ಕುಂಬಳೆ: ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ಎಸಗಿರುವ ಜುವೆಲ್ಲರಿ ಹಗರಣ ಸಂಬಂಧ ಶಾಸಕರ ವಿರುದ್ದ ಬೃಹತ್ ಮಟ್ಟದ ಪ್ರತಿಭಟನೆಗಳು ವ್ಯಕ್ತವಾಗುತ್ತಿದ್ದು, ಸೀತಾಂಗೋಳಿಯ ಮಾವೇಲಿ ಅಂಗಡಿಯ ಉದ್ಘಾಟನಾ ಸಮಾರಂಭಕ್ಕೆ ಶನಿವಾರ ಬೆಳಿಗ್ಗೆ ಆಗಮಿಸಿದ ಶಾಸಕ ಎಂ.ಸಿ, ಖಮರುದ್ದೀನ್ ವಿರುದ್ಧ ಸಿಐಟಿಯು ಕಪ್ಪು ಧ್ವಜ ಪ್ರದರ್ಶಿಸಿ ಪ್ರತಿಭಟಿಸಿದ್ದು ಈ ವೇಳೆ ಸಂಘರ್ಷ ಸ್ಥಿತಿ ನಿರ್ಮಾಣವಾಯಿತು. ಈ ಸಂಬಂಧ ಕುಂಬಳೆ ಪೆÇಲೀಸರು ಸಿಪಿಎಂ ಸ್ಥಳೀಯ ಸಮಿತಿ ಸದಸ್ಯ ಸಂತೋಷ್ ಕುಮಾರ್ ಸೇರಿದಂತೆ 12 ಜನರನ್ನು ಬಂಧಿಸಿದ್ದಾರೆ.
ಮಾವೆಲಿ ಅಂಗಡಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಶಾಸಕರು ತಮ್ಮ ಕಾರಿನಿಂದ ಇಳಿದು ಹೊರಬರುತ್ತಿದ್ದಂತೆ, ಲಾರಿ ಸಹಿತ ಇತರ ವಾಹನಗಳಲ್ಲಿ ಆಗಮಿಸಿದ ಸುಮಾರು 10 ರಷ್ಟು ಸಿಐಟಿಯು ಕಾರ್ಯಕರ್ತರ ತಂಡ ಕಪ್ಪು ಧ್ವಜಗಳು ಮತ್ತು ಘೋಷಣೆಗಳೊಂದಿಗೆ ಶಾಸಕರ ಕಾರಿನ ಕಡೆಗೆ ಧಾವಿಸಿತು. ಗಲಭೆ ಸೃಷ್ಟಿಸುವ ರೀತಿಯಲ್ಲಿದ್ದ ಕಾರ್ಯಕರ್ತರ ಘೋಷಣೆಗಳನ್ನು ಮತ್ತು ಮುನ್ನುಗ್ಗಿ ಬರುವುದನ್ನು ಪೆÇಲೀಸರು ತಡೆದರು. ಈ ಮಧ್ಯೆ ಶಾಸಕರೊಂದಿಗೆ ಇದ್ದ ಕೆಲವು ಜನರು ಮತ್ತು ಸ್ಥಳದಲ್ಲಿದ್ದ ಕೆಲವರು ಶಾಸಕರು ಮತ್ತು ಯುಡಿಎಫ್ ಪರ ಘೋಷಣೆಗಳನ್ನು ಕೂಗಿದರು. ಬಳಿಕ ಶಾಸಕರನ್ನು ಸುರಕ್ಷಿತರಾಗಿ ವೇದಿಕೆಗೆ ಕರೆದೊಯ್ಯಲಾಯಿತು. ಶಾಸಕರ ರಾಜೀನಾಮೆ ಕೋರಿ ಸಿಐಟಿಯು ಕಾರ್ಯಕರ್ತರು ದೀರ್ಘ ಅವಧಿ ಅಲ್ಲೇ ಇದ್ದು ಘೋಷಣೆಗಳನ್ನು ಕೂಗಿದ ಬಳಿಕ ಹಿಂತಿರುಗಿದರು.


