ತಿರುವನಂತಪುರ: ಕೇಂದ್ರ ಸರ್ಕಾರ ಮೇ 3ರ ವರೆಗೆ ಘೋಷಿಸಿರುವ ಲಾಕ್ಡೌನ್ ಮಧ್ಯೆ ಕೇರಳ ಸರ್ಕಾರ ಹಸಿರು ಮತ್ತು ಕಿತ್ತಳೆ-ಬಿ ವಲಯದಲ್ಲಿ ಏಪ್ರಿಲ್ 20ರಿಂದ ಜಾರಿಗೆ ತರಲುದ್ದೇಶಿಸಿದ್ದ ವಿನಾಯಿತಿ ವಿರುದ್ಧ ಕೇಂದ್ರ ಸರ್ಕಾರ ಗರಂ ಆಗಿರುವ ಬೆನ್ನಿಗೆ ಕೇರಳ ಸರ್ಕಾರ ತನ್ನ ನಿಲುವು ಬದಲಾಯಿಸಿದೆ. ಕೋವಿಡ್-19 ವೈರಸ್ ನಿಯಂತ್ರಣಕ್ಕಾಗಿ ಕೇರಳ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರ, ಲಾಕ್ಡೌನ್ ವಿಚಾರದಲ್ಲಿ ತನ್ನಿಷ್ಟದಂತೆ ನಡೆಸುಕೊಂಡ ಕೇರಳ ಸರ್ಕಾರದ ಧೋರಣೆಯನ್ನು ಕಟುಆಗಿ ಟೀಕಿಸಿದೆ.
ಕೇಂದ್ರ ಸರ್ಕಾರದಿಂದ ಅಸಮಧಾನದ ಮಾಹಿತಿ ಲಭಿಸುತ್ತಿದ್ದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಸಂಪುಟ ಸಭೆ ನಡೆಸಿ, ಈ ಹಿಂದಿನ ತೀರ್ಮಾನ ಹಿಂತೆಗೆದುಕೊಂಡಿದೆ. ಆರೋಗ್ಯ ಇಲಾಖೆ ಮಾನದಂಡ ಪ್ರಕಾರ ಕೇರಳದ ಕೆಲವೊಂದು ಪ್ರದೇಶದಲ್ಲಿ ವಿನಾಯಿತಿ ನೀಡುವಂತೆ ಪತ್ರದ ಮೂಲಕ ಮನವಿಮಾಡಿಕೊಳ್ಳಲೂ ಕೇರಳ ಸರ್ಕಾರ ತೀರ್ಮಾನಿದೆ. ಕೇಂದ್ರ ಸರ್ಕಾರದ ಮುಂದಿನ ಆದೇಶ ಬರುವಲ್ಲಿ ವರೆಗೆ ಶನಿವಾರ ಮತ್ತು ಭಾನುವಾರ ಬಾರ್ಬರ್ ಶಾಪ್ ತೆರೆದುಕಾರ್ಯಾಚರಿಸಲಿರುವ ತೀರ್ಮಾನವನ್ನೂ ಕೈಬಿಡಲಾಗಿದೆ. ಹೋಟೆಲ್ಗಳಲ್ಲಿ ಸಾಯಂಕಾಲ 7ರ ವರೆಗೆ ಆಹಾರ ವಿತರಿಸಲು ಕೈಗೊಂಡ ತೀರ್ಮಾನ ಬದಲಾಯಿಸಿ, ಆಹಾರ ಪದಾರ್ಥ ಪಾರ್ಸೆಲ್ ಮಾತ್ರ ನಡೆಸಲು ತೀರ್ಮಾನಿಸಲಾಗಿದೆ.
ವರ್ಕ್ಶಾಪ್, ಬಾರ್ಬರ್ಶಾಪ್, ರೆಸ್ಟಾರೆಂಟ್, ಬುಕ್ಸ್ಟಾಲ್ ತೆರೆದು ಕಾರ್ಯಾಚರಿಸುವುದು, ಕಾರು, ಬೈಕ್ಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಗೆ ಅನುವುಮಾಡಿಕೊಡುವ ರೀತಿಯಲ್ಲಿ ಕೇರಳ ಸರ್ಕಾರ ರಿಯಾಯಿತಿ ಘೋಷಿಸಿದ್ದರೂ, ಕೇಂದ್ರಸರ್ಕಾರದ ವಿರೋಧದ ಹಿನ್ನೆಲೆಯಲ್ಲಿ ಇದನ್ನು ಕೈಬಿಡಲಾಗಿದ್ದು, ಲಾಕ್ಡೌನ್ ಯಥಾಪ್ರಕಾರ ಮುಂದುವರಿಸಲು ತೀರ್ಮಾನಿಸಿದೆ. ಕೇಂದ್ರ ಗೃಹಸಚಿವಾಲಯ ಏ. 15ರಂದು ಹೊರಡಿಸಿರುವ ಆದೇಶಕ್ಕೆ ವಿರುದ್ಧವಾಗಿ ಕೇರಳ ಸರ್ಕಾರ ನಡೆದುಕೊಂಡಿರುವ ಬಗ್ಗೆ ಕೇರಳದ ಮುಖ್ಯ ಕಾರ್ಯದರ್ಶಿಗೆ ಕೇಂದ್ರ ಗೃಹ ಇಲಾಖೆ ಪತ್ರ ಬರೆದು ತನ್ನ ಅಸಮಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಬದಲಾವಣೆಗೆ ಸರ್ಕಾರ ಮುಂದಾಗಿದೆ.

