ಅಹ್ಮದ್ನಗರ: ಪೂರ್ವ ಲಡಾಖ್ ಗಡಿಯಲ್ಲಿ ಚೀನಾ ಸೇನೆ ಉಪಟಳ ನೀಡುತ್ತಿರುವ ಬೆನ್ನಲ್ಲೇ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ಲೇಸರ್ ಗೈಡೆಡ್ ಆ್ಯಂಟಿ ಟ್ಯಾಂಕ್ ಕ್ಷಿಪಣಿ ಯಶಸ್ವಿ ಪರೀಕ್ಷೆ ನಡೆಸಿದೆ.
ಮಹಾರಾಷ್ಟ್ರದ ಅಹ್ಮದ್ನಗರದಲ್ಲಿರುವ ಕೆಕೆ ರೇಂಜರ್ಸ್, ಆರ್ಮರ್ಡ್ ಕಾರ್ಪ್ಸ್ ಸೆಂಟರ್ ಮತ್ತು ಸ್ಕೂಲ್(ಎಸಿಸಿ ಮತ್ತು ಎಸ್)ನಲ್ಲಿ ಲೇಸರ್ ಗೈಡೆಡ್ ಆ್ಯಂಟಿ ಟ್ಯಾಂಕ್ ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆ ಎರಡನೇ ಬಾರಿಗೂ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಡಿಆರ್ಡಿಒ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತೀಯ ಸೇನೆಯ ಎಂಬಿಟಿ ಅರ್ಜುನ್ ಟ್ಯಾಂಕ್ನಿಂದ ಉಡಾಯಿಸಲಾದ ಎಟಿಜಿಎಂ ಕ್ಷಿಪಣಿ 5 ಕಿ.ಮೀ ದೂರದ ಗುರಿಯನ್ನು ಯಶಸ್ವಿಯಾಗಿ ತಲುಪಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಸ್ಫೋಟಕ ರಿಯಾಕ್ಟಿವ್ ಆರ್ಮರ್(ಇಆರ್ಎ) ರಕ್ಷಿತ ಶಸ್ತ್ರಸಜ್ಜಿತ ವಾಹನಗಳನ್ನು ಉಡಾಯಿಸಬಲ್ಲ ಸಾಮರ್ಥ್ಯ ಈ ಕ್ಷಿಪಣಿಗಿದ್ದು, ಪ್ರಸ್ತುತವಾಗಿ ಭಾರತೀಯ ಸೇನೆಯ ಎಂಬಿಟಿ ಅರ್ಜುನ್ ಟ್ಯಾಂಕ್ಗಳಲ್ಲಿ ಇದರ ಬಳಕೆ ಮಾಡಲಾಗುವುದು ಎಂದು ಡಿಆರ್ಡಿಒ ಸ್ಪಷ್ಟಪಡಿಸಿದೆ.
ಭಾರತೀಯ ರಕ್ಷಣಾ ಪಡೆಗಳಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನಿರ್ಮಿಸುವುದರಲ್ಲಿ ನಿರತವಾಗಿರುವ ಡಿಆರ್ಡಿಒ, ಅತ್ಯಾಧುನಿಕ ಕ್ಷಿಪಣಿ ತಂತ್ರಜ್ಞಾನವನ್ನು ಸಂಶೋಧಿಸುವುದರಲ್ಲಿ ಚಾಣಾಕ್ಷತೆ ಹೊಂದಿದೆ.