ಪತ್ತನಂತಿಟ್ಟು: ಕೋವಿಡ್ ಹಿನ್ನೆಲೆಯಲ್ಲಿ ನಿರ್ಬಂಧ ಹೇರಲಾಗಿದ್ದ ಶಬರಿಮಲೆಗೆ ಇದೀಗ ಭಕ್ತರ ಭೇಟಿಗೆ ಅವಕಾಶ ನೀಡಲು ನಿಬಂಧನೆಗಳನ್ನು ಸಡಿಲಿಸಿ ತಿರುವಾಂಕೂರು ದೇವಸ್ವಂ ಮಂಡಳಿ ಸೋಮವಾರ ನಿರ್ಧರಿಸಿದೆ. ಭಕ್ತರ ಕ್ಷೇತ್ರ ದರ್ಶನಕ್ಕೆ ಸಂಬಂಧಿಸಿ ನಿಯಮ ರೂಪಣೆಗೆ ಮಾರ್ಗದರ್ಶನ ನೀಡಲು ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯನ್ನು ರಚಿಸಲಾಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಎನ್. ವಾಸು ಮಾಧ್ಯಮಗಳಿಗೆ ತಿಳಿಸಿರುವರು. ಉನ್ನತ ಮಟ್ಟದ ಸಮಿತಿಯ ವರದಿಯ ಆಧಾರದ ಮೇಲೆ ಪ್ರವೇಶದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಮುಂಬರುವ ತುಲಾ ತಿಂಗಳೊಳಗೆ ಸೀಮಿತ ಸಂಖ್ಯೆಯ ಭಕ್ತರನ್ನು ಪ್ರವೇಶಿಸಲು ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿದೆ. ಹಿಂದಿನಂತೆ ಭಕ್ತರು ಸಾಲುಗಟ್ಟಿ ಪ್ರವೇಶಿಸಲು ಆಸ್ಪದ ನೀಡಲಾಗುವುದಿಲ್ಲ.
ವರ್ಚುವಲ್ ಕ್ಯೂ ಸಿಸ್ಟಮ್ ಮೂಲಕ ಮಾತ್ರ ಪ್ರವೇಶ ಅನುಮತಿ ನೀಡಲಾಗುತ್ತದೆ. ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದು ಸೇರಿದಂತೆ ಕೋವಿಡ್ ಮಾನದಂಡಗಳಿಗೆ ಅನುಸಾರವಾಗಿ ಮಾತ್ರ ಪ್ರವೇಶವನ್ನು ನೀಡಲಾಗುತ್ತದೆ.
ಗೃಹ ಕಾರ್ಯದರ್ಶಿ ಮತ್ತು ಆರೋಗ್ಯ ಕಾರ್ಯದರ್ಶಿಯನ್ನು ಒಳಗೊಂಡ ಸಮಿತಿ ಒಂದು ವಾರದೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ. ಇದರ ಆಧಾರದ ಮೇಲೆ ಶಬರಿಮಲೆ ಯಾತ್ರೆಗೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಎನ್ ವಾಸು ತಿಳಿಸಿದ್ದಾರೆ.