ತಿರುವನಂತಪುರ: ಕೊರೋನಾ ವೈರಸ್ ರಾಜ್ಯಾದ್ಯಂತ ಅನಿರೀಕ್ಷಿತ ತಿರುವುಗಳಲ್ಲಿ ಇದೀಗ ವ್ಯಾಪಕಗೊಳ್ಳುತ್ತಿದೆ. ಸೋಂಕಿನ ವ್ಯಾಪಕತೆಯ ನಿಯಂತ್ರಣಗಳು ಬಹುತೇಕ ಕೈಮೀರಿದ ಹಂತ ತಲಪಿದಂತಿದೆ. ವೈರಸ್ ಹರಡುವಿಕೆಯು ಜಾಗತಿಕ ಅತಿಮೀರಿದ ನಾಗಾಲೋಟಕ್ಕೆ ಮಿತಿ ತಂದೊಡ್ಡಿದೆ. ಶಾಲಾ ಶಿಕ್ಷಣದಂತಹ ವಿಷಯಗಳು ಸಹ ಅಸ್ತವ್ಯಸ್ತಗೊಂಡಿವೆ. ಈ ಸನ್ನಿವೇಶದಲ್ಲಿಯೇ ಕೇರಳ ಒಂದು ಮಹತ್ವದ ಕಾರ್ಯವೊಂದಕ್ಕೆ ಸಿದ್ದಗೊಳ್ಳುತ್ತಿದೆ.
ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳ ಹಾಲಿ ಆಡಳಿತ ಕಾಲಾವಧಿ ಕೊನೆಗೊಳ್ಳುತ್ತಿದೆ. ಹೊಸ ಆಡಳಿತ ಮಂಡಳಿಗಳು ಕಾಲಾಕಾಲಕ್ಕೆ ಪುನರ್ ನವೀಕರಣಗೊಳ್ಳಬೇಕಾದುದು ಪ್ರಜಾಪ್ರಭುತ್ವದ ಮೂಲಾಧಾರವೂ ಕೂಡ. ಆದರೆ ಕೋವಿಡ್ ವ್ಯಾಪಕತೆ ಸವಾಲಾಗಿರುವುದು ಕುತೂಹಲಕ್ಕೂ ಕಾರಣವಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಚುನಾವಣೆ ಹೇಗಿರಲಿದೆ? ಚುನಾವಣಾ ಪ್ರಕ್ರಿಯೆಯಲ್ಲಿ ಯಾವ ಬದಲಾವಣೆಗಳು ನಡೆಯುತ್ತವೆ? ಎನ್ನುವುದು ಚುನಾವಣಾ ಕಾವಿನಷ್ಟೇ ಮಹತ್ವದ್ದಾಗಿದೆ.
ರಾಜ್ಯದ ಹೊಸ ಆಡಳಿತ ಮಂಡಳಿಗಳು ನವೆಂಬರ್ 12 ರಂದು ಅಧಿಕಾರ ವಹಿಸಿಕೊಳ್ಳಲಿವೆ ಎಂದು ರಾಜ್ಯ ಚುನಾವಣಾ ಆಯುಕ್ತ ವಿ.ಭಾಸ್ಕರನ್ ಹೇಳಿದ್ದಾರೆ. ಸ್ಥಳೀಯ ಸಂಸ್ಥೆಗಳ ಅವಧಿ ನವೆಂಬರ್ 11 ಕ್ಕೆ ಕೊನೆಗೊಳ್ಳುತ್ತದೆ. ಈ ಸಂದರ್ಭದಲ್ಲಿ, ಸಂವಿಧಾನದ ಪ್ರಕಾರ, ನಿಗದಿತ ಸಮಯದೊಳಗೆ ಚುನಾವಣೆ ನಡೆಯಲಿದೆ ಎಂದು ಆಯುಕ್ತರು ಹೇಳಿರುವರು. ಹಾಗಾಗದಲ್ಲಿ ಅಕ್ಟೋಬರ್ ಅಂತ್ಯದಲ್ಲಿ ಚುನಾವಣೆ ನಡೆಯಲಿದೆ ಎಂದು ಅವರು ಸೂಚಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಆಯೋಗವು ಈಗಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದೆ. ಕೋವಿಡ್ ನಿಬಂಧನೆಗೆ ಅನುಗುಣವಾಗಿ ಮತದಾನ ಮಾಡುವುದರಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಆದರೆ, ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನಂತರ ದಿನಾಂಕವನ್ನು ನಿರ್ಧರಿಸಲಾಗುವುದು ಎಂದು ಆಯೋಗ ತಿಳಿಸಿದೆ.
ಚುನಾವಣಾ ದಿನಾಂಕವನ್ನು ಘೋಷಿಸುವ ಮೊದಲು ಈ ಬಗ್ಗೆ ಸಮಗ್ರ ಚರ್ಚೆ ನಡೆಯುತ್ತಿದೆ. ಆಯೋಗವು ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಪೆÇಲೀಸ್ ಮುಖ್ಯಸ್ಥರು ಸೇರಿದಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಿದೆ.
