ಮಂಜೇಶ್ವರ: ಲಾಕ್ ಡೌನ್ ಬಳಿಕ ಮಂಜೇಶ್ವರದ ಮೀನು ಕಾರ್ಮಿಕರ ಸ್ಥಿತಿ ಅತಂತ್ರವಾಗಿದೆ. ಇತರ ಯಾವುದೇ ಆದಾಯ ಮಾರ್ಗಗಳಿಲ್ಲದೆ ಕಾರ್ಮಿಕಕಾರ ಕುಟುಂಬವು ಸಂಕಷ್ಟದಿಂದ ಜೀವನವನ್ನು ಸಾಗಿಸುತ್ತಿದೆ. ಇದೀಗ ಮತ್ತೆ ಲಾಕ್ ಡೌನ್ ವಿಸ್ತರಣೆಯಾಗುವುದರೊಂದಿಗೆ ಜೀವನ ಮಾರ್ಗಕ್ಕೆ ಏನು ಮಾರ್ಗವೆಂದು ಡಿಕ್ಕೆಟ್ಟು ನೀರಾರು ಕುಟುಂಬಗಳು ಅತಂತ್ರವಾಗಿದೆ.
ಅಲ್ಪ ದಿನಗಳ ಹಿಂದೆ ಮಂಗಳೂರು ಭಾಗದಿಂದ ಯಾವುದಾದರೂ ಒಳ ದಾರಿಗಳಲ್ಲಿ ಮಂಜೇಶ್ವರಕ್ಕೆ ಮೀನು ಸಾಗಾಟ ನಡೆಯುತ್ತಿದ್ದರೂ ಇದೀಗ ಲಾಕ್ ಡೌನ್ ಗಡಿ ಪ್ರದೇಶಗಳಲ್ಲಿ ಮಾತ್ರವಲ್ಲ ಇತರ ಒಳ ರಸ್ತೆಗಳಲ್ಲೂ ಪೆÇೀಲೀಸರ ಬಿಗಿ ಬಂದೋಬಸ್ತ್ನಿಂದಾಗಿ ಮೀನುಗಳನ್ನು ತರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದೀಗ ಮಂಜೇಶ್ವರದ ಕಡಪ್ಪುರದಲ್ಲಿ ಕೆಲವೊಂದು ನಾಡ ದೋಣಿಗಳು ಮೀನುಗಾರಿಕೆಯನ್ನು ನಡೆಸುತ್ತಿದ್ದರೂ ಅದರಲ್ಲಿ ಲಭಿಸುವ ಮೀನುಗಳನ್ನು ದುಬಾರಿ ಬೆಲೆಗೆ ವಿತರಿಸಲಾಗುತ್ತಿದೆ. ಅಂತಹ ಮೀನುಗಳು ವ್ಯಾಪಾರಿಗಳ ಮೂಲಕ ಮಾರುಕಟ್ಟೆಗೆ ತಲುಪುವಾಗ ದುಪ್ಪಟ್ಟು ಬೆಲೆ ಏರಿಕೆಯಾಗಿ ಜನಸಾಮಾನ್ಯ ಗ್ರಾಹಕರು ಖರೀದಿಸಲಾಗದ ಸ್ಥಿತಿಯೂ ನಿರ್ಮಾಣವಾಗಿದೆ.
ಈಗಲೂ ಮಂಜೇಶ್ವರ ಭಾಗಕ್ಕೆ ಅನ್ಯ ರಾಜ್ಯಗಳಿಂದ ರಾಸಾಯನಿಕ ಮಿಶ್ರಣದ ಮೀನು ತಲುಪುತ್ತಿರುವುದಾಗಿ ಬಲ್ಲ ಮೂಲಗಳಿಂದ ಮಾಹಿತಿ ಲಭಿಸಿದೆ. ಇಂತಹ ಮೀನುಗಳನ್ನು ಮಂಜೇಶ್ವರ ಗ್ರಾಮ ಪಂಚಾಯತಿನ ಕೆಲವೊಂದು ಗೌಪ್ಯ ಸ್ಥಳಗಳಲ್ಲೂ, ಮನೆ ಮನೆಗೂ ತಲುಪಿಸಿ ಮಾರಾಟ ಮಾಡುತ್ತಿರುವ ಬಗ್ಗೆಯೂ ಜನರು ಆಡಿಕೊಳ್ಳುತ್ತಿದ್ದಾರೆ.
