ಮಂಜೇಶ್ವರ: ಕರ್ನಾಟಕ ಸರ್ಕಾರ ಹೊಸತಾಗಿ ನೇಮಕಗೊಳಿಸಿರುವ ವಿವಿಧ ಅಕಾಡೆಮಿಗಳಲ್ಲಿ ಗಡಿನಾಡು ಕಾಸರಗೋಡಿನ ಇಬ್ಬರಿಗೆ ಸ್ಥಾನ ನೀಡುವ ಮೂಲಕ ಮಾನ್ಯತೆ ನೀಡಿದೆ.
ಟಿ.ಎ.ಎನ್. ಖಂಡಿಗೆ(ಪುಸ್ತಕ ಪ್ರಾಧಿಕಾರ):
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿ ಟಿ.ಎ.ಎನ್ ಖಂಡಿಗೆ ಅವರನ್ನು ನೇಮಕಮಾಡಿದೆ. ಟಿ.ಎ.ಎನ್.ಖಂಡಿಗೆ ಮೂಲತಃ ಎಣ್ಮಕಜೆ ಗ್ರಾ.ಪಂ. ಪೆರ್ಲ ಸಮೀಪದ ಖಂಡಿಗೆ ನಿವಾಸಿಯಾಗಿದ್ದು, ಕುಂಜತ್ತೂರು ಕಣ್ವತೀರ್ಥದಲ್ಲಿ ವಾಸಿಸುತ್ತಿದ್ದಾರೆ. ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಇವರು ಸಾಹಿತಿಯಾಗಿ, ಅಕ್ಷರ ಕ್ರಾಂತಿಯ ಹರಿಕಾರರಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಮನೆಯಲ್ಲಿ ಪ್ರತಿ ತಿಂಗಳೂ ಈ ಹೊತ್ತಿಗೆ ಈ ಹೊತ್ತಗೆ ಎಂಬ ಪುಸ್ತಕ ಪುಮರ್ಶಾ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಇವರು 12 ಕಾರ್ಯಕ್ರಮಗಳನ್ನು ಪೂರೈಸಿದ್ದಾರೆ. ಇವರ ಪತ್ನಿ ಶಿಕ್ಷಕಿ ಕವಿತಾ ಕೂಡ್ಲು ಗಡಿನಾಡಿನ ಉದಯೋನ್ಮುಖ ಸಾಹಿತಿಯೂ ಆಗಿದ್ದಾರೆ.
ಯೋಗೀಶ್ ರಾವ್ ಚಿಗುರುಪಾದೆ(ಯಕ್ಷಗಾನ ಅಕಾಡೆಮಿ):
ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಮೀಯಪದವು ಸಮೀಪದ ಚಿಗುರುಪಾದೆಯ ಯೋಗೀಶ್ ರಾವ್ ಅವರಿಗೆ ಸ್ಥಾನ ಒಲಿದುಬಂದಿದೆ. ಯೋಗೀಶ್ ರಾವ್ ಅವರು ಮಂಗಳೂರಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರದಲ್ಲಿ ಉದ್ಯೋಗಿಯಾಗಿದ್ದು, ಯಕ್ಷಗಾನ ಕ್ಷೇತ್ರದಲಲಿ ತೊಡಗಿಸಿಕೊಂಡಿದ್ದಾರೆ. ಯಕ್ಷಗಾನ ಪ್ರಸಂಗ ರಚನೆ, ಸಂಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದು, ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಯಕ್ಷಗಾನ ಟ್ರಸ್ಟ್ ನಲ್ಲಿ ಸದಸ್ಯರಾಗಿದ್ದಾರೆ.
ಈ ಹಿಂದೆಯೂ ಕಾಸರಗೋಡಿನ ಪ್ರಮುಖರಾದ ರಂಗ ನಟ ಕಾಸರಗೋಡು ಚಿನ್ನಾ(ಕೊಂಕಣಿ ಸಾಹಿತ್ಯ ಅಕಾಡೆಮಿ-ಅಧ್ಯಕ್ಷ), ನಾರಾಯಣ ಶೆಟ್ಟಿ(ಯಕ್ಷಗಾನ ಅಕಾಡೆಮಿ-ಸದಸ್ಯ), ಎಂ.ಉಮೇಶ ಸಾಲ್ಯಾನ್(ನಾಟಕ-ಅಧ್ಯಕ್ಷ), ತಾರಾನಾಥ ವರ್ಕಾಡಿ(ಯಕ್ಷಗಾನ -ಸದಸ್ಯ) ಅವರುಗಳು ವಿವಿಧ ಸ್ಥಾನಗಳನ್ನು ಅಲಂಕರಿಸಿದ್ದರು.