ಈ ಬಾರಿ ರಾಜ್ಯವು ಅಭೂತಪೂರ್ವ ಚುನಾವಣಾ ಕಾವಿಗೆ ಸಾಕ್ಷಿಯಾಗಲಿದೆ. ಸಾಮಾಜಿಕ ದೂರವನ್ನು ಇಟ್ಟುಕೊಂಡು ಮತದಾನ ಕೇಂದ್ರಗಳಲ್ಲಿ ಕ್ಯೂ ನಿಲ್ಲಿಸಲಾಗುವುದು. ಚುನಾವಣಾ ಪ್ರಚಾರಗಳು ಕೋವಿಡ್ ನಿಬಂಧನೆಗಳಿಗೆ ಅನುಗುಣವಾಗಿ ನಡೆಸಲಾಗುವುದು. ಇದರಂತೆ ಮತಗಳಿಕೆಯ ಪ್ರಚಾರಗಳಿಗೆ ಮೂರು ಜನರಿಗಿಂತ ಹೆಚ್ಚು ಜನರು ಮನೆಗಳ ಸಂದರ್ಶನ ನಡೆಸಬಾರದೆಂಬ ಷರತ್ತು ಆಯೋಗ ವಿಧಿಸುತ್ತದೆ. ಪ್ರಚಾರ ಮತ್ತು ಮತದಾನದ ಸಮಯದ ಮಾರ್ಗಸೂಚಿಗಳನ್ನು ಆರೋಗ್ಯ ಇಲಾಖೆ ಸಿದ್ಧಪಡಿಸುತ್ತಿದೆ. ಮತದಾರರನ್ನು ಓಲೈಸಲು ಮೈಕ್ ಪ್ರಚಾರದ ಆರ್ಭಟೆಗೆ ಅನುಮತಿಸಲಾಗುವುದಿಲ್ಲ. ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಚುನಾವಣಾ ಅಧಿಕಾರಿಗಳು ತುರ್ತು ಕ್ರಮಗಳನ್ನು ರಚಿಸಲಾಗುವುದೆಂದು ಆಯೋಗ ಹೇಳಿದೆ.
ಸಂಕ್ಷಿಪ್ತವಾಗಿ, ಈ ಚುನಾವಣೆಯು ನಾವು ಇಲ್ಲಿಯವರೆಗೆ ನೋಡಿದ ಚುನಾವಣೆಗಳಿಗಿಂತ ಭಿನ್ನವಾಗಿರುತ್ತದೆ. ಈ ವ್ಯತ್ಯಾಸವು ಮುಖ್ಯವಾಗಿ ಪ್ರಚಾರ ವೈಖರಿಯ ಮೇಲೆ ಪ್ರಭಾವ ಬೀರಲಿದೆ. ರಾಜಕೀಯ ಪಕ್ಷಗಳು ನೇರ ಪ್ರಚಾರದ ಬದಲು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರಕ್ಕೆ ಆದ್ಯತೆ ನೀಡಲಿವೆ.
ಚುನಾವಣೆಗೆ ಅಧಿಕೃತ ತರಬೇತಿ ಈ ತಿಂಗಳ ಕೊನೆಯ ವೇಳೆ ಪ್ರಾರಂಭವಾಗಲಿದೆ ಎಂದು ಆಯೋಗ ತಿಳಿಸಿದೆ. ಮಾಸ್ಟರ್ ತರಬೇತುದಾರರಿಗೆ ಆನ್ಲೈನ್ ತರಬೇತಿ ನೀಡಲಾಗುವುದು. ಇತರ ಅಧಿಕಾರಿಗಳಿಗೆ ತರಬೇತಿ ಬ್ಲಾಕ್ ಮಟ್ಟದಲ್ಲಿರುತ್ತದೆ. ತರಬೇತಿಯನ್ನು ನೇರವಾಗಿ 30 ಜನರ ಬ್ಯಾಚ್ಗಳಲ್ಲಿ ನಡೆಸಲಾಗುವುದು. ಚುನಾವಣಾ ವೆಚ್ಚ 150 ಕೋಟಿ ರೂ. ಆಗಲಿದೆ. ಆದರೆ ಕೋವಿಡ್ ಮಾನದಂಡಗಳನ್ನು ಸಹ ಖಾತ್ರಿಪಡಿಸಿಕೊಳ್ಳಬೇಕಾಗಿರುವುದರಿಂದ ವೆಚ್ಚವು ಹೆಚ್ಚಾಗುವ ಸಾಧ್ಯತೆ ಇದೆಯೆಂದು ಆಯೋಗ ಮುನ್ಸೂಚನೆ ನೀಡಿದೆ. ಆದ್ದರಿಂದ ಹೆಚ್ಚುವರಿ 15 ಕೋಟಿ ರೂ. ಮಂಜೂರುಗೊಳಿಸಬೇಕಾಗಿ ಬರಲಿದೆ ಎಂದು ಅಂದಾಜಿಸಲಾಗಿದೆ.


