ಬದಿಯಡ್ಕ: ಕರೊನಾ ಮಹಾ ಮಾರಿಯನ್ನುಪಾರಂಪರಿಕ ಔಷಧೀಯ ವಿಧಾನದಿಂದ ಗುಣಪಡಿಸಲು ಸಾಧ್ಯವಿದೆ. ಕರೊನಾ ರೋಗ ನಿರೋಧಕ ಶಕ್ತಿ ವೃದ್ಧಿಸಲು ಬಜೆ ಅಥವಾ ವಚೆ ಗಿಡಕ್ಕೆ ಸಾಧ್ಯವಿದ್ದು, ಈ ಬಗ್ಗೆ ಗಮನಹರಿಸುವಂತೆ ಕುಂಬಳೆ ಸೀಮೆಯ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ.
ಬಜೆಯ ಔಷಧೀಯ ಗುಣಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಪತ್ರ ಪ್ರಧಾನಮಂತ್ರಿ ಕಚೇರಿಯಲ್ಲಿ ಸ್ವೀಕೃತಗೊಂಡಿರುವ ಬಗ್ಗೆ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ಅವರಿಗೆ ಮಾಹಿತಿಯೂ ತಲುಪಿದೆ. ಅಕೋರಸ್ ಕಲಾಮಸ್ ಇದರ ವೈಜ್ಞಾನಿಕ ಹೆಸರಾಗಿದ್ದು (acorus calamus), , ಇದರ ಕಾಂಡವನ್ನು ಗೋಮೂತ್ರದಲ್ಲಿ ಅದ್ದಿ ತೇಯ್ದು, ಇದರ ಅರ್ಧ ಚಮಚ ರಸವನ್ನು ಜೇನು ತುಪ್ಪದೊಂದಿಗೆ ದಿನಕ್ಕೆರಡು ಬಾರಿ ಸೇವಿಸಿದಲ್ಲಿ, ದೇಹದಲ್ಲಿ ಕರೊನಾ ವೈರಸ್ ವಿರೋಧಿಸುವ ರೋಗನಿರೋಧಕ ಶಕ್ತಿವೃದ್ಧಿಸಲು ಕಾರಣವಾಗುತ್ತದೆ. ಕರೊನಾ ಮಹಾ ಮಾರಿಯನ್ನು ಎದುರಿಸಬಹುದು ಎಂದೂ ಪತ್ರದಲ್ಲಿ ವಿವರಿಸಲಾಗಿತ್ತು.
ಕುಂಬಳೆ ಸೀಮೆಯ ಪ್ರಾಚೀನ ಮನೆತನಗಳಲ್ಲೊಂದಾದ ದೇಲಂಪಾಡಿ ತಂತ್ರಿಗಳ ಮನೆತನವು ಕುಂಬಳೆ ಸೀಮೆಗೆ ಪ್ರಾಚೀನ ಕಾಲದಲ್ಲಿ ತನ್ನದೇ ಕೊಡುಗೆಗಳ ಮೂಲಕ ಗಮನ ಸೆಳೆದಿತ್ತು. ಹಿರಿಯರಿಂದ ಬಳುವಳಿಯಾಗಿ ಬಂದಿರುವ ಪುರಾತನ ತಾಳೆ ಓಲೆ, ತಾಮ್ರ ಶಾಸನ, ಶಿಲಾ ಶಾಸನವನ್ನು ತಮ್ಮ ಸಂಗ್ರಹದಲ್ಲಿ ಹೊಂದಿರುವ ದೇಲಂಪಾಡಿ ಬಾಲಕೃಷ್ಣ ತಂತ್ರಿ ಅವರು, ಇವುಗಳಲ್ಲಿ ದಾಖಲಾಗಿರುವ ಔಷಧೀಯ ಗುಣಗಳ ಬಗ್ಗೆ ಮತ್ತಷ್ಟು ಮಾಹಿತಿ ನೀಡಲು ಸಿದ್ಧ ಎಂದು ತಿಳಿಸಿದ್ದಾರೆ.



