ತಿರುವನಂತಪುರ: ರಾಜ್ಯಾದ್ಯಂತ ಇಂದಿನಿಂದ(ಮಂಗಳವಾರ) ಅಂತರ್ ಜಿಲ್ಲಾ ಬಸ್ ಸೇವೆಗಳನ್ನು ಆರಂಭಿಸಲು ಸರ್ಕಾರ ಸೂಚನೆ ನೀಡಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶೀಘ್ರದಲ್ಲೇ ಅಂತರ್ ರಾಜ್ಯ ಬಸ್ ಸೇವೆಗಳನ್ನು ಪ್ರಾರಂಭಿಸಲು ಸಭೆ ನಿರ್ಧರಿಸಿರುವುದಾಗಿ ತಿಳಿದುಬಂದಿದೆ.
ಪ್ರಸ್ತುತ, ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ಗಳು ಜಿಲ್ಲೆಯೊಳಗೆ ಪ್ರಯಾಣಿಸುತ್ತದೆ. ಆದರೆ ಅಂತರ್ ಜಿಲ್ಲಾ ಸಂಚಾರ ಮಂಗಳವಾರದಿಂದ ಆರಂಭಿಸಲು ಸೋಮವಾರ ತೀರ್ಮಾನಿಸಲಾಯಿತು. ಆದರೆ ಬಸ್ ಸಂಚಾರಗಳು ಕೋವಿಡ್ ಮಾನದಂಡಗಳನ್ನು ಅನುಸರಿಸಿ ಮಾತ್ರ ನಡೆಸಲು ಉದ್ದೇಶಿಸಲಾಗಿದೆ. ಒಂದು ಆಸನದಲ್ಲಿ ಒಬ್ಬ ಪ್ರಯಾಣಿಕ ಮಾತ್ರ ಕುಳಿತು ಸಂಚರಿಸಬೇಕಾಗಿದೆ. ನಿಂತು ಪ್ರಯಾಣಿಸಲು ಅವಕಾಶ ನೀಡಲಾಗುವುದಿಲ್ಲ. ಜೊತೆಗೆ ಪ್ರಯಾಣಿಕರು ಮುಖ ಕವಚ ಮಾಸ್ಕ್ ನ್ನು ಕಡ್ಡಾಯವಾಗಿ ಧರಿಸಿರಬೇಕು. ಅಲ್ಲದೆ ಟಿಕೆಟ್ ದರಗಳು ಶೇಕಡಾ 50 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರ ಈಗಾಗಲೇ ಅಂತರ್ ರಾಜ್ಯ ಬಸ್ ಸಂಚಾರ ನಡೆಸಬಹುದೆಂದು ಸೂಚಿಸಿದ್ದರೂ ಕೇರಳ ತಾತ್ಕಾಲಿಕವಾಗಿ ಅಂತರ್ ರಾಜ್ಯ ಬಸ್ ಸಂಚಾರದ ಬಗ್ಗೆ ಚಿಂತನೆ ನಡೆಸಿಲ್ಲ. ತಮಿಳುನಾಡು ಸಹಿತ ವಿವಿಧ ರಾಜ್ಯಗಳಲ್ಲಿ ಕೊರೊನಾ ರೋಗ ಹರಡುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕೃತರು ತಿಳಿಸಿದ್ದಾರೆ.
ಈ ಮಧ್ಯೆ ಲಾಕ್ ಡೌನ್ ಕಾರಣ ಮುಚ್ಚಲ್ಪಟ್ಟಿರುವ ಹೋಟೆಲ್ ಮತ್ತು ಆರಾಧನಾಲಯಗಳನ್ನು ಮತ್ತೆ ತೆರೆಯುವ ಬಗ್ಗೆ ಸರ್ಕಾರ ತನ್ನ ನಿರ್ಧಾರವನ್ನು ಶೀಘ್ರ ಪ್ರಕಟಿಸುವ ನಿರೀಕ್ಷೆಯಿದೆ. ನಿಬಂಧನೆಗನುಸಾರ ರೆಸ್ಟೋರೆಂಟ್ಗಳಿಗೆ ಪ್ರವೇಶ ನೀಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಹೋಟೆಲ್ಗಳು ಗ್ರಾಹಕರಿಗೆ ಕುಳಿತಿರುವ ಸ್ಥಳಾವಕಾಶವನ್ನು ಹೆಚ್ಚಿಸುವ ಮತ್ತು ಒಂದು ಟೇಬಲ್ ನಲ್ಲಿ ಒಬ್ಬರಂತೆ ಪೀಠೋಪಕರಣ ಸಿದ್ದಪಡಿಸುವ ನಿಟ್ಟಿನಲ್ಲಿ ಅನುಮತಿ ನೀಡಲಾಗುವುದೆಂದು ತಿಳಿದುಬಂದಿದೆ.