ಪೆರ್ಲ: ಕೋವಿಡ್ 19 ಅನ್ಲೋಕ್3 ಪ್ರಕ್ರಿಯೆ ಭಾಗವಾಗಿ ಅಂತರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶ ನೀಡಿದರೂ ಕಾಸರಗೋಡು ಜಿಲ್ಲಾಡಳಿತ ಗಡಿ ಪ್ರದೇಶದಲ್ಲಿ ಅನಗತ್ಯ ನಿರ್ಬಂಧ ಹೇರಿ ಗಡಿ ಭಾಗದ ಜನರಿಗೆ ಹಾಗೂ ಅಂತರಾಜ್ಯ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿದೆ. ಜಿಲ್ಲಾಡಳಿತದ ಜನವಿರೋಧಿ ನೀತಿ ಕೈಬಿಡಬೇಕೆಂದು ಒತ್ತಾಯಿಸಿ ಯುಡಿಎಫ್ ನೇತೃತ್ವದಲ್ಲಿ ವಿವಿಧೆಡೆ ವಿಲ್ಲೇಜ್ ಆಫೀಸ್ ಧರಣಿ ನಡೆಸಿದೆ.
ಎಣ್ಮಕಜೆ, ಬದಿಯಡ್ಕ, ಬೆಳ್ಳೂರು, ಕಾರಡ್ಕ, ಮೊದಲಾದ ವಿಲ್ಲೇಜ್ ಕಛೇರಿ ಮುಂದೆ ಧರಣಿ ನಡೆಸಲಾಯಿತು.ಎಣ್ಮಕಜೆ ವಿಲ್ಲೇಜ್ ಕಛೇರಿ ಮುಂದೆ ನಡೆದ ಧರಣಿಯನ್ನು ಉದ್ಘಾಟಿಸಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ ಎಸ್ ಸೋಮಶೇಖರ್ ಮಾತನಾಡಿ ಅನ್ ಲಾಕ್ ಪ್ರಕ್ರಿಯೆ ಭಾಗವಾಗಿ ಅಂತರಾಜ್ಯ ಪ್ರಯಾಣಕ್ಕೆ ಅನುಮತಿ ನೀಡಿದರೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಕಾಸರಗೋಡು ಜಿಲ್ಲಾಡಳಿತವು ವಿನಾ ಕಾರಣ ಗಡಿಮೂಲಕ ಸಂಚಾರಕ್ಕೆ ನಿರ್ಬಂಧ ಹೇರಿದಾಗ ಇದರ ವಿರುದ್ಧ ಹೋರಾಟಕ್ಕೆ ಮುನ್ನುಗಿದ್ದು ಯುಡಿಎಫ್ .ದಕ್ಷಿಣ ಕನ್ನಡ ಜಿಲ್ಲಾಡಳಿತದ ನಿಲುವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ನಲ್ಲಿ ನೀಡಿದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ನಿಲುವು ಬದಲಾಯಿಸಬೇಕಾಯಿತು. ಇದು ಜನಪರ ಹೋರಾಟದ ಫಲ.ಆದರೆ ಇದೀಗ ಕಾಸರಗೋಡು ಜಿಲ್ಲಾಡಳಿತವು ಅಂತರಾಜ್ಯ ಸಂಚಾರಕ್ಕೆ ನಿರ್ಬಂಧಗಳನ್ನು ಕೈಬಿಡದಿರುವುದು ಖಂಡನಾರ್ಹ.ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಮುಂದೆ ಶಾಸಕರ ಮೂಲಕ ಒತ್ತಡ ಹಾಕಿದರೂ ಕ್ರಮಕೈಗೊಳ್ಳದೆ ಗಡಿಭಾಗದ ಜನರ ಬಗ್ಗೆ ನಿರ್ಲಕ್ಷ್ಯ ತೋರಿದೆ. ಇದರ ವಿರುದ್ಧ ಗಡಿ ಪ್ರದೇಶದಲ್ಲಿರುವ ವಿವಿಧ ವಿಲ್ಲೇಜ್ ಕಛೇರಿ ಮುಂದೆ ಧರಣಿ ನಡೆಸಿದೆ.ಇನ್ನೂ ಕಾಸರಗೋಡು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿದ್ದರೆ ಯುಡಿಎಫ್, ಜಿಲ್ಲಾಡಳಿತ ಕೇಂದ್ರದಲ್ಲಿಯೇ ಹೋರಾಟಕ್ಕೆ ನೇತೃತ್ವ ನೀಡಲಿದೆಯೆಂದು ಅವರು ಎಚ್ಚರಿಕೆ ನೀಡಿದೆ.
ರವೀಂದ್ರನಾಥ ನಾಯಕ್ ಶೇಣಿ ಅಧ್ಯಕ್ಷತೆ ವಹಿಸಿದರು.
ಯುಡಿಎಫ್ ಮುಖಂಡರಾದ ಸಿದ್ದೀಕ್ ಹಾಜಿ ಖಂಡಿಗೆ,ಆಮು ಅಡ್ಕಸ್ಥಳ,ವಿಲ್ಪ್ರಡ್,ಅಯಿಶಾ ಎಎ,
,ಅಬ್ದುಲ್ ರಹಮಾನ್. ಬಿ, ಹಕೀಂ ಖಂಡಿಗೆ, ಅಬ್ದುಲ್ಲಾ ಕುರಡ್ಕ, ಅಶ್ರಫ್ ಅಮೆಕ್ಕಳ, ರಸಾಕ್ ನಲ್ಕ ಮೊದಲಾದವರು ಧರಣಿಗೆ ನೇತ್ರತ್ವ ನೀಡಿದರು.
ಚಿತ್ರ: ಮಾಹಿತಿ :ಗಡಿಪ್ರದೇಶದ ಜನರಿಗೆ ಹಾಗೂ ಅಂತರಾಜ್ಯ ಪ್ರಯಾಣಿಕರಿಗೆ ಅನಗತ್ಯ ನಿರ್ಬಂಧ ಹೇರಿ ಕಿರುಕುಳ ನೀಡುವ ಜಿಲ್ಲಾಡಳಿತದ ನಿಲುವುವಿಗೆದುರಾಗಿ ಯುಡಿಎಫ್ ಎಣ್ಮಕಜೆ ವಿಲ್ಲೇಜ್ ಕಛೇರಿ ಮುಂದೆ ನಡೆಸಿದ ಧರಣಿಯನ್ನು ಡಿಸಿಸಿ ಪ್ರಧಾನ ಕಾರ್ಯದರ್ಶಿ ಜೆ ಎಸ್ ಸೋಮಶೇಖರ್ ಉದ್ಘಾಟಿಸಿದರು.

