ಕಾಸರಗೋಡು: 2019-20 ನೇ ಶೈಕ್ಷಣಿಕ ವರ್ಷದ ಸಿ.ಬಿ.ಎಸ್.ಇ. 10 ನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಸರಗೋಡು ಚಿನ್ಮಯ ವಿದ್ಯಾಲಯವು ಶೇ.100 ಫಲಿತಾಂಶವನ್ನು ಈ ಬಾರಿಯೂ ಗಳಿಸಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 108 ವಿದ್ಯಾರ್ಥಿಗಳಲ್ಲಿ 54 ಮಂದಿ ವಿಶಿಷ್ಟ ಶ್ರೇಣಿಯಲ್ಲೂ(ಡಿಸ್ಟಿಂಕ್ಷನ್), 36 ಮಂದಿ ಪ್ರಥಮ ಶ್ರೇಣಿ, 15 ಮಂದಿ ದ್ವಿತೀಯ ಶ್ರೇಣಿಯಲ್ಲೂ, ಮೂವರು ತೃತೀಯ ಶ್ರೇಣಿಯಲ್ಲೂ ಉತ್ತೀರ್ಣರಾಗಿದ್ದಾರೆ. ಒಟ್ಟು 13 ಮಂದಿ ವಿದ್ಯಾರ್ಥಿಗಳು ಶೇ.90 ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದು ಅವರಲ್ಲಿ ಸನ್ನಿಧಿ ಟಿ.ರೈ ಶೇ.95 (475/500) ಅಂಕಗಳನ್ನು ಗಳಿಸಿ ಮೊದಲ ಸ್ಥಾನವನ್ನು ಗಳಿಸಿರುವರು. ಈಕೆ ಪೆರ್ಲ ನಿವಾಸಿ ಉದ್ಯಮಿ ತಾರಾನಾಥ ರೈ-ಕವಯಿತ್ರಿ, ಸಂಶೋಧಕಿ ರಾಜಶ್ರೀ ಟಿ.ರೈ ದಂಪತಿಗಳ ಸುಪುತ್ರಿ. ಬಾಲ ಪ್ರತಿಭೆಯಾಗಿರುವ ಈಕೆ ಯಕ್ಷಗಾನ ಭಾಗವತಿಕೆ, ಕರ್ನಾಟಕ ಶಾಸ್ತ್ರೀಯ ಸಂಗೀತ, ಕನ್ನಡ, ತುಳು, ಆಂಗ್ಲ ಭಾಷೆಯಲ್ಲಿ ಭಾಷಣ ಸಹಿತ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲೂ ಸಾಧನಾಶೀಲಳಾಗಿದ್ದು, ಆಳ್ವಾಸ್ ನುಡಿಸಿರಿಯ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ಸಹಿತ ವಿವಿಧ ಗೌರವಾದಾರಗಳನ್ನೂ ಪಡೆದವಳಾಗಿದ್ದಾಳೆ.


