ಕಾಸರಗೋಡು: ಕೋವಿಡ್ 19 ಸೋಂಕು ಬಾಧಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಹೋದರರು ಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಬೋವಿಕ್ಕಾನದ ಆಲೂರು ನಿವಾಸಿಗಳಾದ ಅಶ್ರಫ್ ಮತ್ತು ಅಬ್ಬಾಸ್ ಈ ರೀತಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡವರು. ಕೊಲ್ಲಿರಾಷ್ಟ್ರದಲ್ಲಿದ್ದ ಅಬ್ಬಾಸ್ ಅವರು ಮಾ.17ರಂದು ಊರಿಗೆ ಮರಳಿದ್ದರು. ಇಲ್ಲಿ ನಡೆಸಲಾದ ತಪಾಸಣೆಯಿಂದ ಇವರಿಗೆ ಕೋವಿಡ್ 19 ಸೋಂಕು ತಗುಲಿರುವುದು ಖಚಿತಗೊಂಡಿತ್ತು. ಆರಂಭದಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಗೆ ನಂತರ ಪೆರಿಯ ಪಿ.ಎಚ್.ಸಿಯ ನಿಗಾ ವಾರ್ಡಿಗೆ ದಾಖಲಿಸಲಾಗಿತ್ತು. ಇದೇ ವೇಳೆ ಅಶ್ರಫ್ ಮತ್ತು ಕುಟುಂಬದ ಇತರ ಸದಸ್ಯರನ್ನು ಮನೆಯಿಂದ ಕಾಞಂಗಾಡಿನ ಮನೆಯೊಂದರ ನಿಗಾಕ್ಕೆ ಸ್ಥಳಾಂತರಿಸಲಾಗಿತ್ತು. ಕೆಲವು ದಿನನಂತರ ನಡೆಸಿದ ತಪಾಸಣೆಯಲ್ಲಿ ಅಶ್ರಫ್ ಅವರಿಗೂ ಸೋಂಕು ತಗುಲಿರುವುದು ಖಚಿತವಾಗಿತ್ತು.
ಈಗ ಇಬ್ಬರೂ ಪೂರ್ಣ ರೂಪದಲ್ಲಿ ಗುಣಮುಖರಾಗಿದ್ದಾರೆ. ಅಬ್ಬಾಸ್ ಅವರು ಏ.13ರಂದು, ಅಶ್ರಫ್ ಅವರು ಏ.14ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ತಾವು ದಾಖಲಾಗಿದ್ದ ಆಸ್ಪತ್ರೆಗಳಲ್ಲಿ ವೈದ್ಯರು, ದಾದಿಯರು ಸಹಿತ ಸಿಬ್ಬಂದಿ ಅತ್ಯಂತ ಕಾಳಜಿಯಿಂದ ತಮಗೆ ಶುಶ್ರೂಷೆ ಒದಗಿಸಿದ್ದಾರೆ ಎಂದು ಈ ಸಹೋದರರು ಕೃತಜ್ಞತೆಯಿಂದ ತಿಳಿಸಿದರು.


