ತಿರುವನಂತಪುರ: ನಿನ್ನೆ ಸಂಜೆ ತಿರುವನಂತಪುರ ಸೆಕ್ರಟರಿಯೇಟ್ ನ ಸಾರ್ವಜನಿಕ ಆಡಳಿತ ಇಲಾಖೆ ಇರುವ ಉತ್ತರ ಸ್ಯಾಂಡ್ವಿಚ್ ಬ್ಲಾಕ್ನಲ್ಲಿ ಸಂಭವಿಸಿದ ಅಗ್ನಿ ದುರಂತದ ಬೆನ್ನಿಗೆ ನಾಟಕೀಯ ಬೆಳವಣಿಗೆಗಳಿಗೆ ರಾಜ್ಯ ಸಾಕ್ಷಿಯಾಯಿತು. ಅಗ್ನಿ ಆಕಸ್ಮಿಕವೆಂಬುದು ಕಟ್ಟುಕತೆಯಾಗಿದ್ದು, ಅದು ಪೂರ್ವಯೋಜಿತ ಎಂದು ಬಿಜೆಪಿ ಮತ್ತು ಯುಡಿಎಫ್ ಆರೋಪಿಸಿವೆ.
ಅಗ್ನಿ ಅವಘಡವನ್ನು ಪೂರ್ವಯೋಜಿತವಾಗಿ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಆರೋಪಿಸಿದ್ದಾರೆ. ಚಿನ್ನ ಕಳ್ಳ ಸಾಗಣಿಕೆ ಪ್ರಕರಣದ ತನಿಖೆ ಮುಖ್ಯಮಂತ್ರಿಯನ್ನು ತಲುಪಬಹುದೆಂಬ ಭಯದಿಂದ ಇಂತಹ ಕುಕೃತ್ಯಕ್ಕೆ ಆಡಳಿತ ಯಂತ್ರದ ನಶಿಸುವಿಕೆಗೆ ಒಳಗಾಗಿಸಬೇಕಾಯಿತೆಂದು ಸುರೇಂದ್ರ ಆರೋಪಿಸಿದರು. ಸಚಿವ ಜಲೀಲ್ ಗೆ ಸಂಬಂಧಿಸಿದ ಮಾಹಿತಿಯನ್ನು ನಾಶಮಾಡುವ ಪ್ರಯತ್ನವಾಗಿ ದುರಂತ ಸೃಷ್ಟಿಸಲಾಗಿದೆ. ಮತ್ತು ಅವಘಡ ಉಂಟಾದ ಪರಿಸರದ ಸಿಸಿಟಿವಿಗಳು ಮಿಂಚಿನ ಆಘಾತಕ್ಕೆ ಹಾನಿಯಾಗಿದೆ ಎಂಬ ಈ ಹಿಂದಿನ ಹೇಳಿಕೆಯ ಹಿಂದೆ ವಂಚನೆ ಅಡಗಿದೆ ಎಂದು ಸುರೇಂದ್ರನ್ ಆರೋಪಿಸಿದ್ದಾರೆ.ಸೆಕ್ರಟರಿಯೇಟ್ ನೊಳಗೆ ನುಗ್ಗಿದ ಕೆ. ಸುರೇಂದ್ರನ್ ಅವರನ್ನು ಬಲವಂತವಾಗಿ ಬಂಧಿಸಿ ಕರೆದೊಯ್ಯಲಾಯಿತು. ಜೊತೆಗಿದ್ದ ಇತರ ಬಿಜೆಪಿ-ಯುವಮೋರ್ಚಾ ಮುಖಂಡರನ್ನು ಪೆÇಲೀಸರು ಬಂಧಿಸಿದ್ದಾರೆ.
ಇದೇ ವೇಳೆ ಪ್ರತಿಕ್ರಿಯಿಸಿದ ರಾಜ್ಯ ಕಾರ್ಯದರ್ಶಿ ವಿಶ್ವಾಸ್ ಮೆಹ್ತಾ ಅವರು ಎಲ್ಲಾ ದಾಖಲೆಗಳು ಸುರಕ್ಷಿತವೆಂದು ಸ್ಪಷ್ಟಪಡಿಸಿರುವರು. ಮುಖ್ಯ ಕಾರ್ಯದರ್ಶಿ ನೇರವಾಗಿ ಮಾಧ್ಯಮಗಳಿರುವಲ್ಲಿ ತೆರಳಿ ಸಮಜಾಯಿಶಿ ನೀಡಿರುವುದು ಸಂಶಯಕ್ಕೂ ಕಾರಣವಾಯಿತು. ದುರಂತದ ಬಗ್ಗೆ ವಿವರವಾದ ತನಿಖೆ ನಡೆಸಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.
ಬೆಂಕಿಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಒತ್ತಾಯಿಸಿದ್ದಾರೆ. ಸರ್ಕಾರದ ವಿರುದ್ಧದ ಸಾಕ್ಷ್ಯಗಳನ್ನು ನಾಶಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ರಮೇಶ್ ಚೆನ್ನಿತ್ತಲ ಹೇಳಿದರು. ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದರು. ಎನ್.ಐ.ಎ. ಕೋರಿದಂತೆ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಯಾವುದೇ ಪುರಾವೆಗಳನ್ನು ನೀಡದೆ ಚಿನ್ನದ ಕಳ್ಳಸಾಗಣೆ ಪ್ರಕರಣದ ಆರೋಪಿಗಳನ್ನು ಉಳಿಸಲು ಸಿಎಂ ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ಶಾಸಕರು ತಾವು ಜನರ ಪ್ರತಿನಿಧಿಗಳು ಮತ್ತು ದುರತಂದ ನೇರ ವೀಕ್ಷಣೆಯ ಹಕ್ಕಿದೆ ಎಂದು ಹೇಳಿ ಸೆಕ್ರಟರಿಯೇಟ್ ಒಳನುಗ್ಗಲು ಪ್ರಯತ್ನಿಸಿದರು. ಘಟನೆಯ ನಂತರ, ತಿರುವನಂತಪುರದ ವಿವಿಧ ಭಾಗಗಳಿಂದ ಯುಡಿಎಫ್ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದರು. ಆದರೆ ಕೋವಿಡ್ ಮಾನದಂಡಗಳನ್ನು ಧಿಕ್ಕರಿಸಿ ಜನರು ಜಮಾಯಿಸಿದ್ದು ಇನ್ನೊಂದು ಮಗ್ಗುಲಲ್ಲಿ ಕಳವಳಕ್ಕೂ ಕಾರಣವಾಗಿದೆ.


