ತೃಶೂರ್: ತ್ರಿಶೂರ್ ಜಿಲ್ಲೆಯ ಪರಮ ಗ್ರಾಮ ಪಂಚಾಯತಿ ಅಧ್ಯಕ್ಷ ಸದೀಪ್ ವಡಕ್ಕಂಚೇರಿ ಏಪ್ರಿಲ್ ಕೊನೆಯಲ್ಲಿ ವಡಕ್ಕಂಚೇರಿ ಅಗ್ನಿಶಾಮಕ ದಳದ ಅಧಿಕಾರಿಯಾದ ಲಾಸರ್ ಅವರನ್ನು ಪೋನ್ ಮೂಲಕ ಸಂಪರ್ಕಿಸಿ ಕ್ಯಾನ್ಸರ್ ಪೀಡಿತೆಯಾದ ಮಹಿಳೆಯೊಬ್ಬರನ್ನು ಕೀಮೋ ಥೆರಪಿಗಾಗಿ ಆಸ್ಪತ್ರೆಗೆ ಕರೆದೊಯ್ಯಬಹುದೇ ಎಂದು ಕೇಳುತ್ತಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಕಠಿಣವಾದ ನಿಯಂತ್ರಣಗಳ ಕಾರಣ ಅನ್ಯ ಮಾರ್ಗವಿಲ್ಲದೆ ಸದೀಪ್ ಅವರು ಅಗ್ನಿಶಾಮಕ ದಳವನ್ನು ಸಹಾಯಕ್ಕಾಗಿ ಕೇಳಿಕೊಳ್ಳಬೇಕಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅಗ್ನಿ ಶಾಮಕ ಅಧಿಕೃತರು ಜಿಲ್ಲಾ ಕೇಂದ್ರವಾದ ತ್ರಿಶೂರ್ ಅಗ್ನಿಶಾಮಕ ದಳವನ್ನು ಸಂಪರ್ಕಿಸಲು ಕೇಳಿಕೊಂಡರು. ಬಳಿಕ ಅಗ್ನಿ ಶಾಮಕ ದಳ ಚಿಕಿತ್ಸೆಗೆ ಕರೆದೊಯ್ದು ನೆರವಾಯಿತು. ಆದರೆ ಇಷ್ಟಕ್ಕೇ ಘಟನೆ ಕೊನೆಗೊಳ್ಳಲಿಲ್ಲ ಎನ್ನುವುದು ವಿಶೇಷ.
ಈ ಮೂಲಕ ತಾವು ಕರೆದೊಯ್ದ ಮಹಿಳೆಯ ನಿರ್ಗತಿಕ ಸ್ಥಿತಿಯನ್ನು ಕಂಡು-ಕೇಳಿದ ಅಗ್ನಿ ಶಾಮಕದಳದ ಅಧಿಕಾರಿಯೊಬ್ಬರು ತಮ್ಮ ಸ್ವಂತ ನಿವೇಶನದಿಂದ ಒಂದಷ್ಟು ಭೂಮಿ ಹಾಗೂ ಮನೆ ನಿರ್ಮಿಸುವ ಭರವಸೆ ನೀಡುವ ಮಾನವೀಯತೆಯ ನೆರವಿಗೆ ಈ ಘಟನೆ ಸಾಕ್ಷಿಯಾಯಿತು.
ತ್ರಿಶೂರ್ನ ಕೊಟನ್ನೂರ್ ಮೂಲದ ಓಮಾನಾ (57) ಗೆ ಅಗ್ನಿಶಾಮಕ ದಳದ ನೌಕರ ಇ.ಎಲ್.ಲಾಸರ್ ಅವರು ಮೂರು ಸೆಂಟ್ಸ್ ಭೂಮಿಯನ್ನು ಉದಾರವಾಗಿ ನೀಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ತಾವು ನೆರವು ನೀಡಿದ ಮಹಿಳೆ ಓಮನಾ ಅವರ ಬಾಡಿಗೆ ಮನೆಗೆ ಆಗಮಿಸಿದ ಲಾಸರ್ ಓಮನಾ ಅವರ ಸಂಕಷ್ಟವನ್ನು ಕಂಡು ಮರುಗಿ ಈ ಮಾನವೀಯ ನೆರವು ನೀಡುವ ಮೂಲಕ ಗಮನ ಸೆಳೆದಿರುವರು. ಭೂಮಿ ಹಸ್ತಾಂತರ ಎಲ್ಲಾ ಖರ್ಚುವೆಚ್ಚಗಳನ್ನೂ ಲಾಸರ್ ಅವರೇ ಭರಿಸಿದ್ದಾರೆ.
