ಕೊಚ್ಚಿ: ಕರೋನಾ ವೈರಸ್ ಎಂಬ ಮಹಾಮಾರಿ ಜಗತ್ತನ್ನೇ ತಲ್ಲಣಗೊಳಿಸಿರುವುದು ಸುಳ್ಳಲ್ಲ. ಪ್ರಪಂಚದ ಎಲ್ಲಾ ದೇಶಗಳು ಕರೋನಾ ವೈರಸ್ನಿಂದ ತತ್ತರಿಸಿವೆ. ಆದರೆ ಈ ಮಾರಣಾಂತಿಕ ವೈರಸ್ನಿಂದ ಪರಿಸರಕ್ಕೆ ಅನುಕೂಲವಾಗುತ್ತಿದೆ.
ಪ್ರಪಂಚದ ಬಹುತೇಕ ದೇಶಗಳಲ್ಲಿನ ವಾಯುಮಾಲಿನ್ಯವು ಹಿಂದೆಂದು ಕಂಡು ಕೇಳರಿಯದ ರೀತಿಯಲ್ಲಿ ಕಡಿಮೆಯಾಗಿದೆ. ವಾಯುಮಾಲಿನ್ಯ ಮಾತ್ರವಲ್ಲದೇ ಜಲ ಮಾಲಿನ್ಯವು ಸಹ ಕಡಿಮೆಯಾಗಿದೆ. ಬಹುತೇಕ ನದಿಗಳ ನೀರು ಸ್ವಚ್ವವಾಗಿದೆ. ಕರೋನಾ ವೈರಸ್ ಮಾನವನಿಗೆ ಕೆಡುಕನ್ನು ಉಂಟು ಮಾಡುತ್ತಿದ್ದರೂ ಪರಿಸರಕ್ಕೆ ಅನುಕೂಲವನ್ನು ಮಾಡುತ್ತಿದೆ.
ಕರೋನಾ ವೈರಸ್ ವ್ಯಾಪಕವಾಗಿ ಹರಡಲು ಮಾನವರು ಸಹ ಕಾರಣ. ಕರೋನಾ ವೈರಸ್ ಹರಡದಂತೆ ತಡೆಯಲು ದೇಶಾದ್ಯಂತ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಆದರೆ ಜನರು ಮಾತ್ರ ತಲೆಕೆಡಿಸಿಕೊಳ್ಳದೇ ವಿನಾಕಾರಣ ರಸ್ತೆಗಿಳಿಯುತ್ತಿದ್ದಾರೆ. ಇದರಿಂದಾಗಿ ಕರೋನಾ ವೈರಸ್ ಹರಡುವಿಕೆ ಹೊಸ ಉತ್ತುಂಗಕ್ಕೇರಿದೆ. ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ರಾಜ್ಯ ಸರ್ಕಾರಗಳು, ಜನರು ಹಾಗೂ ಸಾರ್ವಜನಿಕ ಸಂಸ್ಥೆಗಳು ತಮ್ಮ ಕೈಲಾದಷ್ಟು ಪ್ರಯತ್ನವನ್ನು ಮಾಡುತ್ತಿದ್ದಾರೆ.
ಈಗ ಕೇರಳದ ಟ್ಯಾಕ್ಸಿ ಚಾಲಕರು ಕರೋನಾ ವೈರಸ್ ಹರಡುವುದನ್ನು ತಡೆಯಲು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕೇರಳದ ಕ್ಯಾಬ್ ಚಾಲಕರು ತಮ್ಮನ್ನು ಹಾಗೂ ತಮ್ಮ ಟ್ಯಾಕ್ಸಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ವೈರಸ್ನಿಂದ ರಕ್ಷಿಸಲು ಕಾರಿನೊಳಗೆ ಫೈಬರ್ ಗ್ಲಾಸ್ ಅಳವಡಿಸಿದ್ದಾರೆ.
ಇದರಿಂದ ಕಾರನ್ನು ಎರಡು ಭಾಗಗಳಾಗಿ ವಿಂಗಡಿಸುವುದಲ್ಲದೆ, ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಪ್ರತ್ಯೇಕವಾದ ಜಾಗವನ್ನು ಒದಗಿಸಿದಂತಾಗುತ್ತದೆ. ಇದರ ಕುರಿತಾದ ವೀಡಿಯೊವನ್ನು ಮಲಯಾಳಂ ಸುದ್ದಿ ಸಂಸ್ಥೆಯಾದ ಏಷ್ಯಾನೆಟ್ ನ್ಯೂಸ್ ಬಿಡುಗಡೆಗೊಳಿಸಿದೆ. ಕೇರಳದಲ್ಲಿ ಈ ರೀತಿಯ ಕ್ರಮಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಛತ್ರಿಗಳನ್ನು, ಮಾಸ್ಕ್ಗಳನ್ನು ಹಾಗೂ ಸ್ಯಾನಿಟೈಜರ್ಗಳನ್ನು ಕಡ್ಡಾಯವಾಗಿ ಬಳಸಬೇಕೆಂದು ಕೇರಳ ಸರ್ಕಾರವು ಜನರಿಗೆ ಸೂಚಿಸಿದೆ.
ವ್ಯಕ್ತಿಯೊಬ್ಬ ಛತ್ರಿ ಬಳಸಿದರೆ, ಇನ್ನೊಬ್ಬ ವ್ಯಕ್ತಿಯಿಂದ ಕನಿಷ್ಠ 3 ಅಡಿ ದೂರದಲ್ಲಿರುತ್ತಾನೆ. ಇದರಿಂದಾಗಿ ಕರೋನಾ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದು ತಪ್ಪುತ್ತದೆ.
ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಗಳಲ್ಲಿ ಒಂದಾದ ಮಹೀಂದ್ರಾ ಅಂಡ್ ಮಹೀಂದ್ರಾದ ಅಧ್ಯಕ್ಷರಾದ ಆನಂದ್ ಮಹೀಂದ್ರಾರವರು ಈ ವೀಡಿಯೊ ನೋಡಿ ಕೇರಳ ರಾಜ್ಯದವರನ್ನು ಅಭಿನಂದಿಸಿದ್ದಾರೆ.
ಟ್ವಿಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿ ಟ್ಯಾಕ್ಸಿಗಳಲ್ಲಿನ ಸಾಮಾಜಿಕ ಅಂತರವನ್ನು ತೋರಿಸುವ ವೀಡಿಯೊವನ್ನು ಶೇರ್ ಮಾಡಿದ್ದಾರೆ. ಟ್ಯಾಕ್ಸಿಯಲ್ಲಿ ಅಳವಡಿಸಲಾಗಿರುವ ಫೈಬರ್ ಗ್ಲಾಸ್ ಪ್ರಯಾಣಿಕರು ಹಾಗೂ ಚಾಲಕರ ನಡುವೆ ಅಂತರ ಕಾಯ್ದುಕೊಳ್ಳುವುದು ಸ್ಪಷ್ಟವಾಗಿದೆ.





