ಕುಂಬಳೆ: ತುಳುನಾಡಿನ ಸಾಂಸ್ಕøತಿಕ ನಕಾಶೆಯಲ್ಲಿ ದಿ.ಡಾ.ವೆಂಕಟರಾಜ ಪುಣಿಚಿತ್ತಾಯರ ಕೊಡುಗೆ ಅಜರಾಮರ. ತುಳುವಿಗೆ ಮಾನ ತಂದುಕೊಟ್ಟ ಲಿಪಿ ಸಂಶೋಧಕರಾಗಿ ಪುಣಿಚಿತ್ತಾಯರ ಜೀವಮಾನ ಸಾಧನೆಗೆ ಮಿಗಿಲಾದುದು ಬೇರೊಂದಿಲ್ಲ ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಅವರು ತಿಳಿಸಿದರು.
ತುಳುವೆರೆ ಆಯನೊ ಕೂಟ ಬದಿಯಡ್ಕ ಇದರ ನೇತೃತ್ವದಲ್ಲಿ ತುಳುವಲ್ರ್ಡ್ ಸಹಕಾರದೊಂದಿಗೆ ಸೀತಾಂಗೋಳಿಯಲ್ಲಿ ಸೋಮವಾರ ಸಂಜೆ ನಡೆದ ದಿ.ವೆಂಕಟರಾಜ ಪುಣಿಚಿತ್ತಾಯ ಅವರ 8ನೇ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಗೈದು ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳ ಮೂಲೆ-ಮೂಲೆಗಳಿಗೆ ತೆರಳಿ ತೌಳವ ಸಂಸ್ಕøತಿ, ಜನಪದಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿದ್ದ ದಿ.ಪುಣಿಚಿತ್ತಾಯರು ವಿಶ್ವ ವಿದ್ಯಾನಿಲಯದಂತೆ ಜ್ಞಾನದ ಖನಿಯಾಗಿದ್ದರು. 16ನೇ ಶತಮಾನದ ಅರುಣಾಬ್ಜ ಕವಿಯ ತುಳು ಭಾಗವತೊ, ಗ್ರಾಮೀಣ ವ್ಯಕ್ತಿಯಾದ ಪಕ್ರಿ ಹರಿಜನನಿಂದ ಸಾಹಸಿಕವಾಗಿ ಸಂಗ್ರಹಿಸಿದ ಪಕ್ರಿ ರಾಮಾಯಣ ಸಹಿತ ಪುಣಿಚಿತ್ತಾಯರ ಸಂಶೋಧನೆಗಳು ತುಳುನಾಡಿನ ಚರಿತ್ರೆಗೆ ದೊಡ್ಡ ಕೊಡುಗೆ. ಜೋಕಾಲಿ, ಆಲಡೆ, ಮಹಾಜನಪದ ಸಹಿತ ಹಲವು ಕೃತಿಗಳನ್ನು ನೀಡಿದ್ದ ಅವರ ಬದುಕು-ಬರಹಗಳ ಬಗ್ಗೆ ಸಮಗ್ರ ಅಧ್ಯಯನ ಹಾಗೂ ಮುಂದಿನ ತಲೆಮಾರಿಗೆ ದಾಟಿಸುವಲ್ಲಿ ಗ್ರಾಮ-ಗ್ರಾಮಗಳಲ್ಲಿ ಅವರ ಕೃತಿಗಳ ಅವಲೋಕನದಂತಹ ಚಟುವಟಿಕೆಗಳು ಆಗಬೇಕು ಎಂದರು.
