ಕಾಸರಗೋಡು: ಕೃಷಿ ವಲಯದತ್ತ ಯುವಜನ ಅತ್ಯಧಿಕ ಪ್ರಮಾಣದಲ್ಲಿ ಆಕರ್ಷಿತರಾಗುತ್ತಿರುವುದು ದೊಡ್ಡ ನಿರೀಕ್ಷೆಗೆ ಕಾರಣವಾಗಿದೆ ಎಂದು ಕೃಷಿ ಸಚಿವ ವಿ.ಎಸ್.ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.
ಕಿನಾನೂರು-ಕರಿಂದಳಂ ಪಂಚಾಯತ್ ನ ಬಿರಿಕುಳಂನಲ್ಲಿ ಆರಂಭಿಸಲಾದ "ಕೃಷಿಕರ ಅಂಗಡಿ" ಯನ್ನು ಸೋಮವಾರ ಆನ್ ಲೈನ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ಸೋಂಕು ಹರಡುತ್ತಿರುವ ಈ ಹಿನ್ನೆಲೆಯಲ್ಲಿ ಕೃಷಿ ಸಂಬಂಧ ಧಾರಾಳ ಘಟಕಗಳನ್ನು ಆರಂಭಿಸಲು ಸಾಧ್ಯವಾಗಿರುವುದು ರಾಜ್ಯದ ಸಾಧನೆಯಾಗಿದೆ ಎಂದವರು ತಿಳಿಸಿದರು.
ಸ್ಥಳೀಯ ಒಕ್ಕೂಟಗಳಲ್ಲದೆ, ಸಾಮಾಜಿಕ ಜಾಲತಾಣಗಳ ಸದುಪಯೋಗದೊಂದಿಗೆ ಕೃಷಿಕ ಒಕ್ಕೂಟಗಳು ಯಶಸ್ವಿಯಾಗ ಮುಂದುವರಿಯುತ್ತಿರುವುದು ಆರೋಗ್ಯ ಪೂರ್ಣ ಬೆಳವಣಿಗೆ. ನಾಡೊಂದರ ಸಮಗ್ರ ಅಭಿವೃದ್ಧಿಗೆ ಕೃಷಿ ಕೇಂದ್ರಿತ ವಲಯದ ಬೆಳವಣಿಗೆ ಪೂರಕವಾಗಿದೆ ಎಂದವರು ತಿಳಿಸಿದರು.
ಜಿಲ್ಲಾ ಕೃಷಿ ಸಹಾಯಕ ನಿರ್ದೇಶಕಿ ವೀಣಾರಾಣಿ, ಪರಪ್ಪ ಎ.ಡಿ.ಎ.ಡಿ.ಎಲ್.ಸುಮಾ, ಕಿನಾನೂರು ಕರಿಂದಳಂ ಕೃಷಿ ಅಧಿಕಾರಿ ನಿಖಿಲ್ ನಾರಾಯಣನ್ ಮೊದಲಾದವರು ಉಪಸ್ಥಿತರಿದ್ದರು.
ಸ್ಥಳೀಯ ಉತ್ಪನ್ನಗಳ ಮಾರಾಟ ಅಂಗಡಿ:
ಕೃಷಿ ಇಲಾಖೆಯ ಸಹಕಾರದೊಂದಿಗೆ ಕಿನಾನೂರು-ಕರಿಂದಳಂ ಪಂಚಾಯತ್ ನ ಕೃಷಿಕರ ಒಕ್ಕೂಟ ನೇತೃತ್ವದಲ್ಲಿ "ಕೃಷಿಕರ ಅಂಗಡಿ" ಸ್ಥಾಪಿಸಲಾಗಿದೆ. ಸ್ಥಳೀಯ ಕೃಷಿ ಉತ್ಪನ್ನಗಳು, ಹಾಲು, ಹಾಲಿನ ಉತ್ಪನ್ನಗಳು, ಜೇನುತುಪ್ಪ, ಚಹಾಪುಡಿ, ಕಾಫಿ ಪುಡಿ, ಏಲಕ್ಕಿ ಸಹಿತ ಉತ್ಪನ್ನಗಳು ಇಲ್ಲಿ ಮಾರಾಟಗೊಳ್ಳುತ್ತಿವೆ.


