ಕಾಸರಗೋಡು: ಕಣ್ಣೂರು ವಿ.ವಿ ಬಿ.ಎ ಕನ್ನಡ ತೃತೀಯ ವರ್ಷದ ಪದವಿ ಫಲಿತಾಂಶವು ಪ್ರಕಟವಾಗಿದ್ದು, ಪ್ರಥಮ ಮತ್ತು ದ್ವಿತೀಯ ಸ್ಥಾನಗಳು ಅನುಕ್ರಮವಾಗಿ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳಾದ ಗಿರೀಶ್ ಕೃಷ್ಣ ಕೆ (86.57 ಎ ಗ್ರೇಡ್) ಹಾಗೂ ಕೃತಿ ಸಿ.ಎಚ್ (83.88 ಎ ಗ್ರೇಡ್) ಅವರು ಪಡೆದುಕೊಂಡಿದ್ದಾರೆ. ತೃತೀಯ ಸ್ಥಾನವನ್ನು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ವಿದ್ಯಾರ್ಥಿನಿ ನಾಝಿಯ ಕೆ. ಎ (82.38 ಎ ಗ್ರೇಡ್) ಪಡೆದುಕೊಂಡಿದ್ದಾರೆ.
ಗಿರೀಶ್ ಕೃಷ್ಣ ಕೆ.:
ಮೊದಲ ಸ್ಥಾನವನ್ನು ಪಡೆದ ಗಿರೀಶ್ ಕೃಷ್ಣ ಕೆ ಅವರು ಮುಳ್ಳೇರಿಯಾ ಸಮೀಪದ ಹರಿಪ್ರಸಾದ ಕರಣಿ ಹಾಗೂ ಸರಸ್ವತಿ ದಂಪತಿಯರ ಪುತ್ರ. ಮುಳ್ಳೇರಿಯಾ ವಿದ್ಯಾಶ್ರೀ ಶಿಕ್ಷಣ ಕೇಂದ್ರ, ಬೋವಿಕಾನ ಬಿ. ಎ. ಆರ್. ಎಚ್. ಎಸ್ ವಿದ್ಯಾಸಂಸ್ಥೆಗಳ ಹಳೆವಿದ್ಯಾರ್ಥಿ. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸಾಹಿತ್ಯಕ ಸಾಂಸ್ಕøತಿಕ ವೇದಿಕೆ ಸ್ನೇಹರಂಗದ ಕಾರ್ಯದರ್ಶಿಯಾಗಿ ದುಡಿದಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರಾಗಿ ಸೇವೆಸಲ್ಲಿಸಿದ್ದು, ಸಪ್ತದಿನಗಳ ಎರಡು ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಕಾಲೇಜು ಘಟಕದ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿದ್ದರು. ಸಾಹಿತ್ಯ, ಕೃಷಿ ಇವರ ಆಸಕ್ತ ಕ್ಷೇತ್ರ. ಇಲೆಕ್ಟ್ರೋನಿಕ್ಸ್ ವಿಷಯದಲ್ಲೂ ಎಳವೆಯಿಂದಲೇ ಇವರು ಆಸಕ್ತರಾಗಿದ್ದು, ವಿದ್ಯುತ್ ಚಾಲಿತ ಒಣಗಿಸುವ ಯಂತ್ರವನ್ನು ಇವರು ಆವಿಷ್ಕರಿಸಿದ್ದಾರೆ. ಮಳೆಗಾಲದಲ್ಲಿ ಕೆಲವು ಕೃಷಿ ಉತ್ಪನ್ನಗಳನ್ನು ಒಣಗಿಸಿಡಲು ಇದು ಸಹಕಾರಿ. ಎಂ.ಎ ಬಿ.ಎಡ್ ಶಿಕ್ಷಣ ಮುಗಿಸಿ ಕಾಲೇಜು ಪ್ರಾಧ್ಯಾಪಕನಾಗುವ ಗುರಿಯನ್ನು ಹೊಂದಿದ್ದಾರೆ.
ಕೃತಿ ಸಿ.ಎಚ್:
ಎರಡನೆಯ ಸ್ಥಾನವನ್ನು ಪಡೆದ ಕೃತಿ ಸಿ. ಎಚ್ ಅವರು ಕಾರ್ಕಳ ಶಶಿಕಾಂತ್ ರಾವ್ ಹಾಗೂ ಭಾರತಿ ದಂಪತಿಗಳ ಸುಪುತ್ರಿ. ಇವರ ಸೋದರ ಮಾವ ದೇವರಾಜ ಎಡನೀರು ಇವರ ಮನೆಯಿಂದ ಕೃತಿ ಕಾಲೇಜಿಗೆ ಬರುತ್ತಿದ್ದರು. ಎಡನೀರು ಸ್ವಾಮೀಜಿಸ್ ಹಿರಿಯ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ. ಸ್ನೇಹರಂಗದ ಸಕ್ರೀಯ ಸದಸ್ಯೆ. ಓದು ಮತ್ತು ಬರವಣಿಗೆಯಲ್ಲಿ ಆಸಕ್ತರಾಗಿರುವ ಕೃತಿ ಸಿ. ಎಚ್ ಅವರು ಎಂ.ಎ ಅಧ್ಯಯನ ಪೂರೈಸಿ ಕಾಲೇಜು ಪ್ರಾಧ್ಯಾಪಿಕೆಯಾಗುವ ಗುರಿಯನ್ನು ಹೊಂದಿದ್ದಾರೆ.
ನಾಝಿಯ ಕೆ. ಎ:
ತೃತೀಯ ಸ್ಥಾನ ಪಡೆದ ನಾಝಿಯ ಕೆ.ಎ ಅವರು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಯಾಗಿದ್ದು, ಕುಂಜತ್ತೂರು ಪಿ.ಎಂ. ಅಬ್ದುಲ್ಲ ಹಾಗೂ ಆಮಿನ ದಂಪತಿಯರ ಸುಪುತ್ರಿ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಜಿ.ವಿ.ಎಚ್. ಎಸ್. ಎಸ್ ಕುಂಜತ್ತೂರು ವಿದ್ಯಾಸಂಸ್ಥೆಗಳ ಹಳೆವಿದ್ಯಾರ್ಥಿ. ಕತೆ ಕವನ ರಚನೆ, ಓದು ಇವರ ಹವ್ಯಾಸವಾಗಿದ್ದು, ಮುಂದೆ ಎಂ.ಎ ಮುಗಿಸಿ ಅಧ್ಯಾಪಿಕೆಯಾಗುವ ಗುರಿಯನ್ನು ವ್ಯಕ್ತಪಡಿಸಿದ್ದಾರೆ.


