ಕುಂಬಳೆ: ಪ್ರಧಾನಿ ನರೇಂದ್ರಮೋದಿಯವರ ವರ್ಚಸ್ಸಿನಿಂದ ಕಗ್ಗೆಟ್ಟಿರುವ ಕೇರಳದ ಎಡ-ಬಲ ರಂಗಗಳು ಬಿಜೆಪಿ ಪಕ್ಷದ ವಿರುದ್ದ ಸಲ್ಲದ ಆರೋಪಗಳನ್ನು ಪ್ರಚುರಪಡಿಸುವಲ್ಲಿ ನಿರತವಾಗಿದೆ. ಎಡಪಕ್ಷ ಹಾಗೂ ಕಾಂಗ್ರೆಸ್ಸ್ ಪಕ್ಷಗಳೆರಡೂ ಅಸ್ತಿತ್ವವನ್ನು ಉಳಿಸುವಲ್ಲಿ ಹೆಣಗುತ್ತಿರುವುದು ಜನವಂಚನೆಯ ಕಾರ್ಯಚಟುವಟಿಕೆಗಳಿಂದ ವೇದ್ಯವಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನ್ಯಾಯವಾದಿ ವಿ.ಎಸ್.ಶ್ರೀಧರನ್ ಪಿಳ್ಳೆ ಅವರು ಟೀಕಿಸಿದರು.
ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಬುಧವಾರ ನಾಯ್ಕಾಪಿನಲ್ಲಿ ಆಯೋಜಿಸಲಾದ ಎನ್ ಡಿ ಎ ಮಂಜೇಶ್ವರ ಮಂಡಲ ಉಮೇದ್ವಾರ ಕುಂಟಾರು ರವೀಶ ತಂತ್ರಿ ಅವರ ಪ್ರಚಾರ ಪರ್ಯಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎರಡನೇ ಹಂತದ ಎನ್ ಡಿ ಎ ಬಹುಮತದಿಂದ ರಾಷ್ಟ್ರದ ಚುಕ್ಕಾಣಿಯನ್ನು ಮತ್ತೆ ಹಿಡಿದಿರುವುದು ಜನರು ಮೋದಿಯವರ ಮೇಲಿರಿಸಿರುವ ವಿಶ್ವಾಸದ ದ್ಯೋತಕವಾಗಿದೆ. ಆದರೆ ಕೇರಳದಲ್ಲಿ ಮೋದಿಯವರ ವರ್ಚಸ್ಸನ್ನು ಕಸಿಯಲು ನಡೆಯುತ್ತಿರುವ ಹುನ್ನಾರಗಳನ್ನು ಜನಸಾಮಾನ್ಯರು ನಿಧಾನವಾಗಿ ಅರ್ಥೈಸತೊಡಗಿದ್ದು, ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಈ ನಿಟ್ಟಿನಲ್ಲಿ ಬಿಜೆಪಿ ಭರವಸೆ ಹೊಂದಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದ ಅತಿ ಹಿಂದುಳಿದಿರುವ ಕ್ಷೇತ್ರವಾಗಿರು ಮಂಜೇಶ್ವರವನ್ನು ಯಾಕಾಗಿ ಅಭಿವೃದ್ದಿ ಪಥದತ್ತ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ ಎಂಬ ನಿರ್ಣಯವನ್ನು ಜನರು ಈ ಬಾರಿ ಗ್ರಹಿಸಬೇಕು ಎಂದ ಅವರು ವೆಟ್ಟಿಯೂರ್ ಕಾವ್, ಕೊನ್ನಿ ಹಾಗೂ ಮಂಜೇಶ್ವರದಲ್ಲಿ ನಡೆಯುವ ಉಪ ಚುನಾವಣೆಗಳಲ್ಲಿ ಎರಡೂ ರಂಗಗಳು ಬಹುತೇಕ ತಮ್ಮ ಮತಗಳನ್ನು ಕಳಕೊಳ್ಳಲಿವೆ ಎಂದು ತಿಳಿಸಿದರು.
ಬಿಜೆಪಿ ಕುಂಬಳೆ ಪಂಚಾಯತಿ ಅಧ್ಯಕ್ಷ ಶಂಕರ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಸಮಿತಿ ಉಪಾಧ್ಯಕ್ಷರುಗಳಾದ ವಿ.ಎಂ.ವೇಲಾಯುಧನ್, ಪ್ರಮೀಳಾ ಸಿ.ನಾೈಕ್, ರಾಷ್ಟ್ರೀಯ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ, ನಿರ್ವಾಹಕ ಸಮಿತಿ ಸದಸ್ಯ ಪಿ.ಕೆ.ಕೃಷ್ಣದಾಸ್, ರಾಜ್ಯ ಸಂಯೋಜಕ ಕೆ.ರಂಜಿತ್, ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಎನ್ ಡಿ ಎ ಚುನಾವಣಾ ಸಮಿತಿ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಪ್ರಧಾನ ಕಾರ್ಯದರ್ಶಿ ಎ.ವೇಲಾಯುಧನ್, ವಿ.ರಮೇಶ್, ರಾಜ್ಯ ಕಾರ್ಯದರ್ಶಿ ವಿ.ಕೆ.ಸಜೀವನ್, ಸದಸ್ಯರುಗಳಾದ ನ್ಯಾಯವಾದಿ ವಿ.ಬಿ.ರವೀಂದ್ರನ್, ಸುರೇಶ್ ಕುಮಾರ್ ಶೆಟ್ಟಿ, ಬಿಡಿಜೆಎಸ್ ಜಿಲ್ಲಾಧ್ಯಕ್ಷ ಗಣೇಶ್ ಪಾರೆಕಟ್ಟೆ, ಬಿಜೆಪಿ ಮಂಜೇಶ್ವರ ಮಂಡಲಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಕುಂಬಳೆ ಪಂಚಾಯತಿ ಸಮಿತಿ ಕಾರ್ಯದರ್ಶಿ ಸುಧಾಕರ ಕಾಮತ್ ಕುಂಬಳೆ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಬಳಿಕ ಎನ್ ಡಿ ಎ ಸ್ಪರ್ಧಿ ಕುಂಟಾರು ರವೀಶ ತಂತ್ರಿ ಅವರು ಗೃಹ ಸಂದರ್ಶನ ನಡೆಸಿ ಮತ ಯಾಚಿಸಿದರು.





