ಕಾಸರಗೋಡು: ಕಾಸರಗೋಡು, ಕಾಞಂಗಾಡ್ ನಗರ ಪ್ರದೇಶಗಳಲ್ಲಿ ಡೆಂಗೆಜ್ವರಕ್ಕೆ ಕಾರಣವಾಗುವ ಈಡಿಸ್ ಸೊಳ್ಳೆ, ಮಲೇರಿಯಾ ರೋಗಕ್ಕೆ ಕಾರಣವಾಗುವ ಅನೋಫಿಲಿಸ್ ಸೊಳ್ಳೆಗಳ ಸಂತಾನೋತ್ಪತ್ತಿ ಕೇಂದ್ರಗಳು ವ್ಯಾಪಕವಾಗಿ ಪತ್ತೆಯಾಗಿವೆ. ಕೊರೋನಾ ಹಾವಳಿ ಜೊತೆಗೆ ಜಿಲ್ಲೆಯ ಮಲೆನಾಡ ಪ್ರದೇಶಗಳಲ್ಲಿ ಡೆಂಗೆಜ್ವರವೂ ಹರಡುತ್ತಿರುವ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿ ಅಂಟುರೋಗಗಳೂ ವ್ಯಾಪಕಗೊಳ್ಳುವ ಭೀತಿಯಿದೆ.
ಈ ಹಿನ್ನೆಲೆಯಲ್ಲಿಜಿಲ್ಲಾ ವೆಕ್ಟರ್ ಕಂಟ್ರೋಲ್ ಯೂನಿಟ್ ತಪಾಸಣೆ ನಡೆಸಿದ ವೇಳೆ ಇವು ಪತ್ತೆಯಾಗಿವೆ. ಇವು ಮುಂಬರುವ ಅಂಟುರೋಗಗಳ ಸಾಧ್ಯತೆಗಳ ಕರೆಗಂಟೆಯಾಗಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಯೂನಿಟ್ ನ ಪ್ರತ್ಯೇಕ ತಂಡ ತಪಾಸಣೆ ನಡೆಸಿದ್ದು, ನಗರ ಪ್ರದೇಶಗಳ ಖಾಸಗಿ ಆಸ್ಪತ್ರೆಗಳು, ವಸತಿಗೃಹಗಳು, ಮೀನುಮಾರುಕಟ್ಟೆಗಳು, ವಿವಿಧ ಸಂಸ್ಥೆಗಳು ಸಹಿತ ಸಾರ್ವಜನಿಕ ಪ್ರದೇಶಗಳಲ್ಲಿ ಈ ಕೇಂದ್ರಗಳ ಪತ್ತೆಯಾಗಿವೆ. ಮುಚ್ಚುಗಡೆ ನಡೆದೇ ಇರುವ ನೀರಿನ ಸಂಗ್ರಹಾಲಯಗಳು ಇತ್ಯಾದಿಗಳನ್ನು ತಕ್ಷಣ ಮುಚ್ಚುವಂತೆ, ಸೊಳ್ಳೆ ಸಂತಾನೋತ್ಪತ್ತಿ ನಡೆಸಬಲ್ಲ ಇತರ ವಸ್ತುಗಳನ್ನು ತೆರವುಗೊಳಿಸುವಂತೆ ಆಯಾ ಸಂಸ್ಥೆಗಳ ಮಾಲೀಕರಿಗೆ ಆದೇಶ ನೀಡಲಾಗಿದೆ ಎಂದು ಸಹಾಯಕ ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಟಿ. ಆಮಿನಾ ತಿಳಿಸಿದರು. ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದವರು ನುಡಿದರು.


