ಮಂಜೇಶ್ವರ: ಕರೊನಾ ಹರಡದಂತೆ ದೇಶಾದ್ಯಂತ ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ. ಅಂತರಾಜ್ಯ ಗಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಆದರೆ ಕರ್ನಾಟಕ-ಕೇರಳ ಗಡಿಯ ತಲಪಾಡಿಯನ್ನು ಸಂಪೂರ್ಣ ಮುಚ್ಚಿ ಉಳಿದ ಸಂಪರ್ಕದ ರಸ್ತೆಗಳನ್ನು ಮಣ್ಣು ಹಾಕಿ ಮುಚ್ಚಿರುವ ಅಧಿಕಾರಿಗಳ ನಡೆಗೆ ಜನರಿಂದ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿದೆ.
ಈ ಹಿನ್ನೆಯಲ್ಲಿ ಗಡಿ ಭಾಗದಿಂದ ಮಂಗಳೂರು ಆಸ್ಪತ್ರೆಗೆ ತುರ್ತು ಸಂದರ್ಭಗಳಲ್ಲೂ ತೆರಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅನ್ಯ ರಾಜ್ಯದ ಯುವತಿಯೊಬ್ಬಳು ಮೊಗ್ರಾಲ್ ನಲ್ಲಿ ಆಂಬ್ಯುಲೆನ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.
ಅಲ್ಲದೆ ತೂಮಿನಾಡು ಹಮೀದ್ ಎಂಬವರನ್ನು ಉಸಿರಾಟದ ತೊಂದರೆಯಿಂದ ಗಡಿ ಭಾಗದಿಂದ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದೆ ಮರಣ ಸಂಭವಿಸಿರುವ ಬಗ್ಗೆಯೂ ವರದಿಯಾಗಿದೆ.
ಸಹಜವಾಗಿ ಗಡಿಭಾಗದಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಮುಚ್ಚಲಾಗುತ್ತದೆ. ಅಲ್ಲಿ ದಿನದ 24 ಗಂಟೆಯೂ ಪೆÇಲೀಸ್ ಪಹರೆಯನ್ನು ಹಾಕಲಾಗುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಬಹುತೇಕ ಗಡಿಗಳನ್ನು ಕಂದಕಗಳನ್ನು ಕೊರೆದು ಹಾಗೂ ಮಣ್ಣುಗಳನ್ನು ರಾಶಿಹಾಕಿ ಮುಚ್ಚಲಾಗಿದೆ. ಮಂಜೇಶ್ವರ ಭಾಗದಿಂದ ವಿಟ್ಲದ ಸಾರಡ್ಕ ಮಾರ್ಗವಾಗಿ ಕೇರಳ ಸಂಪರ್ಕ ಕಲ್ಪಿಸುವ ರಸ್ತೆ, ಕೊಣಾಜೆಯಿಂದ ಪಾತೂರು ಮಾರ್ಗವಾಗಿ ಕೇರಳ ಸಂಪರ್ಕ ಕಲ್ಪಿಸುವ ರಸ್ತೆ, ಪೆರುವಾಯಿಯಿಂದ ಕೇರಳ ಸಂಪರ್ಕಿಸುವ ಬೆರಿಪದವು, ಹಾಗೂ ಸುಳ್ಯ ಜಾಲ್ಸೂರು ರಸ್ತೆಯ ಗಾಳಿಮುಖ ರಸ್ತೆಗಳನ್ನು ಸಂಪೂರ್ಣ ಮುಚ್ಚಲಾಗಿದೆ.
ಗಡಿಯಲ್ಲಿ ಜೆಸಿಬಿ ಮೂಲಕ ಮಣ್ಣು ಹಾಕಿ ಯಾವುದೇ ವಾಹನಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಪರ್ಕ ಕಲ್ಪಿಸದಂತೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಅಧಿಕಾರಿಗಳ ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಎರಡು ರಾಜ್ಯಗಳ ಗಡಿ ಭಾಗದ ಜನರು ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಹೋಗಲು ಗಡಿ ರಾಜ್ಯದ ಆಸ್ಪತ್ರೆಯನ್ನೇ ಅವಲಂಬಿಸುತ್ತಾರೆ. ಆದರೆ ಮಾನವೀಯತೆಯನ್ನು ಮರೆತು ಮಣ್ಣು ಹಾಕಿ ಗಡಿ ಮುಚ್ಚಿರುವುದುದು ಯಾಕಾಗಿ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಗಡಿಗಳನ್ನು ಬ್ಯಾರಿಕೇಡ್ ಮೂಲಕ ಮುಚ್ಚುವುದು ಸರಿ. ಹೀಗಿದ್ದರೆ ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಹೋಗಲು ಅನುಕೂಲವಾಗುತ್ತದೆ. ಆದರೆ ಮಣ್ಣು ಹಾಕಿ ಮುಚ್ಚಿದರೆ ಗಡಿ ಭಾಗದ ಜನರು ಆಸ್ಪತ್ರೆಗಳಿಗೆ ಹೋಗಬೇಕಾಗಿ ಬಂದರೆ ಏನು ಮಾಡುವುದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಎರಡೂ ರಾಜ್ಯಗಳ ಗಡಿ ಭಾಗದ ತಾಲೂಕಿನ ಅಧಿಕಾರಿಗಳು ಪರಸ್ಪರ ಮಾತುಕತೆ-ಸಮನ್ವಯ ಸಮಿತಿ ಸಭೆಗಳ ಮೂಲಕ ಬಗೆಹರಿಸಬೇಕಾಗಿದೆ. ಕರೊನಾದಂತಹಾ ತುರ್ತು ಸಂದರ್ಭದಲ್ಲಿ ಪರಸ್ಪರ ಸಹಕಾರ ಹಾಗೂ ಮನುಷ್ಯತ್ವ ಅತ್ಯಗತ್ಯ ಎಂಬುವುದನ್ನು ಮರೆಯಬಾರದು ಎಂಬ ಮಾತುಗಳು ಪ್ರಜ್ಞಾವಂತ ನಾಗರಿಕ ವಲಯದಿಂದ ವ್ಯಕ್ತವಾಗಿದೆ.