ಬದಿಯಡ್ಕ: ಕೋವಿಡ್ 19 ಕರೊನಾ ವೈರಸ್ ತುರ್ತು ನಿಗಾ ಹಿನ್ನೆಲೆಯಲ್ಲಿ ಬದಿಯಡ್ಕ ಗ್ರಾ.ಪಂ. ನೇತೃತ್ವದಲ್ಲಿ ಶುಕ್ರವಾರ ಸಮುದಾಯ ಅಡುಗೆ ತಯಾರಿಗೆ ಚಾಲನೆ ನೀಡಲಾಯಿತು. ಕುಟುಂಬಶ್ರೀ ನೇತೃತ್ವದಲ್ಲಿ ಜಾರಿಗೊಳಿಸಲಾಗುವ ಸಮುದಾಯ ಅಡುಗೆ ವ್ಯವಸ್ಥೆಯಡಿ ಗ್ರಾ.ಪಂ. ವ್ಯಾಪ್ತಿಯ 19 ವಾರ್ಡ್ಗಳಿಗೂ ಆಹಾರಗಳನ್ನು ಪೂರೈಸಲಾಗುವ ಗುರಿ ಹೊಂದಲಾಗಿದೆ.
ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸಮುದಾಯ ಅಡುಗೆ ಕೇಂದ್ರವನ್ನು ಉದ್ಘಾಟಿಸಿದರು. ಕಾರ್ಯದರ್ಶಿ ಪ್ರದೀಪನ್ ಸರ್ಕಾರದ ಸುತ್ತೋಲೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಗ್ರಾ.ಪಂ.ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಗ್ರಾ.ಪಂ.ಉದ್ಯೋಗಸ್ಥರು, ಕುಟುಂಬಶ್ರೀ ಸದಸ್ಯೆಯರು, ಸಮಾಜ ಸೇವಾ ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು.
ಆಶ್ರಯ ಯೋಜನೆಯವರಿಗೆ ಮಾತ್ರ!
ಪ್ರಸ್ತುತ ಸಮುದಾಯ ಅಡುಗೆ ಯೋಜನೆಯು ಗ್ರಾ.ಪಂ. ವ್ಯಾಪ್ತಿಯ ಸುಮಾರು 14 ಕೇಂದ್ರಗಳ ಮೂಲಕ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಬದಿಯಡ್ಕ ಗ್ರಾ.ಪಂ. ವ್ಯಾಪ್ತಿಯು ಗ್ರಾಮೀಣ ಪ್ರದೇಶಗಳನ್ನು ಹೆಚ್ಚು ಸಂಖ್ಯೆಯಲ್ಲಿ ಹೊಂದಿರುವುದರಿಂದ ಎಲ್ಲಾ ವಾರ್ಡ್ಗಳಿಗೂ ತಲಪಿಸಲು ಸುಲಭ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗುರಿತಿಸಲ್ಪಟ್ಟ ಕೇಂದ್ರಗಳ ಮೂಲಕ ಆಹಾರ ತಯಾರಿಸಿ ವಿತರಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ಸರ್ಕಾರದ ನಿಖರ ಲೆಕ್ಕಾಚಾರದ ಆಧಾರದಲ್ಲಿ ತೀವ್ರ ನಿರ್ಗತಿಕರಾಗಿ ಗುರುತಿಸಲ್ಪಟ್ಟು ಆಶ್ರಯ ಯೋಜನೆಯಲ್ಲಿ ಹೆಸರು ಪಡೆದವರು ಈ ಸಮುದಾಯ ಅಡುಗೆ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ ಎಂದು ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ತಿಳಿಸಿರುವರು.