ಕಾಸರಗೋಡು: ಕನ್ನಡ ಅರಿಯದ ಫಿಸಿಕಲ್ ಸಯನ್ಸ್ ಅಧ್ಯಾಪಕನಿಗೆ ಎರಡು ತಿಂಗಳೊಳಗೆ ನೇಮಕಾತಿ ನೀಡಬೇಕೆಂಬ ಮಾನವ ಹಕ್ಕು ಆಯೋಗದ ಆದೇಶಕ್ಕೆ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘವು ದಿಗ್ಭ್ರಮೆ ವ್ಯಕ್ತಪಡಿಸಿದೆ.
ಮೂಡಂಬೈಲು ಸರಕಾರಿ ಹೈಸ್ಕೂಲಿನ ಕನ್ನಡ ಮಾಧ್ಯಮ ಫಿಸಿಕಲ್ ಸಯನ್ಸ್ ಅಧ್ಯಾಪಕ ಹುದ್ದೆಗೆ ನೇಮಕಗೊಂಡು ವಿದ್ಯಾರ್ಥಿಗಳ,ರಕ್ಷಕರ,ಕನ್ನಡಿಗರ ಪ್ರತಿಭಟನೆಯಿಂದ ನೇಮಕಾತಿ ಕಳೆದುಕೊಂಡಿದ್ದ ತಿರುವನಂತಪುರದ ಮುಹಮ್ಮದ್ ಷಿಜೀರ್ ನೀಡಿದ ದೂರಿನ ಬಗ್ಗೆ ಮಾನವ ಹಕ್ಕು ಆಯೋಗವು ತೀರ್ಪು ನೀಡಿ ಎರಡು ತಿಂಗಳೊಳಗೆ ಈತನಿಗೆ ನೇಮಕಾತಿ ನೀಡಬೇಕೆಂದು ಆದೇಶಿಸಿದೆ.
ಕಾಸರಗೋಡು ಜಿಲ್ಲೆಯ ಯಾವುದೇ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಈ ರೀತಿಯ ಆದೇಶದ ಹೆಸರಿನಲ್ಲಿ ಕನ್ನಡ ಅರಿಯದ ಅಧ್ಯಾಪಕರನ್ನು ನೇಮಿಸಬಾರದೆಂದು, ಒಬ್ಬ ಅಧ್ಯಾಪಕನ ಹಕ್ಕು ಸಂರಕ್ಷಿಸುವ ಹಿನ್ನೆಲೆಯಲ್ಲಿ ಸಾವಿರಾರು ಕನ್ನಡ ವಿದ್ಯಾರ್ಥಿಗಳ ಹಕ್ಕನ್ನು,ಹಿತವನ್ನು ಬಲಿಕೊಡಬಾರದು ಎಂದು ಸಂಘವು ಹೇಳಿದೆ.ಅಲ್ಲದೆ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘವು ಡಿ.ಡಿ.ಇ ಮತ್ತು ಕೇರಳ ಸರಕಾರವನ್ನು ಮನವಿ ಸಲ್ಲಿಸಿ ಒತ್ತಾಯಿಸಿದೆ.