ನಾಡದೋಣಿಯಿಂದ ಲಭಿಸಿದ ಮೀನುಗಳನ್ನು ನಮಗೆ ದುಪ್ಪಟ್ಟು ಬೆಳೆಗೆ ಮಾರಾಟ ಮಾಡದೆ ನಿರ್ವಾಹವಿಲ್ಲವೆಂಬುದಾಗಿ ಹೊಸಂಗಡಿಯಲ್ಲಿ ಮೀನು ವ್ಯಾಪಾರ ನಡೆಸುತ್ತಿರುವ ಇಬ್ರಾಹಿಂ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ದುಡಿಮೆಯಿಲ್ಲದೆ ಮನೆಯಲ್ಲೇ ಬಾಕಿಯಾಗಿರುವ ಮೀನು ವ್ಯಾಪಾರಿ ಹಾಗೂ ಕಾರ್ಮಿಕರ ಕುಟುಂಬಕ್ಕೆ ಕೆಲವೊಂದು ಸಂಘಟನೆಯ ಕಾರ್ಯಕರ್ತರು ಮನೆ ಬಾಗಿಲಿಗೆ ಸಾಮಾಗ್ರಿಗಳನ್ನು ತಲುಪಿಸುತ್ತಿರುವುದಾಗಿಯೂ ತಿಳಿದು ಬಂದಿದೆ.
ಲಾಕ್ ಡೌನ್ ಮುಗಿಯುವ ತನಕ ಮೀನುಗಾರಿಕೆಯನ್ನೇ ನಂಬಿರುವವರ ಸ್ಥಿತಿ ಅತಂತ್ರವಾಗಲಿದೆ. ವರ್ಷದಲ್ಲಿ ಸುಮಾರು ಆರು ತಿಂಗಳು ಮಾತ್ರ ಮೀನುಗಾರಿಕೆಗೆ ಲಾಭದಾಯಕ ತಿಂಗಳಾಗಿವೆ. ಅದರಲ್ಲಿ ಬಹು ಮುಖ್ಯ ಮಾರ್ಚ್-ಮೇ ತಿಂಗಳು. ಈ ಅವಧಿಯಲ್ಲಿ ಸಿಗುವ ಲಾಭದಲ್ಲಿ ಮೀನುಗಾರರು ತಮ್ಮ ಮುಂದಿನ ಮೂರು ತಿಂಗಳ ಜೀವನಾವಶ್ಯಕ ವಸ್ತುಗಳನ್ನು ಖರೀದಿಸುತ್ತಾರೆ. ಆದರೆ ಪ್ರಸ್ತುತ ವರ್ಷ ಕೊರೋನಾ ಮಹಾಮಾರಿಯಿಂದಾಗಿ ಈ ಎಲ್ಲಾ ಕನಸುಗಳು ನುಚ್ಚು ನೂರಾಗಿವೆ. ಹಲವಾರು ಸಾಲ ಮಾಡಿ ಮೀನುಗಾರಿಕೆಗೆ ದುಮುಕಿದವರಿದ್ದಾರೆ. ಬ್ಯಾಂಕ್ ಸಾಲ ಮರುಪಾವತಿಗೆ ಮೂರು ತಿಂಗಳ ವಿನಾಯಿತಿ ಇದೆಯೆಯಾದರೂ ಜೂನ್ ಬಳಿಕ ವಾರ್ಷಿಕ ಸೀಸನ್ ಅಂತ್ಯಗೊಳ್ಳುವುದರಿಂದ ಮೀನುಗಾರಿಕೆ ಇಲ್ಲದೆ ಏನು ಮಾಡುವುದೆನ್ನುವುದು ಇಲ್ಲಿಯ ಮೀನು ಕಾರ್ಮಿಕರ ಪ್ರಶ್ನೆಯಾಗಿದೆ.


