ಕಾಸರಗೋಡು: ಎಣ್ಮಕಜೆ, ಕಾಪ, ಅಳಿಕೆ ಮುಂತಾದ ಪಂಚಾಯತ್ಗಳ ವ್ಯಾಪ್ತಿಯ ಜನರ ಸಂಚಾರಕ್ಕೆ ಅಡ್ಡಿಯಾದ ಸಾರಡ್ಕ ಗಡಿ ಮುಚ್ಚುಗಡೆ ಸಮಸ್ಯೆಯನ್ನು ಪರಿಹರಿಸಲು ಅಗತ್ಯವಾದ ಕ್ರಮಕೈಗೊಳ್ಳಲು ಬಿಜೆಪಿ ಕಾಸರಗೋಡು ಜಿಲ್ಲಾ ನೇತಾರರ ಪ್ರತಿನಿ„ಗಳು ಮತ್ತು ಪುತ್ತೂರು ವಿಧಾನ ಸಭಾ ನೇತಾರರು ಕೇರಳ ಮತ್ತು ಕರ್ನಾಟಕ ರಾಜ್ಯ ಸರಕಾರವನ್ನು ಆಗ್ರಹಿಸಿದೆ.
ಬಿಜೆಪಿ ನಾಯಕರ ಮನವಿಗೆ ಸ್ಪಂದಿಸಿದ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಜನರ ಸಂಚಾರ ಸಮಸ್ಯೆ ಪರಿಹಾರಕ್ಕೆ ಶ್ರೀಘ್ರದಲ್ಲೇ ಕ್ರಮಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಮಾತುಕತೆ ನಡೆಸಿ ಶೀಘ್ರವೇ ಸೂಕ್ತ ಪರಿಹಾರ ಕ್ರಮವನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು. ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ಶ್ರೀಕಾಂತ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸುದರ್ಶನ ಎಂ. ಕೂಡ ಎರಡು ಸರಕಾರಗಳನ್ನು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
ಎಣ್ಮಕಜೆ ಗ್ರಾಮ ಪಂಚಾಯತ್ನ ಮೂರು ವಾರ್ಡ್ಗಳು ಸಂಪೂರ್ಣವಾಗಿ ಸಂಪರ್ಕ ಕಳಕೊಂಡಿದ್ದು ಸಮಸ್ಯೆ ಪರಿಹಾರಕ್ಕೆ
ಕೇರಳ ಸರಕಾರವಾಗಲಿ ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್ ಆಗಲಿ, ಕಾಸರಗೋಡು ಸಂಸದ ರಾಜ ಮೋಹನ ಉಣಿತ್ತಾನ್ ಆಗಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಶಾಸಕ ಹಾಗೂ ಸಂಸದ ಸಂಪೂರ್ಣ ನಿರ್ಲಕ್ಷ ತೋರಿದ್ದಾರೆಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಆರೋಪಿಸಿದ್ದಾರೆ. ಶಾಸಕ ಹಾಗೂ ಸಂಸದ ಸಮಸ್ಯೆಗೆ ಸ್ಪಂದಿಸದೆ ಐಷಾರಾಮವಾಗಿ ವಿಹರಿಸುತ್ತಿದ್ದಾರೆ ಎಂದು ಶ್ರೀಕಾಂತ್ ಟೀಕಿಸಿದರು.
ಸಾರಡ್ಕ ಗಡಿ ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಬಿಜೆಪಿ ಹೋರಾಟಕ್ಕಿಳಿಯುವುದೆಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಸಾರಡ್ಕ ಗಡಿ ದಾಟುವ ಸಮಸ್ಯೆ ಬಗ್ಗೆ ಪರಿಹಾರ ಕಾಣಲು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಜಿಲ್ಲಾ ಪಂಚಾಯತ್ ಸದಸ್ಯರು, ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಪುಷ್ಪಾ ಅಮೆಕಳ, ಗ್ರಾಮ ಪಂಚಾಯತ್ ಸದಸ್ಯೆ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರೂಪವಾಣಿ ಆರ್.ಭಟ್, ಪುತ್ತೂರು ಮಂಡಲ ಬಿಜೆಪಿ ನೇತಾರ ಹರಿ ಪ್ರಸಾದ್ ಯಾದವ, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಹಾಗೂ ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷೆ ಸವಿತಾ ಬಾಳಿಕೆ, ಬಿಜೆಪಿ ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಉದಯ ಚೆಟ್ಟಿಯಾರ್, ಎಣ್ಮಕಜೆ ಪಂಚಾಯತ್ ಪ್ರಧಾನ ಕಾರ್ಯದರ್ಶಿ ನಾರಾಯಣ ನಾಯ್ಕ್ ಅಡ್ಕಸ್ಥಳ, ರೈ ಬಿಜೆಪಿ ಪಂಚಾಯತ್ ಸಮಿತಿ ಉಪಾಧ್ಯಕ್ಷರಾದ ಶಶಿಕಾಂತ್ ಕುಲಾಲ್, ಕೇಪು ಪಂಚಾಯತ್ ಅಧ್ಯಕ್ಷ ತಾರಾನಾಥ್ ಆಳ್ವ, ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಕಾರ್ಯದರ್ಶಿ ಸುರೇಶ್ ವಾಣಿನಗರ, ಪಂಚಾಯತ್ ಸಮಿತಿ ಸದಸ್ಯ ಪದ್ಮಶೇಖರ ನೀರೋಲ್, ಹಿರಿಯ ಬಿಜೆಪಿ ನೇತಾರರಾದ ಶೀನಾ ನಾಯ್ಕ್ ಅಡ್ಯನಡ್ಕ, ಕೇಶವ ಪ್ರಸಾದ್, ಸಾರಡ್ಕದ ಊರಿನ ಹಿರಿಯರು ಪತ್ರಕರ್ತರಾದ ಶಂಕರ ಸಾರಡ್ಕ ಮುಂತಾದವರು ಸ್ಥಳ ಸಂದರ್ಶಿಸಿ ಅವರೊಂದಿಗೆ ಮಾತುಕತೆ ಮಾತುಕತೆ ನಡೆಸಿ ಅವರ ಸಂಕಷ್ಟಗಳನ್ನು ನೇರ ಅರಿತುಕೊಂಡರು.


