ಕಾಸರಗೋಡು: ಓಣಂ ಹಬ್ಬಾಚರಣೆ ವೇಳೆ ಅಂಗಡಿಗಳಲ್ಲಿ ಜನನಿಬಿಢತೆ ನಿಯಂತ್ರಣದಲ್ಲಿ ವ್ಯಾಪಾರಿಗಳ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಜಿಲ್ಲೆಯ ವ್ಯಾಪಾರಿ-ವ್ಯವಸಾಯಿ ಪ್ರತಿನಿಧಿಗಳೊಂದಿಗೆ ಬುಧವಾರ ನಡೆಸಲಾದ ವೀಡಿಯೋ ಕಾನ್ ಫೆರೆನ್ಸ್ ನಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ಸೋಂಕು ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಜಾಗರೂಕತೆ ಪಲಿಸಬೇಕು. ಮಾಸ್ಕ್, ಗ್ಲೌಸ್, ಸಾನಿಟೈಸರ್ ಬಳಕೆ ಸಹಿತ ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದೇಶ ಉಲ್ಲಂಘನೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದವರು ನುಡಿದರು.
ಅಂಗಡಿಗಳ ಒಳಗೆ, ಹೊರಗೆ ಜನನಿಬಿಢತೆ ಕಂಡುಬರಬಾರದು. ಅಂಗಡಿಗಳಲ್ಲಿ ಎ.ಸಿ. ಬಳಕೆ ಕೂಡದು. ವ್ಯಾಪಾರ ಸಂಸ್ಥೆಗಳ ನೌಕರ ಯಾ ಗ್ರಾಹಕರಲ್ಲಿ ಯಾರಿಗಾದರೂ ಕೋವಿಡ್ ಪಾಸಿಟಿವ್ ಖಚಿತವಾದಲ್ಲಿ ಆ ಸಂಸ್ಥೆಯ 100 ಮೀಟರ್ ಸುತ್ತಳತೆ ಪ್ರದೇಶದ ಅಂಗಡಿಗಳಿಗೆ ನಿಯಂತ್ರಣ ಹೇರಲಾಗುವುದು. ಸ್ಥಳೀಯಾಡಳಿತ ಸಂಸ್ಥೆಗಳು ನಿಯಂತ್ರಣ ಹೇರುವ ವೇಳೆ ವ್ಯಾಪಾರಿಗಳ ಜೊತೆ ಸಮಾಲೋಚನೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿರುವರು.
ಕಾನೂನು ಉಲ್ಲಂಘಿಸಿ ಹಾದಿಬದಿ, ವಾಹನಗಳಲ್ಲಿ ವ್ಯಾಪಾರ ನಡೆಸುವವರ ವಿರುದ್ಧ ಕ್ರಮಕೈಗೊಳ್ಳಲು ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಹೊಣೆಗಾರಿಕೆಯಿದೆ. ಕೋವಿಡ್ ಸಂಹಿತೆಗಳ ಸೂಕ್ತ ರೀತಿಯ ಪಾಲಿಕೆ ಖಚಿತಪಡಿಸುವ ನಿಟ್ಟಿನಲ್ಲಿ ಆಹಾರ ಸುರಕ್ಷೆ, ತೂಗಳತೆ ನಿಯಂತ್ರಣ ವಿಭಾಗಗಳ ನೇತೃತ್ವದಲ್ಲಿ ವಿಶೇಷದಳ ಚಟುವಟಿಕೆ ಆರಂಭಿಸಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿರುವರು.
ವೀಡಿಯೋ ಕಾನ್ ಫೆರೆನ್ಸ್ ನಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಉಪಜಿಲ್ಲಾಧಿಕಾರಿ ಅರುಣ್ ಎ.ವಿಜಯನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ವಲಯ ಕಂದಾಯ ಅಧಿಕಾರಿ ಟಿ.ಆರ್.ಅಹಮ್ಮದ್ ಕಬೀರ್, ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ಜೈಸನ್ ಮ್ಯಾಥ್ಯೂ, ಕಾಸರಗೋಡು, ಕಾಞಂಗಾಡ್ ಡಿ.ವೈ.ಎಸ್.ಪಿ,ಗಳು, ವ್ಯಾಪಾರಿ-ವ್ಯವಸಾಯಿ ಏಕೋಪನಸಮಿತಿ ಪ್ರತಿನಿಧಿ ಕೆ.ಅಹಮ್ಮದ್ ಷೆರೀಫ್, ವ್ಯಾಪಾರ ವ್ಯವಸಾಯಿ ಸಮಿತಿ ಪ್ರತಿನಿಧಿ ರಾಘವನ್ ವೆಳುತ್ತೋಳಿ, ಹೋಟೆಲ್ ಆಂಡ್ ರೆಸ್ಟಾರೆಂಟ್ ಅಸೋಸಿಯೇಶನ್ ಪ್ರತಿನಿಧಿ ನಾರಾಯಣ ಪೂಜಾರಿ, ಕಿರು ವ್ಯಾಪಾರಿ ಪ್ರತಿನಿಧಿಗಳಾದ ರವೀಂದ್ರನ್ ಕೋರೋತ್, ಬಿಂದು ಸಿ.ಎಂ. ಮೊದಲಾದವರು ಉಪಸ್ಥಿತರಿದ್ದರು.