ಒಮಾನಾ ಹನ್ನೆರಡು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಸ್ವಂತದ್ದೆಂದು ಇದ್ದ ಕೇವಲ 5 ಸೆಂಟ್ಸ್ ಭೂಮಿಯನ್ನು ವರ್ಷಗಳ ಹಿಂದೆ ತಮ್ಮ ಹೆಣ್ಮಕ್ಕಳ ವಿವಾಹ ನಿರ್ವಹಣೆಗಾಗಿ ವಿಕ್ರಯಿಸಿದ್ದರು. ಆಸ್ತಮಾ ರೋಗಿಯಾದ ಪತಿಯ ಸಾವಿನೊಂದಿಗೆ ಓಮನಾ ಅಕ್ಷರಶಃ ನಿರ್ಗತಿಕರಾದರು. ಈ ಮಧ್ಯೆ ಹಿರಿಯ ಪುತ್ರಿಯನ್ನು ಆಕೆಯ ಪತಿ ತ್ಯಜಿಸಿದ್ದು ಆಕೆಯ ಇಬ್ಬರು ಹೆಣ್ಣುಮಕ್ಕಳು ಒಮಾನಾ ಜೊತೆ ವಾಸಿಸತೊಡಗಿದರು. ಹಿರಿಯ ಪುತ್ರಿ ಅಂಗಡಿಯೊಂದರಲ್ಲಿ ನೌಕರಿಗೆ ತೆರಳುತ್ತಿದ್ದರೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಉದ್ಯೋಗಕ್ಕೆ ಕಡಿವಾಣ ಬಿದ್ದು ಲಭಿಸುವ ಚಿಕ್ಕಾಸೂ ಇಲ್ಲವಾಗುವುದರೊಂದಿಗೆ ಓಮನಾ ಚಿಂತಾಕ್ರಾಂತಳಾಗಿದ್ದರು. ಜೊತೆಗೆ ತನಗೆ ಬಾಧಿಸಿದ ಕ್ಯಾನ್ಸರ್ ರೋಗದ ಚಿಕಿತ್ಸೆಗೂ ಹಣ ಹೊಂದಿಸಲಾರದೆ ಬದುಕುವ ಆಸೆಯನ್ನೇ ಕಳಕೊಂಡಿದ್ದರು.
ಓಮನಾರ ಕಷ್ಟದ ಬಗ್ಗೆ ಪರಮ ಗ್ರಾ.ಪಂ. ಅಧ್ಯಕ್ಷ ಸದೀಪ್ ಅವರು ಲಾಸರ್ ಅವರಿಗೆ ಮಾಹಿತಿ ನೀಡುತ್ತಿರುವಂತೆ ಲಾಸರ್ ಮತ್ತವರ ಕುಟುಂಬ ಕೂಡಲೇ ನೆರವಿಗೆ ಮನಸ್ಸುಮಾಡಿರುವುದು ವಿಶೇಷವಾಗಿದೆ. ಕೇರಳ ಅಗ್ನಿಶಾಮಕ ದಳದ ಚಾಲಕರು ಮತ್ತು ಮೆಕ್ಯಾನಿಕ್ಸ್ ಸಂಘವು ಒಮಾನಾಗೆ ಉಚಿತ ಮನೆ ನಿರ್ಮಿಸಿ ಕೊಡಲು ಇದೀಗ ಮುಂದೆ ಬಂದಿದೆ. ಈಗಾಗಲೇ ಹಲವು ಚಟುವಟಿಕೆಗಳ ಮೂಲಕ ಲಾಸರ್ ಅವರ ಮಾನವೀಯ ಹೃದಯವಂತಿಕೆ ನಮಗೆ ಭರವಸೆಯಾಗಿದೆ ಎಂದು ಸದೀಪ್ ತಿಳಿಸುತ್ತಾರೆ.
ಕಳೆದ ಮೂರು ತಿಂಗಳಿಂದ ಬಾಡಿಗೆ ಪಾವತಿಸಲು ತಮಗೆ ಸಾಧ್ಯವಾಗಿಲ್ಲ. ಅಗ್ನಿಶಾಮಕ ದಳದವರು ತನಗೆ ಸಹಾಯ ಮಾಡುತ್ತಾರೆಂದು ತಾನು ಎಂದಿಗೂ ಭಾವಿಸಿರಲಿಲ್ಲ ಎಂದು ಒಮಾನಾ ಹೇಳಿದ್ದಾರೆ.


