ಪತ್ತನಂತಿಟ್ಟು: ಮಂಡಲ-ಮಕರ ಬೆಳಕು ತೀರ್ಥಯಾತ್ರೆಗೆ ಸಂಬಂಧಿಸಿದಂತೆ ಶಬರಿಮಲೆಯ ಪಂಪಾ, ನೀಲಕ್ಕಲ್ ಮತ್ತು ಸನ್ನಿಧಾನಂ ಪ್ರದೇಶಗಳಲ್ಲಿ ಅಬಕಾರಿ ದಾಳಿ ತೀವ್ರಗೊಂಡಿದೆ. ಈ ನಿಟ್ಟಿನ ಸಮಗ್ರ ಕಾರ್ಯಾಚರಣೆಗಳಿಗಾಗಿ ಅಬಕಾರಿ ದಳದ ತಾತ್ಕಾಲಿಕ ಶ್ರೇಣಿ ಕಚೇರಿಗಳು ನೀಲಕ್ಕಲ್, ಪಂಪಾ ಮತ್ತು ಸನ್ನಿಧಾನಂನಲ್ಲಿ ಕಾರ್ಯನಿರ್ವಹಿಸುತ್ತಿವೆ.
ಪಂಪಾದಲ್ಲಿ ಸಹಾಯಕ ಅಬಕಾರಿ ಆಯುಕ್ತರು ಈ ಚಟುವಟಿಕೆಗಳನ್ನು ಸಂಯೋಜಿಸುತ್ತಾರೆ. ನೀಲಕ್ಕಲ್, ಪಂಪಾ ಮತ್ತು ಸನ್ನಿಧಾನಂನಲ್ಲಿ ಅಬಕಾರಿ ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಅಬಕಾರಿ ಇನ್ಸ್ಪೆಕ್ಟರ್ ಸೇರಿದಂತೆ ಒಟ್ಟು 56 ಉದ್ಯೋಗಿಗಳು ದಿನದ 24 ಗಂಟೆಯೂ ಕರ್ತವ್ಯದಲ್ಲಿದ್ದಾರೆ. ಅಬಕಾರಿ ಗುಪ್ತಚರ ಘಟಕವೂ ಕಾರ್ಯನಿರ್ವಹಿಸುತ್ತಿದೆ.
ಕಳೆದ ಕೆಲವು ದಿನಗಳಲ್ಲಿ ಪಂಪಾ, ನೀಲಕ್ಕಲ್ ಮತ್ತು ಸನ್ನಿಧಾನಂನಲ್ಲಿ ವಿವಿಧ ದಾಳಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಹೊಂದಿರುವ ಮತ್ತು ಬಳಸಿದ ಒಟ್ಟು 40 ಪ್ರಕರಣಗಳು ದಾಖಲಾಗಿವೆ. ಚಲಕಾಯಂ ತಪ್ಪಲಿನ ಅರಣ್ಯ ಪ್ರದೇಶಗಳಲ್ಲಿ, ಐ.ಬಿ(ಇನ್ವೆಸ್ಟಿಗೇಶನ್ ಬ್ಯೂರೋ) ಜೊತೆಯಲ್ಲಿ ಶೋಧ ನಡೆಸಲಾಯಿತು.
ಮುಂದಿನ ದಿನಗಳಲ್ಲಿ ಆಲ್ಕೋಹಾಲ್, ಡ್ರಗ್ಸ್ ಮತ್ತು ತಂಬಾಕು ಉತ್ಪನ್ನಗಳ ವಿರುದ್ಧ ದಾಳಿ ನಡೆಸಲಾಗುವುದು ಎಂದು ಪಂಪಾ ಸಹಾಯಕ ಅಬಕಾರಿ ಆಯುಕ್ತ ಎಂ.ಎನ್.ಶಿವಪ್ರಸಾದ್ ತಿಳಿಸಿದ್ದಾರೆ. ಅಬಕಾರಿ ಸರ್ಕಲ್ ಇನ್ಸ್ಪೆಕ್ಟರ್ ವಿ. ರೋಬರ್ಟ್ ಅವರ ನೇತೃತ್ವದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ಗಳಾದ ಮನೋಜ್ ಕುಮಾರ್ ಮತ್ತು ಮೋಹನನ್ ನಾಯರ್, ಅಬಕಾರಿ ಇನ್ಸ್ಪೆಕ್ಟರ್ಗಳಾದ ಮಧುಸೂದನನ್ ಪಿಳ್ಳೈ ಮತ್ತು ಜಿ.ಎಸ್. ಪ್ರಶಾಂತ್, ಬಿ. ವಿಷ್ಣು ಮತ್ತು ಐ.ಬಿ ಇನ್ಸ್ಪೆಕ್ಟರ್ ಜಲಾಲುದ್ದೀನ್ ಕುಂಞÂ ತಂಡದ ಉಸ್ತುವಾರಿ ನಿರ್ವಹಿಸುತ್ತಿರುವರು.
ಆಲ್ಕೋಹಾಲ್, ಡ್ರಗ್ಸ್ ಮತ್ತು ತಂಬಾಕು ಉತ್ಪನ್ನಗಳ ಬಗ್ಗೆ ದೂರುಗಳನ್ನು ಈ ಕೆಳಗಿನ ಸಂಖ್ಯೆಗಳಿಗೆ ತಿಳಿಸಬಹುದು. ಅಬಕಾರಿ ಶ್ರೇಣಿ ಕಚೇರಿ, ನೀಲಕ್ಕಲ್ - 04735205010, ಅಬಕಾರಿ ಶ್ರೇಣಿ ಕಚೇರಿ, ಪಂಪಾ - 04735203432, ಅಬಕಾರಿ ಶ್ರೇಣಿ ಕಚೇರಿ, ಸನ್ನಿಧಾನಂ - 04735202203.