ನವದೆಹಲಿ: ಕಳೆದ ತಿಂಗಳು ಕರೋನವೈರಸ್ ಸೋಂಕಿಗೊಳಗಾಗಿದ್ದ ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಅವರು ತಮ್ಮ 92 ನೇ ವಯಸ್ಸಿನಲ್ಲಿ ಗುರುವಾರ ನಿಧನರಾದರು ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಪಟೇಲ್ ಅವರನ್ನು ಗುರುವಾರ ಬೆಳಿಗ್ಗೆ ಗುಜರಾತ್ನ ಅಹಮದಾಬಾದ್ ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರಿಗೆ ಅವರ ಜೀವ ಉಳಿಸಲಾಗಲಿಲ್ಲ.
ಅವರ ಮರಣದ ವಿಷಯ ತಿಳಿಯುತ್ತಿರುವಂತೆ ಹಲವು ರಾಜಕಾರಣಿಗಳು ತಮ್ಮ ದುಃಖವನ್ನು ವ್ಯಕ್ತಪಡಿಸಿರುವರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಟೇಲ್ ಅವರನ್ನು 'ರಾಜಕೀಯ ಪ್ರಬಲ' ಎಂದು ಕರೆದಿದ್ದು ಜನರಿಗೆ ಸೇವೆ ಸಲ್ಲಿಸುವ ಅವರ ಅಚಲ ಬದ್ಧತೆಗೆ ಅವರನ್ನು ಸದಾ ಸ್ಮರಿಸಲಾಗುವುದು ಎಂದು ಹೇಳಿದರು.
"ಕೇಶು ಭಾಯ್ ಪಟೇಲ್ ಜಿ ಅವರು ಸಾರ್ವಜನಿಕ ಜೀವನದಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಪರಿಣಾಮಕಾರಿ ಆಡಳಿತಗಾರರಾಗಿದ್ದರು. ಅಗಲಿದ ನಾಯಕನಿಗೆ ನನ್ನ ಗೌರವವನ್ನು ಅರ್ಪಿಸುತ್ತೇನೆ. ಈ ದುಃಖದ ಸಂದರ್ಭ ಅವರ ಕುಟುಂಬ ಮತ್ತು ಹಿತೈಷಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
"ಗುಜರಾತ್ ನ ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ವ್ಯಾಪ್ತಿಯಲ್ಲಿ ಗೌರವಿಸಲ್ಪಟ್ಟ ಗುಜರಾತ್ ರಾಜಕೀಯ ಚರಿತ್ರೆಯಲ್ಲಿ ಉಲ್ಲೇಖಾರ್ಹ ನಾಯಕನೋರ್ವ ಈ ಮೂಲಕ ಕಣ್ಮರೆಯಾದರು. ತಳಮಟ್ಟದ ನಾಯಕ, ಗುಜರಾತ್ಗೆ ಅವರು ನೀಡಿದ ಕೊಡುಗೆ ಮತ್ತು ಜನರಿಗೆ ಸೇವೆ ಸಲ್ಲಿಸುವ ಅವರ ಅಚಲ ಬದ್ಧತೆಯನ್ನು ಎಂದಿಗೂ ಮರೆಯಲಾಗುವುದಿಲ್ಲ. ಸಂತಾಪಗಳು" ಎಂದು ಬಿಜೆಪಿ ನಾಯಕ ಪಿ.ಸಿ ಮೋಹನ್ ತಿಳಿಸಿದ್ದಾರೆ.
1928 ಜುಲೈ 24 ರಂದು ಜನಿಸಿದ ಕೇಶುಭಾಯ್ ಪಟೇಲ್ 1995 ಮತ್ತು 1998 ರಿಂದ 2001 ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಜನ ಸಂಘದ ಕಾರ್ಯಕರ್ತನಾಗಿ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಪಟೇಲ್ ಅವರು 1980 ರಿಂದ ಭಾರತೀ ಜನತಾಪಕ್ಷದ ಪ್ರಭಾವಿ ನಾಯಕರಾಗಿದ್ದರು. ಆದಾಗ್ಯೂ, ಅವರು 2012 ರಲ್ಲಿ ಕೇಸರಿ ಪಕ್ಷವನ್ನು ತೊರೆದು ತಮ್ಮದೇ ಪಕ್ಷವಾದ ಗುಜರಾತ್ ಪರಿವರ್ತನ ಪಕ್ಷವನ್ನು (ಜಿಪಿಪಿ) ರೂಪನೀಡಿ ಮುನ್ನಡೆಸಿದ್ದರು.
2012 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಟೇಲ್ ಅವರ ಪಕ್ಷ ಕಳಪೆ ಪ್ರದರ್ಶನ ನೀಡಿತು. 2014 ರಲ್ಲಿ ಅವರು ಜಿಪಿಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಅವರು ಅನಾರೋಗ್ಯವನ್ನು ಉಲ್ಲೇಖಿಸಿ ಗುಜರಾತ್ ವಿಧಾನಸಭೆಯ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು.





