ನವದೆಹಲಿ: ಮೇ ಮೂರಕ್ಕೆ ಗ್ರೀನ್ ಝೋನ್ ಭಾಗಗಳಲ್ಲಿ ಲಾಕ್ ಡೌನ್ ತೆರವುಗೊಳ್ಳುವ ಸಾಧ್ಯತೆಯಿದೆ. ದಿನದಿಂದ ದಿನಕ್ಕೆ ಕೇಂದ್ರ ಸರಕಾರ ನಿಬರ್ಂಧಗಳನ್ನು ಸಡಿಲಗೊಳಿಸುತ್ತಿದೆ. ಕೆಲವೊಂದು ಕಡೆ, ಜನಜೀವನ ನಿಧಾನವಾಗಿ ಸಹಜಸ್ಥಿತಿಗೆ ಬರುತ್ತಿದೆ.
ಆದರೆ, ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಐನರೂರ ಗಡಿ ದಾಟಿದೆ. ಇದುವರೆಗೆ ಒಟ್ಟಾರೆಯಾಗಿ ದೇಶದಲ್ಲಿ ಸೋಂಕಿತರ ಸಂಖ್ಯೆ 26,496.
ಈ ಮಧ್ಯೆ, ವಿಜ್ಞಾನಿಗಳು ನಡೆಸಿದ ಅಧ್ಯಯನದ ವರದಿ ಪ್ರಕಟವಾಗಿದ್ದು, ಅದರಲ್ಲಿ ಬೆಚ್ಚಿಬೀಳಿಸುವ ಅಂಶಗಳಿವೆ. ಕೊರೊನಾದ ಹಲವು ಆಯಾಮಗಳನ್ನು ಅಧ್ಯಯನ ನಡೆಸಿದ ನಂತರ ಈ ವರದಿ ಪ್ರಕಟವಾಗಿದೆ. ಬೆಂಗಳೂರು ಮತ್ತು ಮುಂಬೈನಲ್ಲಿ ಅಧ್ಯಯನ ನಡೆಸಿ, ಮತ್ತು ಈ ಎರಡು ನಗರವನ್ನು ಮಾದರಿಯಾಗಿ ಇಟ್ಟುಕೊಂಡು, ಈ ವರದಿಯನ್ನು ಸಿದ್ದಪಡಿಸಲಾಗಿದೆ. ವರದಿಯಲ್ಲಿ ಚೀನಾದ ಬೆಳವಣಿಗೆಗಳನ್ನು ಉಲ್ಲೇಖಿಸಲಾಗಿದೆ.
ಸಾಮಾಜಿಕ ಅಂತರ ಬಹುಮುಖ್ಯ ಕೊರೊನಾ ಮಟ್ಟಹಾಕಲು ಇನ್ನೂ ಲಸಿಕೆ ಸಿಗದೇ ಇರುವ ಕಾರಣ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹುಮುಖ್ಯ ಎಂದು ವರದಿಯಲ್ಲಿ ಹೇಳಲಾಗಿದ್ದು, ಐಸೋಲೇಶನ್, ಕ್ವಾರಂಟೈನ್ ಮುಂತಾದ ಕ್ರಮಗಳನ್ನು, ವಿಶ್ಲೇಷಿಸಿ ವರದಿಯನ್ನು ಸಿದ್ದಪಡಿಸಲಾಗಿದೆ.
ಸದ್ಯಕ್ಕೆ ಲಾಕ್ ಡೌನ್ ಪರಿಣಾಮಕಾರಿಯದ ನಡೆ:
ಸದ್ಯಕ್ಕೆ ಲಾಕ್ ಡೌನ್ ಪರಿಣಾಮಕಾರಿಯದ ನಡೆಯಾಗಿದ್ದರೂ, ಮುಂಬರುವ ದಿನಗಳಲ್ಲಿ ಅಂದರೆ, ಜುಲೈ ನಂತರ ಈ ಮಾರಣಾಂತಿಕ ಸೋಂಕು ಮತ್ತೆ ದಾಳಿ ಇಡುವ ಸಾಧ್ಯತೆಯಿದೆ. ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಮಾನ್ಸೂನ್ ಆರಂಭವಾದ ನಂತರ, ಕೊರೊನಾ ವೈರಾಣು ಎರಡನೇ ಅಲೆಯಾಗಿ ದೊಡ್ಡ ಪ್ರಮಾಣದಲ್ಲಿ ಆವರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಸೋಂಕಿನ ಹರಡುವಿಕೆಯ ಪ್ರಮಾಣ:
ಲಾಕ್ ಡೌನ್ ತೆರವುಗೊಳಿಸಿದ ನಂತರ, ಸಾರ್ವಜನಿಕರು ಯಾವರೀತಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಕ್ಕೆ ಮಹತ್ವವನ್ನು ನೀಡುತ್ತಾರೋ, ಅದರ ಮೇಲೆ ಸೋಂಕಿನ ಹರಡುವಿಕೆಯ ಪ್ರಮಾಣ ನಿರ್ಧಾರವಾಗಲಿದೆ. ಈ ವೇಳೆ, ವೈರಾಣಿನ ಪ್ರಭಾವ ಇಳಿಮುಖವಾಗಲೂ ಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್:
"ದೇಶ ಸಾಮಾನ್ಯ ಚಟುವಟಿಕೆಗೆ ಮರಳಿದ ನಂತರ, ಸೋಂಕು ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ. ಪ್ರಯಾಣದ ಮೇಲಿನ ಕೆಲವು ನಿಬರ್ಂಧಗಳನ್ನು ಸಡಿಲಗೊಳಿಸಿದ ನಂತರ ಚೀನಾದಲ್ಲಿ ಈ ಲಕ್ಷಣಗಳು ಕಾಣಿಸುತ್ತಿವೆ" ಎಂದು ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸಂಶೋಧಕರು ಪಿಟಿಐಗೆ ತಿಳಿಸಿದ್ದಾರೆ.