ಕುಂಬಳೆ: ನಾಯ್ಕಾಪು ಶ್ರೀ ಶಾಸ್ತಾರ ಬನದಲ್ಲಿ ಸಿಂಹ ಮಾಸದ ಪ್ರಯುಕ್ತ ಬಲಿವಾಡು ಕೂಟವನ್ನು ಕೋವಿಡ್ ನಿಬಂಧನೆಗಳಿಗೆ ಅನುಸಾರ ನಡೆಸುವ ಬಗ್ಗೆ ಮತ್ತು ಪರಿಸರದಲ್ಲಿ ನಡೆಸಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ಚರ್ಚಿಸುವುದಕ್ಕಾಗಿ ನಾಯ್ಕಾಪು ಶ್ರೀ ಶಾಸ್ತಾರ ಸೇವಾ ಸಮಿತಿಯ ಪದಾಧಿಕಾರಿಗಳ ಸಭೆ ಇತ್ತೀಚೆಗೆ ಬನದ ಪರಿಸರದಲ್ಲಿ ಜರಗಿತು.
ಕುಂಬಳೆ ಗ್ರಾಮ ಪಂಚಾಯತಿ ಸದಸ್ಯ ಮುರಳೀಧರ ಯಾದವ್ ಕಾರ್ಯಕ್ರಮವನ್ನು ಉದ್ಘಾಟಿಸಿ, ನಡೆಸಲು ಉದ್ದೇಶಿಸುವ ಕಾರ್ಯಕ್ರಮಗಳ ಬಗ್ಗೆ ಸೂಕ್ತ ಸಲಹೆಯನ್ನಿತ್ತು ಅನನುಕೂಲತೆಗಳನ್ನು ಎಲ್ಲರೂ ಸಹಿಸಿಕೊಂಡು ಪೂರ್ಣ ಸಹಕಾರ ನೀಡುವಂತೆ ಕೋರಿದರು. ಸೇವಾಸಮಿತಿಯ ಆಧ್ಯಕ್ಷ ಸುಬ್ರಹ್ಮಣ್ಯ ಪ್ರಸಾದ್ ಹಿಳ್ಳೆಮನೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸನ್ನಿಧಾನದ ಪ್ರಧಾನ ಅರ್ಚಕ ಮೇಣ ರಾಮಕೃಷ್ಣ ಭಟ್ ಭಕ್ತಾದಿಗಳು ಅನುಸರಿಸಬೇಕಾದ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ವಿವರಿಸಿದರು. ಕೋಶಾಧಿಕಾರಿ ಗುರುಮೂರ್ತಿ ನಾಯ್ಕಾಪು ಕಾರ್ಯಕ್ರಮ ನಿರೂಪಣೆ ಮಾಡಿ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಎಂ. ಬಾಲಕಷ್ಣ ಶರ್ಮ ಸ್ವಾಗತಿಸಿ, ವಂದಿಸಿದರು.


