ಮಂಜೇಶ್ವರ: ಗಡಿನಾಡಿನ ಹೆಮ್ಮೆಯ ಯಕ್ಷಗಾನ ಕಲಾಸಂಘಟನೆ 'ಯಕ್ಷಬಳಗ ಹೊಸಂಗಡಿ' ಇದರ 29ನೇ ವರ್ಷದ ಆಷಾಡಮಾಸ ಯಕ್ಷಗಾನ ಕೂಟದ ಸಮಾರೋಪ ಇತ್ತೀಚೆಗೆ ಕಲಾವಿದ ನಾಗರಾಜ ಪದಕಣ್ಣಾಯ ಮೂಡಂಬೈಲು ಅವರ ನಿವಾಸ 'ಶ್ರೀರಾಮ ನಿಲಯ' ದಲ್ಲಿ ಸರ್ಕಾರದ ಕೋವಿದ್ ನಿಯಮಗಳಿಗೆ ಅನುಸಾರ ನೆರವೇರಿತು.
ಸಮಾರಂಭವನ್ನು ವೇದಮೂರ್ತಿ ಬಾಲಕೃಷ್ಣ ಭಟ್ ದಡ್ಡಂಗಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ನಡೆದ ಕಿರು ಸಮಾರಂಭದಲ್ಲಿ ಈ ವರ್ಷದ ವಾರ್ಷಿಕ ಸನ್ಮಾನವನ್ನು ಹಿರಿಯ ಯಕ್ಷಗಾನ ನಾಟ್ಯ ಗುರುಗಳು, ವೇಶಧಾರಿ ಅರ್ಥಧಾರಿಗಳೂ ಆಗಿರುವ ಯಕ್ಷಬಳಗದ ಹಿರಿಯ ಸದಸ್ಯ ಕೋಳ್ಯೂರು ಶಂಕರ ಆಚಾರ್ಯರಿಗೆ ಗೌರವಧನ ದೊಂದಿಗೆ ನೀಡಲಾಯಿತು.
ಸನ್ಮಾನ ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ, ವೇದಮೂರ್ತಿ ಬಾಲಕೃಷ್ಣ ಭಟ್ ದಡ್ಡಂಗಡಿ, ರಾಮಚಂದ್ರ ರಾವ್ ಕಡಂಬಾರು, ರಾಮದಾಸ ಆಚಾರ್ಯ ಕಡಂಬಾರು, ನಿವೃತ್ತ ಶಿಕ್ಷಕ ಶಿವರಾಮ ಪದಕಣ್ಣಾಯ ಮೂಡಂಬೈಲು, ನ್ಯಾಯವಾದಿ ವಿಠಲ ಭಟ್ ಮೊಗಸಾಲೆ, ಯಕ್ಷಬಳಗ ಸಂಚಾಲಕ ಸತೀಶ ಅಡಪ ಸಂಕಬೈಲು, ಕಾರ್ಯದರ್ಶಿ ನಾಗರಾಜ ಪದಕಣ್ಣಾಯ ಮೂಡಂಬೈಲು ಉಪಸ್ಥಿತರಿದ್ದರು.
ನಾಗರಾಜ ಪದಕಣ್ಣಾಯ ಸ್ವಾಗತಿಸಿ, ಸತೀಶ ಅಡಪ ಸಂಕಬೈಲು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ನುರಿತ ಕಲಾವಿದರ ಕೂಡುವಿಕೆಯಲ್ಲಿ 'ರಾವಣ ವಧೆ' ಯಕ್ಷಗಾನ ತಾಳಮದ್ದಳೆ ಜರಗಿತು. ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ದೇವಿಪ್ರಸಾದ ಆಳ್ವ ತಲಪಾಡಿ, ರತ್ನಾಕರ ಆಳ್ವ ತಲಪಾಡಿ ಹಾಗೂ ಚೆಂಡೆಮದ್ದಳೆಯಲ್ಲಿ ರಾಜಾರಾಮ ಬಲ್ಲಾಳ ಚಿಪ್ಪಾರು, ಲವ ಅಚಾರ್ಯ ಐಲ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ರಾವಣನ ಪಾತ್ರದಲ್ಲಿ ಸದಾಶಿವ ಆಳ್ವ ತಲಪಾಡಿ, ಶ್ರೀರಾಮನಾಗಿ ನ್ಯಾಯವಾದಿ ವಿಠಲ ಭಟ್ ಮೊಗಸಾಲೆ, ಮಾತಲಿ ರಾಜಾರಾಮ ರಾವ್ ಮೀಯಪದವು, ಮಂಡೋದರಿ ನಾಗರಾಜ ಪದಕಣ್ಣಾಯ ಮೂಡಂಬೈಲು, ರಾವಣ ದೂತ ಸತೀಶ ಅಡಪ ಸಂಕಬೈಲು ರಂಜಿಸಿದರು.


