ಕಾನ್ಪುರ: ರಷ್ಯಾದ ಸ್ಪುಟ್ನಿಕ್-ವಿ ಮೊದಲ ಹಂತದ ಲಸಿಕೆಯು ಮುಂದಿನ ವಾರದ ವೇಳೆಗೆ ಇಲ್ಲಿನ ಗಣೇಶ ಶಂಕರ ವಿದ್ಯಾರ್ಥಿ ವೈದ್ಯಕೀಯ ಕಾಲೇಜಿಗೆ ಬರಲಿದೆ.
ಇಲ್ಲಿ ಈ ಲಸಿಕೆಯ ಎರಡು ಮತ್ತು ಮೂರನೇ ಹಂತದ ಮಾನವನ ಮೇಲಿನ ಪ್ರಯೋಗ ನಡೆಯಲಿದೆ.
ಡಾ.ರೆಡ್ಡಿಸ್ ಲ್ಯಾಬೊರೇಟರಿಯು ಲಸಿಕೆಯ ಮಾನವನ ಮೇಲಿನ ಪ್ರಯೋಗಕ್ಕೆ ಇತ್ತೀಚೆಗೆ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶಕರ (ಡಿಸಿಜಿಐ) ಅನುಮತಿ ಪಡೆದಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಮುಂದಿನ ವಾರದಿಂದ ಲಸಿಕೆಯ ಮಾನವನ ಮೇಲಿನ ಪ್ರಯೋಗ ಶುರುವಾಗಲಿದೆ' ಎಂದು ಗಣೇಶ ಶಂಕರ ವಿದ್ಯಾರ್ಥಿ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಆರ್.ಬಿ.ಕಮಲ್ ಹೇಳಿದ್ದಾರೆ.
'ಈಗಾಗಲೇ 180 ಮಂದಿ ಸ್ವಯಂ ಪ್ರೇರಿತವಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಸಂಶೋಧನಾ ವಿಭಾಗದ ಮುಖ್ಯಸ್ಥ ಸೌರಭ್ ಅಗರವಾಲ್ ಅವರು ಯಾರಿಗೆ ಎಷ್ಟು ಪ್ರಮಾಣದ ಲಸಿಕೆ ನೀಡಬೇಕೆಂಬುದನ್ನು ನಿರ್ಧರಿಸಲಿದ್ದಾರೆ. ಒಬ್ಬರಿಗೆ ಒಂದು ಡೋಸ್ ನೀಡಿ ಅವರ ಮೇಲೆ ನಿಗಾ ಇಡಲಾಗುತ್ತದೆ. ಅವಶ್ಯವಿದ್ದವರಿಗೆ ಮತ್ತೆ ಲಸಿಕೆ ಕೊಡಲಾಗುತ್ತದೆ. ರೋಗಿಗಳ ಪರಿಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ. ಸಂಗ್ರಹಿಸಿದ ದತ್ತಾಂಶಗಳಿಂದ ಲಸಿಕೆಯು ಯಶಸ್ವಿಯಾಗಿದೆಯೇ ಇಲ್ಲವೇ ಎಂಬುದನ್ನು ನಿರ್ಧರಿಸಲಾಗುತ್ತದೆ' ಎಂದು ಅವರು ನುಡಿದಿದ್ದಾರೆ.
'20 ರಿಂದ 70 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಲಸಿಕೆಯನ್ನು ಸಂರಕ್ಷಿಸಲಾಗುತ್ತದೆ. ಕಾಲೇಜಿನ ಎಥಿಕ್ ಸಮಿತಿಯೂ ಲಸಿಕೆಯ ಪ್ರಯೋಗಕ್ಕೆ ಅನುಮತಿ ಕೊಟ್ಟಿದೆ' ಎಂದೂ ಅವರು ಮಾಹಿತಿ ನೀಡಿದ್ದಾರೆ.