ಕುಂಬಳೆ: ಅನಂತಪುರದಲ್ಲಿ ಏ.10 ರಿಂದ 12ರ ವರೆಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಕನ್ನಡ ಸಿರಿ ಸಮ್ಮೇಳನವನ್ನು ಕರೋನಾ ಆತಂಕದ ಹಿನ್ನೆಲೆಯಲ್ಲಿ ದಿನಾಂಕ ಮುಂದೂಡಲಾಗಿದೆ.
ವಿಶ್ವ ವ್ಯಾಪಕವಾಗಿ ಆತಂಕಕ್ಕೆ ಕಾರಣವಾಗುತ್ತಿರುವ ಕರೋನಾ ವೈರಸ್ ನ ಪರಿಣಾಮ ಕೇರಳದಲ್ಲಿ 12 ಮಂದಿಗೆ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಮಂಗಳವಾರ ವಿಶೇಷ ಸಚಿವ ಸಂಪುಟ ಸಭೆ ನಡೆಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸದ್ಯದ ಒಂದು ತಿಂಗಳ ಮಟ್ಟಿಗೆ ರಾಜ್ಯಾದ್ಯಂತ ಉತ್ಸವಾಚರಣೆಗಳನ್ನು ನಡೆಸದಂತೆ ಕಡ್ಡಾಯ ಆದೇಶ ನೀಡಿರುವರು. ಜೊತೆಗೆ ಅಂಗನವಾಡಿಗಳ ಸಹಿತ ಏಳನೇ ತರಗತಿಯ ವರೆಗೆ ಶಾಲಾ ಚಟುವಟಿಕೆ, ಪರೀಕ್ಷೆಗಳನ್ನು ನಿರ್ಬಂಧ ಹೇರಿದ್ದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ರವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿಗಳ ಮನವಿಯ ಪ್ರಕಾರ ಕನ್ನಡ ಸಿರಿ ಸಮ್ಮೇಳನವನ್ನು ಮುಂದಿನ ಮೇ 1 ರಿಂದ 3ರ ವರೆಗೆ ನಡೆಸಲು ತೀರ್ಮಾನಿಸಿರುವುದಾಗಿ ಸಮ್ಮೇಳನದ ಕೇಂದ್ರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಕನ್ನಡ ಸಿರಿ ಸಮ್ಮೇಳನದ ಗೌರವಾಧ್ಯಕ್ಷ ಟಿ.ಎಸ್.ನಾಗಾಭರಣ, ಸರ್ವಾಧ್ಯಕ್ಷ ಸರ್ವೋತ್ತಮ ಶೆಟ್ಟಿ ಅಬುದಾಬಿ, ಅಧ್ಯಕ್ಷ ರಾಮ ಪ್ರಸಾದ್ ಕಾಸರಗೋಡು, ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ, ಕಾರ್ಯಾಧ್ಯಕ್ಷರುಗಳಾದ ಎಂ.ವಿ.ಮಹಾಲಿಂಗೇಶ್ವರ ಭಟ್, ಎಸ್.ವಿ.ಭಟ್, ಪ್ರೊ.ಎ.ಶ್ರೀನಾಥ್, ಜಯದೇವ ಖಂಡಿಗೆ, ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಗೋಪಾಲ ಶೆಟ್ಟಿ ಅರಿಬೈಲು ಅವರು ಸಂಯುಕ್ತ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಪೂರ್ವ ನಿಯೋಜಿತ ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಆದರೆ ದಿನಾಂಕದಲ್ಲಿ ಮಾತ್ರ ಅನಿವಾರ್ಯ ಕಾರಣಗಳಿಂದ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.


