ಕುಂಬಳೆ: ಕೋವಿಡ್19 ಮಹಾಮಾರಿಗೆ ಲೋಕವೇ ತಲ್ಲಣಗೊಂಡು ದೇಶ ವ್ಯಾಪ್ತಿ ಲಾಕ್ ಡೌನ್ ಘೋಷಿಸಿದಾಗ ಸ್ತಬ್ದಗೊಂಡು ನಿರಾಶ್ರಿತರಾದವರಿಗೆ ಅನಂತಪುರ ಶ್ರೀ ಅನಂತಪದ್ಮನಾಭ ದೇವಸ್ಥಾನ ಆಡಳಿತ ಸಮಿತಿ ಆಹಾರ ವಸ್ತುಗಳನ್ನು ಪೂರೈಸುವ ಕಾರ್ಯ ನಡೆಸಿದೆ.
ಸರೋವರ ಕ್ಷೇತ್ರ ಎಂದೇ ಜಗತ್ ಪ್ರಸಿದ್ಧಗೊಂಡಿರುವ ಅನಂತಪುರ ಕ್ಷೇತ್ರವು ಎಲ್ಲಾ ಆರಾಧನಲಯಗಳಂತೆ ಕೋವಿಡ್19 ನಿಗ್ರಹ ಕ್ರಮದಂಗವಾಗಿ ಸರ್ಕಾರದ ಆದೇಶ ಮೇರೆಗೆ ಲಾಕ್ ಡೌನ್ನಲ್ಲಿ ಪಾಲ್ಗೊಂಡಿದೆ. ಈ ಸಂದರ್ಭದಲ್ಲಿ ಅನಂತಪುರ ದೇವಸ್ಥಾನ ಪರಿಸರದಲ್ಲಿ ನೆಟ್ಟು ಬೆಳೆಸಿದ ಸಾವಯವ ತರಕಾರಿ ಮತ್ತು ದೇವಸ್ಥಾನದ ದೈನಂದಿನ ಭಕ್ತರ ಬೋಜನಕ್ಕಾಗಿರುವ ಅಕ್ಕಿಯನ್ನು ಬಡ ಕುಟುಂಬಗಳಿಗೆ ವಿತರಿಸುವ ಮೂಲಕ ಮಾದರಿಯಾಗಿದೆ. ಮಲಬಾರ್ ದೇವಸ್ವಂ ಬೋರ್ಡ್ ಅಧೀನತೆಯಲ್ಲಿ ಕಾರ್ಯಚರಿಸುವ ಕ್ಷೇತ್ರ ಆಡಳಿತ ಸಮಿತಿ ಸಹಕಾರದಲ್ಲಿ ಟ್ರಸ್ಟಿ ಸದಸ್ಯರಾದ ಜಯಪ್ರಕಾಶ್ ಶೆಟ್ಟಿ, ಉದಯ್ ಕುಮಾರ್ ಗಟ್ಟಿ ನೇತೃತ್ವದಲ್ಲಿ ಸ್ಥಳೀಯರ ಸಹಭಾಗಿತ್ವದಲ್ಲಿ ಈ ಕಾರ್ಯ ನಡೆಸಿದೆ.
ಕುಂಬಳೆ ಗ್ರಾಮ ಪಂಚಾಯತಿಯ ಕುಂಟಗೇರಡ್ಕ, ಶಾಂತಿ ನಗರ ಮೊದಲಾದ ಕಾಲನಿ ಪ್ರದೇಶ ಮತ್ತು ರೇಶನ್ ಕಾರ್ಡ್ ಕೂಡಾ ಇಲ್ಲದೆ ಅನ್ಯ ರಾಜ್ಯದಿಂದ ಕೆಲಸಕ್ಕಾಗಿ ಬಂದು ಗುಡಿಸಲು ಕಟ್ಟಿ ವಾಸಿಸುವ ಕೂಲಿ ಕಾರ್ಮಿಕ ಕುಟುಂಬಗಳನ್ನು ಆಯ್ದು ಈ ಆಹಾರ ಸಾಮಾಗ್ರಿಗಳನ್ನು ವಿತರಿಸಿದೆ.
ಸುಮಾರು ಮೂರು ಕ್ವಿಂಟಾಲ್ ಅಕ್ಕಿ, ಒಂದೂವರೆ ಕ್ವಿಂಟಾಲ್ ಸೌತೆಕಾಯಿ, ಕುಂಬಳಕಾಯಿ ಮೊದಲಾದ ಸಾಮಾಗ್ರಿಗಳು ಒಳಗೊಂಡಿದ್ದು ಸುಮಾರು 70 ಬಡ ಕುಟುಂಬಗಳಿಗೆ ವಿತರಿಸಿದರು. ತುರ್ತು ಪರಿಸ್ಥಿತಿಯಲ್ಲಿ ಮಾನವತ್ವದಲ್ಲಿ ದೈವತ್ವ್ವವನ್ನು ಕಂಡ ಕ್ಷೇತ್ರ ಆಡಳಿತ ಸಮಿತಿಯ ಈ ಕಾರ್ಯ ಚಟುವಟಿಕೆ ಎಲ್ಲರಿಗೂ ಮಾದರಿಯಾಗಿದ್ದು ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ.