ಕಾಸರಗೋಡು : ಕಾಸರಗೋಡು ಜಿಲ್ಲೆಯಲ್ಲಿ ಓಣಂ ಹಬ್ಬಕ್ಕೆ ಆರೋಗ್ಯ ಪೂರ್ಣ ಹೊಸ ಉತ್ಸಾಹ ತರಲಿವೆ ಊರ ಸಂತೆಗಳು.
ಕುಟುಂಬ ಶ್ರೀ ಜೆ.ಎಲ್.ಜಿ. ಕೃಷಿಕ ಸಂಘಗಳು ಈ ಸಂತೆಗಳ ಮೂಲಕ ಜೈವಿಕ ತರಕಾರಿಗಳನ್ನು ಜನತೆಗೆ ತಲಪಿಸಲಿವೆ. ಸಾಂಪ್ರದಾಯಿಕ ಅಡುಗೆ ವೈವಿಧ್ಯಗಳಾದ ಸಾಂಬಾರ್, ಅವಿಲು, ಪಲ್ಯ ಇತ್ಯಾದಿಗಳ ರುಚಿ ಅಧಿಕಗೊಳಿಸಬಲ್ಲ ಊರ ತಳಿಗಳಾದ ಬೆಂಡೆ, ಮುಳ್ಳು ಸೌತೆ, ಹಾಗಲಕಾಯಿ ಸಹಿತ ನಳನಳಿಸುವ ತರಕರಿಗಳು ಈ ಸಂತೆಗಳ ಮೂಲಕ ಲಭಿಸಲಿವೆ. ಗ್ರಾಮೀಣ ಶುದ್ಧತೆಯೊಂದಿಗೆ ಪ್ರಕೃತಿಗೆ ಪೂರಕವಾಗಿ ಬೆಳೆದ ತರಕಾರಿಗಳು ಈ ಮೂಲಕ ರಂಗಕ್ಕಿಳಿಯಲಿವೆ.
ಕುಟುಂಬಶ್ರೀಯ ಫಾರಂ ಲೈವ್ಲೀ ಫುಡ್ ಯೋಜನೆಗೆ ಅಂಗವಾಗಿ ಈ ಊರ ಸಂತೆಗಳು ನಡೆಯುತ್ತವೆ. ಕುಟುಂಬಶ್ರೀ ಮೂಲಕ ಕೃಷಿಗುಂಪುಗಳು ನಡೆಸುವ ಬೆಳೆಯುವ ಕೃಷಿ ಉತ್ಪನ್ನಗಳಿಗೆ ಮರುಕಟ್ಟೆ ಕಂಡುಕೊಳ್ಳುವುದು, ವಿಷಾಂಶ ರಹಿತ ತರಕಾರಿಗಳನ್ನು ಗ್ರಾಹಕರಿಗೆ ಒದಗಿಸುವುದು ಇತ್ಯಾದಿ ಉದ್ದೇಶಗಳೊಂದಿಗೆ ಊರಸಂತೆಗಳು ನಡೆದುಬರುತ್ತಿವೆ.
ಕಾಸರಗೋಡು ಜಿಲ್ಲೆಯ 42 ಸಿ.ಡಿ.ಎಸ್.ಗಳನ್ನು ಕೇಂದ್ರೀಕರಿಸಿ ಕೃಷಿ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲಪಿಸಲಾಗುತ್ತಿದೆ. ಪ್ರತಿ ಸಿ.ಡಿ.ಎಸ್. ಅಥವಾ ಗ್ರಾಮ ಪಂಚಾಯತ್ ಕೇಂದ್ರೀಕರಿಸಿ ಅಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳನ್ನು ಸ್ಥಳೀಯ ಮಟ್ಟದಲ್ಲೇ ಸಮುದಾಯ ಅಭಿವೃದ್ಧಿ ಸೊಸೈಟಿಯ ನೇತೃತ್ವ ದಲ್ಲಿ ಸಂತೆಗಳನ್ನು ಏರ್ಪಡಿಸಿ ಮಾರಾಟ ಮಾಡಲಾಗುತ್ತದೆ. ಈ ಮೂಲಕ ಕೃಷಿಕರಿಗೆ ನ್ಯಾಯಬೆಲೆಯೂ ಲಭಿಸುತ್ತದೆ. ಜೊತೆಗೆ ಅನೇಕ ಮಂದಿಗೆ ನೌಕರಿಯೂ ದೊರೆಯುತ್ತದೆ.
"ಸುಭಿಕ್ಷ ಕೇರಳಂ", "ಕೃಷಿಯತ್ತ ನಾನು ಮತ್ತು ನನ್ನ ನೆರೆಕೂಟ","ಕೃಷಿಯತ್ತ ನಾನು ಮತ್ತು ನನ್ನ ಊರು" ಇತ್ಯಾದಿ ಅಭಿಯಾನಗಳ ಅಂಗವಾಗಿ ರಚಿಸಲಾದ 2159 ಕೃಷಿ ಗುಂಪುಗಳು ಕೃಷಿ ಕಾಯಕದಲ್ಲಿ ಸಕ್ರಿಯವಾಗಿವೆ. ಇವರು ಬೆಳೆಯುವಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ, ಕೋವಿಡ್ ಸೋಂಕಿನ ಬಾಧೆಯ ನಡುವೆಯೂ ಜನತೆಗೆ ಜೈವಿಕ, ರೋಗ್ಯ ಪೂರ್ಣ ತರಕಾರಿ ಒದಗಿಸುವ ಉದ್ದೇಶದಿಂದ ಕುಟುಂಬಶ್ರೀ ನೇತೃತ್ವದಲ್ಲಿ ಕಾಸರಗೋಡು ಜಿಲ್ಲೆಯ ವಿವಿಧೆಡೆ ತಿಂಗಳ ಸಂತೆ, ವಾರದ ಸಂತೆ, ದಿನ ಸಂತೆ ಇತ್ಯಾದಿಗಳು ಯಶಸ್ವಿಯಾಗಿ ನಡೆದುಬರುತ್ತಿವೆ.
ಚಿತ್ರ ಮಾಹಿತಿ 1): ಕಾರಡ್ಕ ಪಂಚಾಯತ್ ನಲ್ಲಿ ನಡೆಯುತ್ತಿರುವ ಊರ ಸಂತೆ., 2)ಮಂಗಲ್ಪಾಡಿ ಪಂಚಾಯತ್ ನಲ್ಲಿ ನಡೆಯುತ್ತಿರುವ ಊರ ಸಂತೆ.



