HEALTH TIPS

ಯಕ್ಷಗಾನದಲ್ಲಿ ನಾಟ್ಯ, ಹಿಮ್ಮೇಳದಷ್ಟೇ ವಾಚಿಕವೂ ಮುಖ್ಯ ; ಚಂಬಲ್ತಿಮಾರ್- ಆರ್ಲಪದವಿನಲ್ಲಿ ಯಕ್ಷಗಾನ ನಾಟ್ಯ, ತಾಳಮದ್ದಳೆ ತರಬೇತಿ ಆರಂಭ

    

      ಪೆರ್ಲ: ಯಕ್ಷಗಾನದಲ್ಲಿ ಪ್ರಸಕ್ತ ನಾಟ್ಯ ಮತ್ತು ಹಿಮ್ಮೇಳಕ್ಕಷ್ಟೇ ಅತಿ ಪ್ರಧಾನ್ಯತೆ ನೀಡಲಾಗುತ್ತಿದ್ದು, ವಾಚಿಕ ಮತ್ತು ಇತರ ವಿಭಾಗಗಳು ಇತ್ತೀಚಿನ ದಶಕದಲ್ಲಿ ನಿರ್ಲಕ್ಷಿತವಾಗತೊಡಗಿದೆ. ಇದು ವಿಷಾದಕರ. ಒಂದು ಕಲೆಯಲ್ಲಿ ಕಲೆ ಮತ್ತು ಕಲಾವಿದ ಯಶಸ್ವಿಯಾಗಬೇಕಿದ್ದರೆ, ಪರಿಪೂರ್ಣ ಎನಿಸಬೇಕಿದ್ದರೆ ಸರ್ವಾಂಗಗಳಲ್ಲೂ ಕನಿಷ್ಠ ಪರಿಣತಿಯ ಸಮುಚಿತ ಸಾಧನೆ ಮಾಡಬೇಕು. ಕೇವಲ ಒಂದು ವಿಭಾಗದಲ್ಲಿ ಮಾತ್ರ ಮೆರೆದು ಇತರ ವಿಭಾಗಗಳು ಊನವಾದರೆ ಅದು ಅಂಗವೈಕಲ್ಯಕ್ಕೆ ಸಮಾನ. ಹೀಗಾಗಿ ಯಕ್ಷಗಾನಲ್ಲಿ ನಾಟ್ಯಗಾರಿಕೆಯಷ್ಟೇ ಪ್ರಧಾನ್ಯತೆ ಭಾಷೆ ಮತ್ತು ಕಥನಕಲೆ ವಿಸ್ತರಣೆಯ ಸಂಭಾಷಣೆಗೂ ನೀಡಬೇಕು. ಪ್ರಸ್ತುತ ಯಕ್ಷಗಾನ ನಾಟ್ಯ ತರಬೇತಿಯ ಜತೆಯಲ್ಲೇ ಆಸಕ್ತರಿಗೆ ತಾಳಮದ್ದಳೆ ಅಭ್ಯಾಸ ತರಗತಿಯನ್ನೂ ಆರಂಭಿಸಿರುವುದು ಭವಿಷ್ಯದ ದೃಷ್ಟಿಯಲ್ಲಿ ಮಾದರಿ ಮತ್ತು ಅತ್ಯಂತ ಶ್ಲಾಘನೀಯ ಹೆಜ್ಜೆ ಎಂದು ಕಣಿಪುರ ಯಕ್ಷಗಾನ ಮಾಸಪತ್ರಿಕೆ ಪ್ರಧಾನ ಸಂಪಾದಕ, ಲೇಖಕ ಎಂ.ನಾ. ಚಂಬಲ್ತಿಮಾರ್ ನುಡಿದರು.


