ಮುಳ್ಳೇರಿಯ: ಕೊರೊನಾ ರೋಗಬಾಧೆಯ ಕಾರಣದಿಂದ ಕೇರಳ- ಕರ್ನಾಟಕ ಗಡಿಪ್ರದೇಶಗಳ ರಸ್ತೆಯನ್ನು ಮಣ್ಣು ಹಾಕಿ ತಡೆಹಿಡಿದು ಸುಮಾರು ನಾಲ್ಕು ತಿಂಗಳು ಕಳೆದರೂ ತೆರವುಗೊಳಿಸಿಲ್ಲ. ಇದರಿಂದಾಗಿ ಜನರು ಭಾರೀ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಕಾಸರಗೋಡು-ಸುಳ್ಯ ರಾಜ್ಯ ರಸ್ತೆಯಲ್ಲಿ ಗಡಿಪ್ರದೇಶವಾದ ಗಾಳಿಮುಖದಲ್ಲಿ ಲಾಕ್ ಡೌನ್ ಕಾರಣದಿಂದಾಗಿ ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ ಮಣ್ಣುಹಾಕಿ ಬಂದ್ ಮಾಡಲಾಯಿತು. ರೋಗಭೀತಿಯನ್ನು ತಡೆಯಲು ಇದು ಅನಿವಾರ್ಯವಾಗಿತ್ತು. ಆದರೆ ಗಡಿಪ್ರದೇಶದವರ ಪಾಲಿಗೆ ಇದು ನುಂಗಲಾರದ ತುತ್ತಾಗಿಯೇ ಉಳಿದಿದೆ. ಲಾಕ್ ಡೌನ್ ಹಿಂತೆಗೆದರೂ ರಸ್ತೆ ತಡೆ ಹಾಗೆಯೇ ಇದೆ. ಇದರಿಂದಾಗಿ ಈ ಪ್ರದೇಶದ ಅನೇಕ ಮಂದಿಯ ವ್ಯವಹಾರಗಳೆಲ್ಲಾ ನಿಂತುಹೋಗಿದೆ. ಕುಂಟಾರು ಸಮೀಪದ ಪೋಕರಡ್ಕ, ಬಳ್ಳಕ್ಕಾಡು, ಕಟ್ಟತ್ತಬಯಲು ಮೊದಲಾದ ಪ್ರದೇಶಗಳ ನಿವಾಸಿಗಳ ಪಾಲಿಗಂತೂ ಅಡಕತ್ತರಿಯಲ್ಲಿ ಸಿಲುಕಿದ ಅನುಭವ. ಮನೆಯಿಂದ ಹೊರಗಿಳಿದರೆ ಒಂದೆಡೆ ಕರ್ನಾಟಕ ಪೊಲೀಸರು, ಮತ್ತೊಂದೆಡೆ ಕೇರಳ ಪೊಲೀಸರು ತಡೆಯುತ್ತಿದ್ದಾರೆ. ಅತೀ ಅಗತ್ಯ ಕೆಲಸಗಳಿಗೂ ಹೊರ ತೆರಳಲಾರದ ಸಂಕಷ್ಟ ಸ್ಥಿತಿ ಎದುರಾಗಿದೆ. ಆಹಾರ ಸಾಮಾಗ್ರಿ ಖರೀದಿಯೂ ಕಷ್ಟವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕರ್ನಾಟಕದಿಂದ ಕೇರಳಕ್ಕೆ, ಕೇರಳದಿಂದ ಕರ್ನಾಟಕಕ್ಕೆ ಯಾವುದೇ ನಿಯಮವನ್ನೂ ಪಾಲಿಸದೆ ಕಳ್ಳದಾರಿಗಳ ಮೂಲಕ ಸಾಗುವವರಿದ್ದಾರೆ. ಮದ್ಯಪಾನಿಗಳು ಕಳ್ಳ ದಾರಿಗಳ ಮೂಲಕ ಕರ್ನಾಟಕಕ್ಕೆ ತೆರಳುತ್ತಿರುವುದು ತಲೆನೋವಾಗಿಯೇ ಉಳಿದಿದೆ. ಕೊರೊನಾ ರೋಗ ವ್ಯಾಪನವನ್ನು ತಡೆಯುವ ಸಲುವಾಗಿ ಪೊಲೀಸ್ ಕಾವಲು ಅನಿವಾರ್ಯವಾಗಿದೆ. ಆದರೆ ಜನಜೀವನಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಪೊಲೀಸರ ವರ್ತನೆಯ ಬಗ್ಗೆ ಜನರು ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಧಿಕೃತರನ್ನು ಒತ್ತಾಯಿಸಲಾಗಿದೆ.


