ಕಾಸರಗೋಡು: ವ್ಯಾಪಕಗೊಳ್ಳುತ್ತಿರುವ ನೋವೆಲ್ ಕೋವಿಡ್ ಕೊರೊನ ವೈರಸ್ ಹಿನ್ನೆಲೆಯಲ್ಲಿ ಜಿಲ್ಲೆಯ ಐದು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮಧ್ಯೆರಾತ್ರಿಯಿಂದ ಅನ್ವಯವಾಗುವಂತೆ ಸಿ.ಆರ್.ಪಿ.ಸಿ ಸೆಕ್ಷನ್ 144 ಕಾಯ್ದೆಯ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಜಿಲ್ಲಾಧಿಕಾರಿಗಳೂ ಆಗಿರುವ ಡಾ.ಡಿ.ಸಜಿತ್ ಬಾಬು ತುರ್ತು ಆದೇಶ ಹೊರಡಿಸಿದ್ದಾರೆ.
ತೀವ್ರ ರೀತಿಯಲ್ಲಿ ಕೋವಿಡ್ ವೈರಸ್ ಸಾಮುದಾಯಿಕ ಹರಡುವಿಕೆ ಇರುವ ಮಂಜೇಶ್ವರ, ಕುಂಬಳೆ, ಕಾಸರಗೋಡು, ಹೊಸದುರ್ಗ, ನೀಲೇಶ್ವರ ಪೋಲೀಸ್ ಠಾಣಾ ವ್ಯಾಪ್ತಿ ಪ್ರದೇಶಗಳಲ್ಲಿ ಮುಂದಿನ ಆದೇಶ ಬರುವಲ್ಲಿವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
ಏನಿದು ಸೆಕ್ಷನ್ 144...?
ಸಿ ಆರ್ ಪಿ ಸಿ ಅಡಿಯಲ್ಲಿ ಬರುವ ಸೆಕ್ಷನ್ 144 ನ್ನು ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಾರಿಗೊಳಿಸಲಾಗುತ್ತದೆ. ಸೆಕ್ಷನ್ 144 ಜಾರಿ ಮಾಡಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಜಿಲ್ಲಾಧಿಕಾರಿಗಳು ನೋಟಿಫಿಕೇಶನ್ ಹೊರಡಿಸುತ್ತಾರೆ. ಯಾವ ಪ್ರದೇಶದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗುತ್ತದೋ ಆ ಪ್ರದೇಶದಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ಎಲ್ಲಿ ಈ ಸೆಕ್ಷನ್ ಜಾರಿಯಲ್ಲಿರುತ್ತದೋ ಆ ಪ್ರದೇಶ ಮತ್ತದರ ಪರಿಸರ ಪ್ರದೇಶಗಳಲ್ಲಿ ಆಯುಧಗಳನ್ನು ತರುವುದು, ಅಥವಾ ತೆಗೆದುಕೊಂಡು ಹೋಗುವುದುಅಪರಾಧವಾಗಿರುತ್ತದೆ. ಅಂಥವರ ಮೇಲೆ ದೂರು ದಾಖಲಾಗುತ್ತದೆ. ತಕ್ಷಣ ಪೋಲೀಸರಿಗೆ ಕ್ರಮ ಕೈಗೊಳ್ಳುವ ಪೂರ್ಣ ಹಕ್ಕು ನಿಕ್ಷಿಪ್ತವಾಗಿರುತ್ತದೆ. ಒಂದು ವರ್ಷ ಜೈಲು, ದಂಡ ವಿಧಿಸಬಹುದಾಗಿದೆ. ಜಾಮೀನಿಗೂ ಅವಕಾಶವಿದೆ.
1974 ರಲ್ಲಿ ಈ ಕಾನೂನು ಜಾರಿಗೊಳಿಸಲಾಯಿತು. ಪೋಲೀಸರಿಗೆ ಶಕ್ತಿ ನೀಡಿರುವ ಕಾನೂನು ಇದಾಗಿದೆ.
ಪ್ರಸ್ತುತ ಕೋವಿಡ್ ಕಾಲದಲ್ಲಿ ಜನದಟ್ಟಣೆ, ಅಧಿಕಾರಿಗಳ ಮಾತನ್ನು ಆಲಿಸದಿರುವ ನಾಗರಿಕರನ್ನು ಹದ್ದುಬಸ್ತಿನಲ್ಲಿಡಲು, ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಜಾರಿಗೊಳಿಸಲಾಗುತ್ತಿದೆ.


