ಮಂಜೇಶ್ವರ: ಕೊರೋನಾ ಮಹಾಮಾರಿಯಿಂದ ಪ್ರಪಂಚವೇ ತತ್ತರಿಸಿರುವ ಈ ಸಮಯದಲ್ಲಿ ದೇಶ ಲಾಕ್ಡೌನ್ ಆಗಿದೆ. ಎಲ್ಲೂ ಸಂಚರಿಸಲು ಆಗದ ಈ ಪರಿಸ್ಥಿತಿಯಲ್ಲಿ, ಶಾಲಾ ಶಿಕ್ಷಕ ವೃಂದ ಸರ್ಕಾರದ ನಿರ್ದೇಶಗಳನ್ನು ಪಾಲಿಸಿ ಶಾಲೆಗೆ ಬರಲಾಗದ ಈ ಸಂದರ್ಭದಲ್ಲಿ ಮಂಜೇಶ್ವರ ತಾಲೂಕಿನ ಕುಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಹೂದೋಟ ಮತ್ತು ತರಕಾರಿ ತೋಟವು ನೀರಿಲ್ಲದೆ ಒಣಗುತ್ತಿರುವುದನ್ನು ಕಂಡು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಹಾಗೂ ಶಾಲಾ ಹಳೆ ವಿದ್ಯಾರ್ಥಿಗಳು ಸೇರಿ ನೀರುಣಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾದರು.
ಇತ್ತೀಚೆಗೆ ಶಾಲಾ ತರಕಾರಿ ತೋಟದಿಂದ ಸಿಕ್ಕಿದ ತೊಂಡೆಯನ್ನು ಕೇರಳದಲ್ಲಿ ಆಹಾರದ ಕೊರತೆ ಎದುರಿಸುವವರಿಗೆ ಪ್ರತಿ ಪಂಚಾಯತಿನಲ್ಲಿ ಮಾಡಿರುವಂತೆ ಮೀಂಜ ಪಂಚಾಯತಿನಲ್ಲಿ ಮಾಡಿರುವ ಕಮ್ಯೂನಿಟಿ ಕಿಚನ್ ಗೆ ನೀಡಿ ಮಾದರಿಯಾದರು.
ಕೊರೋನಾ ಮಹಾಮಾರಿ ಕಳೆದ ಮಾರ್ಚ್ ತಿಂಗಳಲ್ಲಿ ಹಠಾತ್ ದೇಶಕ್ಕೂ ಕಾಲಿರಿಸಿದಾಗ ಲಾಕ್ಡೌನ್ ಘೋಶಿಸಿದ್ದಾಗ ಅನಿವಾರ್ಯವಾಗಿ ಶಾಲಾ ತೋಟ ನಿರ್ವಹಣೆಯಲ್ಲಿ ಏರುಪೇರುಗಳಾಗಿ ಹೂತೋಟ-ತರಕಾರಿ ತೋಟವನ್ನು ಸಂರಕ್ಷಿಸುವ ಸನ್ಮನಸ್ಸು ಶಾಲಾ ರಕ್ಷಕ ಶಿಕ್ಷಕ ಸಂಘದ ಗಮನಕ್ಕೆ ಬಂದಿರುವುದು ಮತ್ತು ಬಳಿಕ ಅದು ಕೈಗೊಂಡ ಕಾರ್ಯಚಟುವಟಿಕೆಗಳಿಂದ ತೋಟ ಮತ್ತೆ ನಳನಳಿಸುವಂತಾಗಿರುವುದು ಪ್ರಶಂಸೆಗೆ ಪಾತ್ರವಾಗಿದೆ.



