜನಾಧಿಕಾರಿ ಗುರುಪ್ರಸಾದ್ ರೈ, ನೇಶನಲ್ ಹಾರ್ಡ್ವೇರ್ ಇದರ ಕಾರ್ಯ ನಿರ್ವಾಹಕ ಸಿದ್ದೀಕ್ ಟಿ.ಎ. ಮೊದಲಾದವರು ಅತಿಥಿಗಳಾಗಿ ಭಾಗವಹಿಸುವರು.