ಯುವ ಸಂಘಟಕ, ಮಂತ್ರಮೂರ್ತಿ ಗುಳಿಗ ಸನನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಅವರು ಮಾತನಾಡಿ, ಪುಣಿಚಿತ್ತಾಯರಂತಹ ಮೇರು ವ್ಯಕ್ತಿತ್ವಗಳನ್ನು ನೆನಪಿಸುವ, ಅವರ ಬದುಕು-ಬರಹಗಳ ಮರು ಓದಿನ ಕಾರ್ಯಚಟುವಟಿಕೆಗಳು ತುರ್ತು ಆಗಬೇಕು. ನಡೆದು ಬಂದ ತೌಳವ ಪರಂಪರೆಯ ವರ್ತಮಾನದ ಕೊಂಡಿಗಳನ್ನು ಬಲಿಷ್ಠಗೊಳಿಸುವ, ಒಗ್ಗಟ್ಟಿನ ಮೂಲಕ ಸಮಗ್ರ ತುಳು ಭಾಷೆಯನ್ನು ಬೆಳೆಸುವ ಮನೋಭೂಮಿಕೆ ವಿಸ್ತರಿಸಲ್ಪಡಬೇಕು ಎಂದರು.
ತುಳುವೆರೆ ಆಯನೊ ಕೂಟದ ಅಧ್ಯಕ್ಷ, ಮಾಜಿ ಗ್ರಾ.ಪಂ.ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಕಣ್ಣೂರು-ಪುತ್ತಿಗೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಯಂತ ಪಾಟಾಳಿ, ಮಾನ ಮಾಸ್ತರ್ ಉಪಸ್ಥಿತರಿದ್ದು ಮಾತನಾಡಿದರು. ತುಳುವೆರೆ ಆಯನೊ ಕೂಟದ ಕಾರ್ಯದರ್ಶಿ ಭಾಸ್ಕರ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ವೆಂಕಟರಾಜ ಪುಣಿಚಿತ್ತಾಯರು ತುಳು ಭಾಷೆಗೆ ನೀಡಿರುವ ಮಹತ್ತರ ಕೊಡುಗೆಗೆ ಲಭಿಸಬೇಕಾದ ಮಾನ ಅವರಿಗೆ ಪ್ರಾಪ್ತಿಯಾಗಿಲ್ಲ. ಕೇರಳ ತುಳು ಅಕಾಡೆಮಿಯ ಮೊದಲ ಅಧ್ಯಕ್ಷರಾಗಿದ್ದ ಅವರ ಅಕಾಡೆಮಿಕ್ ಚಟುವಟಿಕೆಗಳು ಎಂದಿಗೂ ಜಿಲ್ಲೆಯ ದೃಷ್ಟಿಯಿಂದ ಮಹತ್ತರವಾದುದು ಎಂದು ಕಾರ್ಯಕ್ರಮ ನಿರೂಪಿಸಿದರು. ನಿರಂಜನ ರೈ ಪೆರಡಾಲ ಸ್ವಾಗತಿಸಿ, ಖಜಾಂಜಿ ರವಿ ನಾಯ್ಕಾಪು ವಂದಿಸಿದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಗಲಿದ ಕುಂಬಳೆ ಸೀಮೆಯ ತಂತ್ರಿವರ್ಯ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳಿಗೆ ಗೌರವ ನಮನ ಸಲ್ಲಿಸಲಾಯಿತು.
ತುಳುವೆರೆ ಆಯನೊ ಕೂಟ ಹಾಗೂ ತುಳು ವಲ್ರ್ಡ್ ಆಶ್ರಯದಲ್ಲಿ ಮಂಗಳೂರಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕಾರ್ಯಾಲಯದಲ್ಲಿಯೂ ಪುಣಿಚಿತ್ತಾಯರ ಸಂಸ್ಮರಣೆ ನಡೆಯಿತು. ಆಗಸ್ಟ್ ತಿಂಗಳಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಕಾರದೊಂದಿಗೆ ಮಂದಾರ ರಾಮಾಯಣದ ಏಳದೇ ಮಂದಾರ ರಾಮಾಯಣ ಎಂಬ ಕಾರ್ಯಕ್ರಮದ ಎರಡನೇ ವರ್ಷದ ಚಟುವಟಿಕೆ ಆರಂಭಿಸುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.