        ಕಲಾವಿದ, ನಾಟ್ಯಗುರು ಬಾಲಕೃಷ್ಣ ಪೂಜಾರಿ ಉಡ್ಡಂಗಳ ಇವರ ನೇತೃತ್ವದಲ್ಲಿ ಪುತ್ತೂರು ತಾಲೂಕಿನ ಆರ್ಲಪದವು ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಕಲಾಸಂಘದ 16ನೇ ವರ್ಷದ ಉಚಿತ ಯಕ್ಷಗಾನ ನಾಟ್ಯತರಗತಿ ಮತ್ತು ನೂತನವಾಗಿ ಆರಂಭಿಸಿದ ತಾಳಮದ್ದಳೆ ಅಭ್ಯಾಸ ತರಗತಿಯನ್ನು ಸೆ.6ರಂದು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

     ಕೊರೋನೋತ್ತರ ದಿನಗಳಲ್ಲಿ ಕಲೆಯ ಭವಿಷ್ಯವೇ ಮಂಕಾಗಿದೆ. ಆದರೆ ನಾಳೆಗಳನ್ನು ನಿರ್ಮಿಸುವ, ಭವಿಷ್ಯವನ್ನು ಕಟ್ಟುವ ಎದೆಗಾರಿಕೆ ಮತ್ತು ಅಚಲ ಆತ್ಮವಿಶ್ವಾಸ ನಮ್ಮಲ್ಲಿರಬೇಕು. ಹಿಂದೆ ಯಕ್ಷಗಾನವನ್ನು ಕಟ್ಟಿ ಬೆಳೆಸಿರುವುದು ಅತ್ಯಂತ ಗ್ರಾಮೀಣ ಹಿನ್ನೆಲೆಯವರೆಂಬುದೇ ನಮಗೆ ಸ್ಪೂರ್ತಿಯಾಗಬೇಕೆಂದು ಅವರು ನುಡಿದರು.

     ಆರ್ಲಪದವು ಶ್ರೀಸುಬ್ರಹ್ಮಣ್ಯೇಶ್ವರ ಭಜನಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಪುತ್ತೂರಿನ ನ್ಯಾಯವಾದಿ ಕೃಪಾಶಂಕರ್ ಪಾಣಾಜೆ ಅಧ್ಯಕ್ಷತೆ ವಹಿಸಿದರು. ಉದ್ಯಮಿ ಉಪೇಂದ್ರ ಬಲ್ಯಾಯ, ವಿಟ್ಲ ಜೇಸಿಸ್ ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲ ಜಯರಾಮ ರೈ ದಂಬೆಕಾನ, ಅಧ್ಯಾಪಕ ಚಂದ್ರಹಾಸ ಕಟುಕುಕ್ಕೆ,  ಕಾಟುಕುಕ್ಕೆ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಾಬು ರೈ ಕೋಟೆ, ಪಾಣಾಜೆ ಕೃಷಿಪತ್ತನ ಸಹಕಾರಿ ಸಂಘದ ಸದಸ್ಯ ರವೀಂದ್ರ ಭಂಡಾರಿ, ದೇವಿಪ್ರಸಾದ ಬಯಿಲಾಡಿ ಅತಿಥಿಗಳಾಗಿ ಪಾಲ್ಗೊಂಡು  ಶುಭ ಹಾರೈಸಿದರು. ಸಂಘದ ಉಪಾಧ್ಯಕ್ಷ ಸತ್ಯನಾರಾಯಣ ಅಡಿಗ ಸ್ವಾಗತಿಸಿದರು. ನಾಟ್ಯಗುರು ಬಾಲಕೃಷ್ಣ ಪೂಜಾರಿ ಉಡ್ಡಂಗಳ ವಂದಿಸಿದರು. ಪ್ರಧಾಪ್ಯಕ ಸುರೇಶ್ ಕುಮಾರ್ ಕಡಂದೇಲು ನಿರೂಪಿಸಿದರು.

        ಸುಮಾರು 35ರಷ್ಟು ನೂತನ ವಿದ್ಯಾರ್ಥಿಗಳು ನಾಟ್ಯ ಶಿಕ್ಷಣ ತರಗತಿಗೆ ಸೇರ್ಪಡೆಗೊಂಡಿದ್ದಾರೆ. ಸಂಘದ ಸದಸ್ಯರು ಸಹಿತ ಆಸಕ್ತರು ತಾಳಮದ್ದಳೆ ಅಭ್ಯಾಸ ತರಗತಿಯಲ್ಲಿ ಪಾಲ್ಗೊಂಡರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries